ಇಂಡಿಯಾ ಗೇಟ್: ಕಲಾಂರಂಥ ಅಚ್ಚರಿಯ ರಾಷ್ಟ್ರಪತಿ ತರುತ್ತಾರಾ ಮೋದಿ?

By Suvarna Web DeskFirst Published Apr 11, 2017, 7:59 AM IST
Highlights

ನಮ್ಮ ಉಡುಪಿ ಕಡೆ ಎಮ್ಮೆಗಳಿಗೆ ಕನ್ನಡದ ಹಾಡು ಅರ್ಥವಾಗೋದಿಲ್ಲ ಅಂತ ನಾವು ತುಳು ಹಾಡು ಹಾಡ್ತಿದ್ದೆವು ಎಂದು ಮೊನ್ನೆ ಶುಕ್ರವಾರ ಆಸ್ಕರ್‌ ಫರ್ನಾಂಡಿಸ್‌ ರಾಜ್ಯಸಭೆಯಲ್ಲಿ ‘ಓ ಮಗಾ' ಎಂದು ತುಳು ಹಾಡೊಂದನ್ನು ಹಾಡಿದರು. ಅದಕ್ಕೆ ಸಭಾಪತಿಗಳೂ ತಲೆದೂಗಿದರು.

ಇಂಡಿಯಾ ಗೇಟ್‌ | ದೆಹಲಿಯಿಂದ ಕಂಡ ರಾಜಕಾರಣ

ಮುಂದಿನ ರಾಷ್ಟ್ರಪತಿ ಯಾರು?
ಸಂಸತ್ತಿನ ಮೊಗಸಾಲೆಯಲ್ಲಿ ಈಗ ಮುಂದಿನ ರಾಷ್ಟ್ರಪತಿ ಯಾರು ಎಂಬುದೇ ಚರ್ಚೆಯ ವಿಷಯ. ಬಿಜೆಪಿ ಹಿರಿಯ ನಾಯಕರಿಗೂ ಯಾರು ಭವಿಷ್ಯದ ಮೊದಲ ಪ್ರಜೆ ಎಂಬ ವಿಷಯ ಗೊತ್ತಿರುವಂತಿಲ್ಲ. ಖಾಸಗಿಯಾಗಿ ಹಿರಿಯ ಪತ್ರಕರ್ತರು ಸಿಕ್ಕಾಗ ಬಿಜೆಪಿ ಹಿರಿಯರೇ, ಏನಾದರೂ ಸುಳಿವು ಸಿಕ್ತಾ ಎಂದು ಕೇಳುತ್ತಾರೆ. ಆದರೆ ಪತ್ರಕರ್ತರಿ​ರಾ​ಗಲೀ, ಸಚಿವರಿ​​ಗಾಗಲೀ ಇದುವರೆಗೂ ನಿಶ್ಚಿತವಾಗಿ ಯಾರು ರಾಷ್ಟ್ರಪತಿ ಎಂದು ಗೊತ್ತಾಗಿಲ್ಲ. ನಿನ್ನೆ ಸಂಜೆ ನಡೆದ ಬಿಜೆಪಿಯ 35 ಮಿತ್ರ ಪಕ್ಷಗಳ ಸಭೆ​​ಯಲ್ಲಿ ಎಲ್ಲರೂ ಒಟ್ಟಾಗಿ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಹೇಳ​​ಲಾಯಿತೇ ಹೊರತು ಅಭ್ಯರ್ಥಿ ಯಾರೆಂಬ ಬಗ್ಗೆ ಪ್ರಧಾನಿ ಮೋದಿ ಸುಳಿವು ಬಿಟ್ಟು ಕೊಟ್ಟಿಲ್ಲ. ಎಲ್‌.