
ಜಕಾರ್ತಾ[ಆ.18]: ಅತೀ ವೇಗವಾಗಿ ಮುಳುಗುತ್ತಿರುವ ರಾಜಧಾನಿ ಎಂಬ ಭೀತಿಗೆ ಒಳಗಾಗಿರುವ ಜಕಾರ್ತಾದಿಂದ ತನ್ನ ರಾಜಧಾನಿಯನ್ನು ಬದಲಿಸಲು ಇಂಡೋನೇಷ್ಯಾ ನಿರ್ಧರಿಸಿದೆ. ಈ ಕುರಿತು ಅಧ್ಯಕ್ಷ ಜೋಕೋ ವಿಡುಡು ಅವರು ಸಂಸತ್ತಿನಲ್ಲಿ ಅಧಿಕೃತವಾಗಿ ಪ್ರಸ್ತಾಪ ಮಾಡುವ ಮೂಲಕ ರಾಜಧಾನಿ ಬದಲಾವಣೆಗೆ ಸಂಸತ್ತಿನ ಅನುಮತಿ ಕೋರಿದ್ದಾರೆ. ಇದರೊಂದಿಗೆ ಅತ್ಯಂತ ಜನದಟ್ಟಣೆಯ ಜಕಾರ್ತಾದ ಬದಲಿಗೆ ಜಾವಾ ದ್ವೀಪದ ಬೋರ್ನಿಯೋಗೆ ರಾಜಧಾನಿ ವರ್ಗಾಯಿಸುವ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ.
ಬದಲಾವಣೆ ಏಕೆ?
ಅತೀ ವೇಗವಾಗಿ ಮುಳುಗುತ್ತಿರುವ ಮುಳುಗುತ್ತಿರುವ ನಗರಗಳ ಪೈಕಿ ಮಂಚೂಣಿಯಲ್ಲಿರುವ ಜಕಾರ್ತಾದ ಮೂರನೇ ಒಂದು ಭಾಗ 2050 ರ ವೇಳೆ ಸಂಪೂರ್ಣವಾಗಿ ಮುಳುಗಡೆಯಾಗಲಿದೆ. ಶೇ.95ರಷ್ಟುಭಾಗವನ್ನು ನೀರು ಆವರಿಸಿಕೊಳ್ಳಲಿದೆ ಎಂದು ವಿಜ್ಞಾನಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಸಮುದ್ರ ತಟದಲ್ಲಿರುವ ಜಕಾರ್ತಾ, ಹಲವು ದಶಕಗಳಿಂದ ಅತಿಯಾದ ಮಣ್ಣಿನ ಸವಕಳಿ, ಸಮುದ್ರದ ಮಟ್ಟಏರಿಕೆ, ಹವಮಾನ ವೈಪರೀತ್ಯ, ಸಾಲು ಸಾಲು ಭೂಕಂಪ ಹಾಗೂ ಸುನಾಮಿಯಿಂದಾಗಿ, ಸೂಕ್ತ ಯೋಜನೆ ಇಲ್ಲದೆ ನಗರ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದು ಸೇರಿ ನಾನಾ ರೀತಿಯ ಸಮಸ್ಯೆಗೆ ಸಿಲುಕಿಕೊಂಡಿದೆ. ಇನ್ನು ಭೂಕಂಪ ವಲಯದಲ್ಲಿರುವ ಜಕಾರ್ತಾ 13 ನದಿಗಳ ಸಂಗಮ ಸ್ಥಳವಾಗಿದ್ದು, ವಿಪರೀತ ವಾಹನ ದಟ್ಟನೆ ಹಾಗೂ ಅವೈಜ್ಞಾನಿಕ ನಗರ ರಚನೆಯೇ ಈಗ ಮುಳುವಾಗಿದೆ. ಹಾಗಾಗಿ ಇಂಡೋನೇಷ್ಯಾಕ್ಕೆ ರಾಜಧಾನಿ ಬದಲಾವಣೆ ಅನಿವಾರ್ಯವಾಗಿದೆ.
ನಿಮಗೆ ಗೊತ್ತಿರದ ಜಕಾರ್ತಾ
2.3 ಕೋಟಿ: ಜಕಾರ್ತಾ ಜನಸಂಖ್ಯೆ
150 ಸೆಂ.ಮಿ- ಕಳೆದ 10 ವರ್ಷದಲ್ಲಿ ಜಕಾರ್ತಾ ಇಷ್ಟುಮುಳುಗಿದೆ.
489- ಇಷ್ಟುವರ್ಷ ಹಳೆಯ ನಗರ
580- ದಿನಂಪ್ರತಿ ಜಕಾರ್ತಾ ರೈಲು ನಿಲ್ದಾಣದಲ್ಲಿ ಕಾರ್ಯಾಚರಿಸುವ ರೈಲುಗಳ ಸಂಖ್ಯೆ
ಶೇ.80: ಜಕಾರ್ತಾದ ಒಟ್ಟು ಜನಸಂಖ್ಯೆಯಲ್ಲಿ ಇಷ್ಟುಮಂದಿ ನದಿ ದಡದಲ್ಲಿ ವಾಸವಿದ್ದಾರೆ
3- ವಿಶ್ವದ ಇಷ್ಟನೇ ಅತೀ ಕೊಳಚೆ ನಗರ
ಶೇ. 40- ಸಮುದ್ರ ಮಟ್ಟಕ್ಕಿಂತ ಕೆಳಗಿರುವ ವಸತಿ ಪ್ರದೇಶ
ಮುಳುಗುವ ನಗರ, ಅದೃಷ್ಟನಗರಿ, ಅಪರಾಧ ನಗರಿ ಎಂದು ಕರೆಸಿಕೊಳ್ಳುವ ವಿಶ್ವದ ಏಕೈಕ ನಗರ
ವಿಶ್ವದಲ್ಲೇ ಅತೀ ಹೆಚ್ಚು ಮಾಲ್ಗಳಿರುವ ನಗರ
ಜನಸಂಖ್ಯೆಗಿಂತಲೂ ಹೆಚ್ಚಿನ ವಾಹನಗಳಿರುವ ನಗರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.