ಕರ್ನಾಟಕಕ್ಕೆ ಬಂದು ಹೋದ ಮೇಲೆ ಬಿಜೆಪಿ ಪರಿಸ್ಥಿತಿ ನೋಡಿ ಶಾ ಅಸಮಾಧಾನಗೊಂಡಿದ್ದಾರಂತೆ. ಈ ಸಂದರ್ಭದಲ್ಲಿ ಸಂಘ ನಾಯಕರನ್ನು ಭೇಟಿಯಾಗಿದ್ದ ಅಮಿತ್ ಶಾ, "ಯಡಿಯೂರಪ್ಪ ಬಹುತ್ ಪಾಪ್ಯುಲರ್ ಹೈ, ಲೇಕಿನ್ ಆಜುಬಾಜು ಮೇ ಗಡ್ಬಡಿ ಹೈ" ಎಂದು ಹೇಳಿದ್ದಾರಂತೆ.
ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕದಲ್ಲಿನ ಬಿಜೆಪಿ ಸ್ಥಿತಿಗತಿ ನೋಡಿ ದಂಗಾಗಿ ಹೋಗಿದ್ದು, ಎರಡು ಪ್ರತ್ಯೇಕ ಏಜೆನ್ಸಿಗಳಿಂದ ಸರ್ವೇ ಮಾಡಿಸಿ ವರದಿ ಕೊಡಲು ಹೇಳಿದ್ದಾರಂತೆ. ಅಂದ ಹಾಗೆ ಅಮಿತ್ ಶಾ ಬಳಿ ಸದ್ಯಕ್ಕೆ ಇರುವ ವರದಿಗಳ ಪ್ರಕಾರ ಬಿಜೆಪಿ ನೂರು ಸ್ಥಾನ ದಾಟುವುದು ಕಷ್ಟ ಎನ್ನುವ ಗುಮಾನಿ ಇದೆ. ಕಾಂಗ್ರೆಸ್ ಕೂಡ ಅದೇ ಹುರುಪಿನಲ್ಲಿ ಇದೆ. ಅಮಿತ್ ಶಾ ಚುನಾವಣೆ ವೇಳೆ ನಾನೇ ಬಂದು ಕರ್ನಾಟಕದಲ್ಲಿ ವಾಸ್ತವ್ಯ ಹೂಡುತ್ತೇನೆ, ಇಲ್ಲವಾದಲ್ಲಿ ಕಷ್ಟವಿದೆ ಎಂದು ರಾಜ್ಯದ ಸಂಘ ನಾಯಕರ ಬಳಿ ಹೇಳಿಕೊಂಡಿದ್ದಾರಂತೆ.
ಯಡಿಯೂರಪ್ಪ ಜನಪ್ರಿಯ, ಆದರೆ...
2016ರಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಯಡಿಯೂರಪ್ಪ ಅವರನ್ನು ನೇಮಿಸುವ ಸಂದರ್ಭದಲ್ಲಿ ಸ್ವತಃ ಅಮಿತ್ ಶಾ ಮತ್ತು ರಾಮಲಾಲ್ ಅವರು ಸಂತೋಷ್'ರನ್ನು ಕರೆದು ಯಡಿಯೂರಪ್ಪ ಬಗ್ಗೆ ಅಭಿಪ್ರಾಯ ಕೇಳಿದ್ದರಂತೆ. ಆಗ ಸಂತೋಷ್ ಅವರು, ಈಗಲೇ ಯಡಿಯೂರಪ್ಪನವರ ಕೈಗೆ ಪಕ್ಷದ ಸಂಘಟನೆ ಕೊಡಬೇಡಿ, ಚುನಾವಣೆಗೆ ಮೊದಲು ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ. ಆದರೆ ಈಗ ಒಂದೋ ಜೋಶಿ ಅವರನ್ನು ಮುಂದುವರೆಸಿ, ಇಲ್ಲವೇ ಸಿಟಿ ರವಿ ಅವರಿಗೆ ಜವಾಬ್ದಾರಿ ಕೊಡಿ ಎಂದು ಹೇಳಿದ್ದರಂತೆ. ಆದರೆ ಲಿಂಗಾಯತ ಫ್ಯಾಕ್ಟರ್ ಕಾರಣಕ್ಕಾಗಿ ಅಮಿತ್ ಶಾ ಅವರು ಯಡಿಯೂರಪ್ಪ ಹೆಸರಿಗೆ ಹಸಿರು ನಿಶಾನೆ ಕೊಟ್ಟಿದ್ದರು. ಆದರೆ ಈಗ ಕರ್ನಾಟಕಕ್ಕೆ ಬಂದು ಹೋದ ಮೇಲೆ ಬಿಜೆಪಿ ಪರಿಸ್ಥಿತಿ ನೋಡಿ ಶಾ ಅಸಮಾಧಾನಗೊಂಡಿದ್ದಾರಂತೆ. ಈ ಸಂದರ್ಭದಲ್ಲಿ ಸಂಘ ನಾಯಕರನ್ನು ಭೇಟಿಯಾಗಿದ್ದ ಅಮಿತ್ ಶಾ, "ಯಡಿಯೂರಪ್ಪ ಬಹುತ್ ಪಾಪ್ಯುಲರ್ ಹೈ, ಲೇಕಿನ್ ಆಜುಬಾಜು ಮೇ ಗಡ್ಬಡಿ ಹೈ" ಎಂದು ಹೇಳಿದ್ದಾರಂತೆ.
- ಪ್ರಶಾಂತ್ ನಾತು, ಸುವರ್ಣನ್ಯೂಸ್