ಕೆ.ಅಡ್ವಾಣಿ, ಸ್ಪೀಕರ್‌ ಸುಮಿತ್ರಾ ಮಹಾಜನ್‌, ಸುಷ್ಮಾ ಸ್ವರಾಜ್‌, ಅರುಣ್‌ ಜೇಟ್ಲಿ ಹೆಸರು ಕೇಳಿ ಬರುತ್ತಿವೆಯಾದರೂ ಮೋದಿಯಾಗಲೀ, ಸಂಘವಾಗಲೀ ಯಾರೂ ಕೂಡ ಅವರೊಂದಿಗೆ ಈವರೆಗೂ ಮಾತನಾಡಿಲ್ಲವಂತೆ. ಇನ್ನು ದಲಿತ ರಾಷ್ಟ್ರಪತಿ ಎಂಬ ಚರ್ಚೆಯೊಂದು ನಡೆಯುತ್ತಿದ್ದು, ಕೇಂದ್ರ ಸಚಿವ ತಾವರ್‌ ಚಂದ್‌ ಗೆಹ್ಲೋಟ್‌, ಪುಣೆ ವಿವಿ ಮಾಜಿ ವಿಸಿ ಪ್ರೊ.ನರೇಂದ್ರ ಜಾಧವ್‌ ಹೆಸರುಗಳು ಓಡಾ​​ಡುತ್ತಿವೆ. ಆದಿ​ವಾ​ಸಿ​ಯನ್ನು ರಾಷ್ಟ್ರಪತಿ ಮಾಡುವುದಾದರೆ ಜಾರ್ಖಂಡ್‌ ರಾಜ್ಯ​ಪಾ​ಲ ದ್ರೌಪದಿ ಮುಮುರ್‌ ಹೆಸರು ಕೂಡ ಸೆಂಟ್ರಲ್‌ ಹಾಲ್‌'ನಿಂದಲೇ ಬರು​ತ್ತಿದೆ. ಮೋದಿ ಸಾಹೇಬರ ಮನಸ್ಸಿ​ನ​ಲ್ಲಿ ಏನಿದೆ ಎಂದು ತಿಳಿಯು​ವು​ದು ಸದ್ಯದ ಸ್ಥಿತಿಯಲ್ಲಿ ಅತ್ಯಂತ ಪ್ರಯಾಸದ ಕೆಲಸ ಬಿಡಿ. ವಾಜ​ಪೇಯಿ ಅವರು ಅಬ್ದುಲ್‌ ಕಲಾಂ ಹೆಸರನ್ನು ಮುಂದೆ ತಂದಂತೆ ಮೋದಿ ಕೂಡ ಕಡೆಯ ಗಳಿಗೆಯಲ್ಲಿ ಹೊಸ ತಲೆಮಾರಿಗೆ ಇಷ್ಟವಾಗುವ ರಾಜ​​​ಕೀಯೇತರ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದರೂ ಆಶ್ಚರ್ಯವಿಲ್ಲ. 

Latest Videos

ಮುಗಿಯದ ಕಾಂಗ್ರೆಸ್‌ ಒಳಜಗಳ
ಶಿಥಿಲಾವಸ್ಥೆಯಲ್ಲಿದ್ದರೂ ಕೂಡ ಕಾಂಗ್ರೆಸ್ಸಿಗರ ಒಳಜಗಳ ಮಾತ್ರ ಮುಗಿ​​ಯುವಂತೆ ಕಾಣುತ್ತಿಲ್ಲ. ಕಳೆದ ವಾರ ರಾಜ್ಯಸಭೆಯಲ್ಲಿ ಜಿಎಸ್‌ಟಿ ವಿಧೇಯಕದ ಬಗ್ಗೆ ಚರ್ಚೆ ಆರಂಭಿಸುವುದಾಗಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕೋರಿದಾಗ ನಿರಾಕರಿಸಿದ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌, ಆನಂದ್‌ ಶರ್ಮಾ ಅವರಿಗೆ ಚರ್ಚೆ ಆರಂಭಿ​​ಸುವಂತೆ ಹೇಳಿದರಂತೆ. ಆರ್ಥಿಕ ವಿಷಯಗಳನ್ನು ಬಲ್ಲ ಚಿದಂಬರಂ, ಮನಮೋಹನ್‌ ಸಿಂಗ್‌, ಕಪಿಲ್‌ ಸಿಬಲ್‌ ಅವರಿಗೆ ಮಾತ​ನಾ​ಡಲು ಕೊಡದೆ ಗುಲಾಂ ನಬಿ ಆಜಾದ್‌, ಆನಂದ್‌ ಶರ್ಮ ಮತ್ತು ಜೈರಾಮ್‌ ರಮೇಶ್‌ ಜಿಎಸ್‌ಟಿ ಮೇಲೆ ಮಾತನಾಡಿದ್ದು ರಾಜ್ಯಸಭೆಯ ಕಾಂಗ್ರೆಸ್‌ ಸಂಸದರ ಅಸಮಾಧಾನಕ್ಕೆ ಕಾರಣವಾಗಿದೆ. ಕೊನೇ ಗಳಿಗೆ​ಯ​ಲ್ಲಿ ಮಧ್ಯಸ್ಥಿಕೆ ವಹಿಸಿ ಅಹ್ಮದ್‌ ಪಟೇಲ್‌ ಅವರು ಚಿದಂಬರಂರನ್ನು ಮಾತನಾಡುವಂತೆ ಕೇಳಿಕೊಂಡರಾದರೂ ‘ನಾನು ಮಾತ​ನಾ​ಡೋಲ್ಲ' ಎಂದು ಸಿಟ್ಟಿನಿಂದ ಹೇಳಿ ಚಿದಂಬರಂ ಹೊರಹೋದರಂತೆ. 

ವಿಚಿತ್ರ ವೀರಪ್ಪ 
ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಅವರು ಕನ್ನಡದಲ್ಲಿ ಬರೆದಿದ್ದ ದ್ರೌಪದಿ ಕುರಿತಾದ ಪುಸ್ತಕದ ಆಂಗ್ಲ ಅನುವಾದದ ಕೃತಿ ಕಳೆದ ವಾರ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆಗೊಂಡಿತು. ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಭಾಗವಹಿಸಿದ್ದ 45 ನಿಮಿಷದ ಕಾರ್ಯಕ್ರಮದಲ್ಲಿ ಸೌಜನ್ಯಕ್ಕಾದರೂ ಕೃತಿಯ ಅನುವಾದಕ ಮೈಸೂರಿನ ಡಿ.ಎ.ಶಂಕರ ಅವರನ್ನು ಪರಿಚಯ ಮಾಡಿಸದ ವೀರಪ್ಪ ಮೊಯ್ಲಿ ಅವರು ಭಾಷಣ​ದಲ್ಲೂ ಕೂಡ ತಮ್ಮ ಬಗ್ಗೆಯೇ ಹೇಳಿಕೊಂಡರೇ ಹೊರತು ಶಂಕರ ಅವ​ರಿಗೆ ಧನ್ಯವಾದ ಕೂಡ ಹೇಳಲಿಲ್ಲ. 

ಅಗಾಧ ನೆನಪಿನ ಶಕ್ತಿಯ ಪ್ರಣಬ್‌:
ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ ನೆನಪಿನ ಶಕ್ತಿ ಅಗಾಧ. ಇವತ್ತಿಗೂ 1952ರ ಚುನಾವಣೆಯಿಂದ ಹಿಡಿದು 2014ರ ಚುನಾ​ವಣೆ​ಯ ಅಂಕಿ-ಸಂಖ್ಯೆಗಳನ್ನು ನಿರರ್ಗಳವಾಗಿ ಪ್ರಣಬ್‌ ದಾ ಹೇಳು​ತ್ತಾ​ರಂತೆ. ಇತ್ತೀಚೆಗೆ ರಾಷ್ಟ್ರಪತಿ ಭವನಕ್ಕೆ ಹೋಗಿದ್ದ ಸಂಸದ ಆಸ್ಕರ್‌ ಫರ್ನಾಂಡಿಸ್‌, ‘1975ರಲ್ಲಿ ನೀವು ಉಡುಪಿಗೆ ಬಂದಿದ್ರಿ' ಎಂದು ಹೇಳಿ​ದಾಗ ‘ಹೌದು, ನೆನಪಿದೆ. ನೀವು ಸೈಕಲ್‌ ಮೇಲೆ ಬಂದು ನನ್ನನ್ನು ಭೇಟಿ​ಯಾಗಿದ್ರಿ' ಎಂದು ಪ್ರಣಬ್‌ ಹೇಳಿದಾಗ ಆಸ್ಕರ್‌ ಅವಾ​ಕ್ಕಾ​ದ​ರಂತೆ. ಅಷ್ಟೇ ಅಲ್ಲ, 1980ರಲ್ಲಿ ಪ್ರಣಬ್‌ ಮುಖರ್ಜಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿದ್ದಾಗ ಆಸ್ಕರ್‌ ವಿಧಾನಪರಿಷತ್‌ ಸದಸ್ಯ ಸ್ಥಾನವನ್ನು ನಿರಾಕರಿಸಿದ ಬಗ್ಗೆಯೂ ಕೂಡ ನೆನಪಿಟ್ಟು ಹೇಳಿದರಂತೆ. 

ಗಡಿಬಿಡಿ ಪ್ರಭು, ಫಾಸ್ಟ್‌ ಪ್ರಕಾಶ್‌
ರೈಲ್ವೆ ಸಚಿವ ಸುರೇಶ್‌ ಪ್ರಭು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರನ್ನು ಯಾರೇ ಭೇಟಿಯಾಗಲು ಹೋದರೂ ಸರಿಯಾಗಿ ಮಾತನಾಡಿಸೋದಿಲ್ಲ ಎಂದು ಬಿಜೆಪಿಯ ಹಿರಿಯ ಸಂಸದರು ಪ್ರಧಾನಿ ಮೋದಿಗೆ ದೂರು ನೀಡಲು ನಿರ್ಧರಿಸಿ​ದ್ದಾರೆ. ಸುರೇಶ್‌ ಪ್ರಭು ಅವರು ಕ್ಷೇತ್ರದ ಯಾವುದೇ ಕೆಲಸ ತೆಗೆದು​ಕೊಂಡು ಹೋದರೂ ಮಾಡಿಕೊಡುವುದಿಲ್ಲ ಮತ್ತು ಸಮಾಧಾನವಾಗಿ ಕೇಳು​ವುದಿಲ್ಲ. ಸಭೆ ಮುಗಿಸಲು ಗಡಿಬಿಡಿ ಮಾಡುತ್ತಾರೆ ಎಂಬುದು ಸಂಸದರ ದೂರಾದರೆ, ಪ್ರಕಾಶ್‌ ಜಾವ​ಡೇ​ಕ​ರ್‌ ಅವರು ಎಷ್ಟೇ ಹಿರಿಯ ಸಂಸದರು ಹೋದರೂ ಕಣ್ಣಲ್ಲಿ ಕಣ್ಣಿಟ್ಟು ಮಾತ​ನಾಡಿಸದೆ ‘ಫಾಸ್ಟ್‌ ಫಾಸ್ಟ್‌' ಎನ್ನುತ್ತಾರೆ ಎಂದು ಸಂಸದರು ಬೇಸರಿಸಿ​​ಕೊಂಡಿದ್ದಾರೆ. ಕರ್ನಾಟಕದ ಒಬ್ಬ ಬಿಜೆಪಿ ಹಿರಿಯ ಸಂಸದ​ರಂತೂ ಸುರೇಶ್‌ ಪ್ರಭು ಅವರಿಗೆ, ‘ನಿಮ್ಮ ವಿರುದ್ಧ ನಾನೇ ಪ್ರಧಾನಿಗೆ ದೂರು ನೀಡುತ್ತೇನೆ' ಎಂದು ಖಡಕ್ಕಾಗಿ ಹೇಳಿದ್ದಾರಂತೆ. 

ಕರ್ನಾಟಕಕ್ಕೆ ಬೇಕು ವಕೀಲರು:
ನೀರಿನ ವಿವಾದದಲ್ಲಿ ದಶಕಗಳಿಂದ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲ ಅನಿಲ್‌ ದಿವಾನ್‌ ನಿಧನರಾಗಿದ್ದು, 88 ವರ್ಷದ ಫಾಲಿ ನಾರಿಮನ್‌ ವರ್ಟಿಗೊ ಕಾಯಿಲೆಯಿಂದ ತೀವ್ರವಾಗಿ ಬಳಲು​ತ್ತಿ​ದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾವೇರಿ, ಮಹದಾಯಿ ಪ್ರಕ​ರಣ ವಿಚಾರಣೆಗೆ ಬಂದಾಗ ವಾದ ಮಂಡಿಸಲು ಹೊಸ ಸಮರ್ಥ ವಕೀಲರ ಹುಡುಕಾಟ ಕರ್ನಾಟಕ ಸರ್ಕಾರಕ್ಕೆ ಅನಿವಾರ್ಯ ಆಗ​ಬ​ಹು​ದು. ಹಾಗೆ ಕರ್ನಾಟಕದ ವಕೀಲರ ತಂಡದಲ್ಲಿ 15 ಮಂದಿ ಕರಿ ಕೋಟು​ಧಾರಿಗಳು ಇದ್ದಾರಾದರೂ ಅವರಲ್ಲಿ ಮೋಹನ್‌ ಕಾತರಕಿ ಒಬ್ಬ​ರನ್ನು ಬಿಟ್ಟರೆ ಉಳಿದವರೆಲ್ಲರೂ ಸುಪ್ರೀಂಕೋರ್ಟ್‌ನಲ್ಲಿ ಗಟ್ಟಿದನಿ​ಯಲ್ಲಿ ವಾದ ಮಾಡಿದ್ದು ಅಪರೂಪ. ಹೀಗಾಗಿ ಮುಂದಿನ ಒಂದೆ​ರಡು ತಿಂಗಳಲ್ಲಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ತನ್ನ ಮಾತಿನಿಂದ ನ್ಯಾಯಮೂರ್ತಿ​ಗಳ ಗಮನ ಸೆಳೆಯಬಲ್ಲ, ನ್ಯಾಯ​ಪೀಠದ ಮನವೊಲಿಸಬಲ್ಲ ವಕೀಲರನ್ನು ನೇಮಿಸುವ ಸಾಧ್ಯತೆ ಇದೆ. 

ಸಿಂಗರ್‌ ಸಂಸದ ಆಸ್ಕರ್‌:
ಶುಕ್ರವಾರ ಸಂಜೆ ರಾಜ್ಯಸಭೆಯಲ್ಲಿ ತುಳು ಭಾಷೆ ಕುರಿತಾದ ಖಾಸಗಿ ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ಆಸ್ಕರ್‌ ಫರ್ನಾಂಡಿಸ್‌ ಗಟ್ಟಿಧ್ವನಿಯಲ್ಲಿ ತುಳು ಹಾಡೊಂದನ್ನು ಹಾಡಲು ಆರಂಭಿ​ಸಿದಾಗ ಸಭಾಪತಿ ಸೇರಿ ಸದನದಲ್ಲಿದ್ದವರೆಲ್ಲರೂ ತಲೆ​ದೂ​ಗು​ತ್ತಿ​​ದ್ದರು. "ನಮ್ಮ ಉಡುಪಿ ಕಡೆ ಎಮ್ಮೆಗಳಿಗೆ ಕನ್ನಡ ಹಾಡು ಅರ್ಥ​ವಾಗಲ್ಲ. ಹೀಗಾಗಿ ನಾವು ತುಳು ಹಾಡು ಹಾಡುತ್ತಿದ್ದೆವು" ಎಂದೇಳಿ ‘ಓ ಮಗಾ' ಎಂದು ಕೊಂಕಣಿ ಧಾಟಿಯಲ್ಲಿ ಹಾಡು ಆರಂಭಿಸಿದರು. ಸಭಾ​ಪತಿಗಳು ‘ನೀವು ಬಹಳ ಚೆನ್ನಾಗಿ ಹಾಡು​​ತ್ತೀರಿ' ಎಂದು ಹೇಳಿದರೆ, 
‘ಓ ಮಗಾ ಕೊರಗ ಒರಬರಯನಾ
ಎರು ಬತ್ತಂಡ ಬಲ್ಪು ಮಗಾ ಬೆರಿಬುಡೋಡಾ
ಓ ಮಗಾ ಕೊರಗ ಒಂರ್ಬರಯನಾ'

ಅಡುಗೆ ಭಟ್ಟ ಇಂದು ಶಾ ಆಪ್ತ ಕಾರ್ಯದರ್ಶಿ 
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಮಯ ಬೇಕೆಂದರೆ ಘಟಾನುಘಟಿ ಬಿಜೆಪಿ ನಾಯಕರು ಮೊದಲು ಕರೆ ಮಾಡುವುದು ಅವರ ಆಪ್ತ ಕಾರ್ಯದರ್ಶಿ ನೇಪಾಳಿ ಸಂದೀಪ್‌ ರಾಣಾ ಅವರಿಗೆ. 2004ರಲ್ಲಿ ದೆಹಲಿಗೆ ಅಡುಗೆ ಕೆಲಸಕ್ಕೆಂದು ಬಂದ ಸಂದೀಪ್‌ ಸಂಸದರ ಮನೆ​ಗಳಲ್ಲಿ ಅಡುಗೆ ಮಾಡುತ್ತಾ, ದೆಹಲಿಯ ಎಬಿವಿಪಿ ಕಾರ್ಯಾಲ​ಯ​​ದಲ್ಲಿ ಅಡುಗೆ ಆರಂಭಿಸಿದರು. ನಂತರ ದೆಹಲಿ ವಿವಿಯಲ್ಲಿ ಡಿಗ್ರಿ ಮುಗಿಸಿಕೊಂಡು ಎಬಿವಿಪಿ ಫುಲ್‌'ಟೈಮ್ ವರ್ಕರ್‌ ಆದರಂತೆ. ನಂತರ 2014ರಲ್ಲಿ ಅಮಿತ್‌ ಶಾ ಒಬ್ಬ ಸಮರ್ಥ ನಿಷ್ಠಾವಂತ ಆಪ್ತ ಕಾರ್ಯದರ್ಶಿ ಕೊಡಿ ಎಂದು ಕೇಳಿದಾಗ ಸಿಕ್ಕಿದವರೇ ಸಂದೀಪ್‌. ಇವತ್ತು ಅಮಿತ್‌ ಶಾ ಅಪಾಯಿಂಟ್ಮೆಂಟ್‌'ಗಳು, ಸೋಷಿಯಲ್‌ ಮೀಡಿಯಾ ಪ್ರಚಾರವನ್ನು ನೋಡಿಕೊಳ್ಳುವ ಸಂದೀಪ್‌ ದೇಶದ ಪ್ರಭಾವಶಾಲಿಗಳ ಮೊಬೈಲ್ ಸ್ಪೀಡ್‌ ಡಯಲ್‌'ನಲ್ಲಿದ್ದಾರೆ.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್‌ 

click me!