
ಬೆಂಗಳೂರು(ಜ.24): ಇದು ತುಳುನಾಡಿನ ಜಾನಪದ ಕ್ರೀಡೆಯ ಅಳಿವು ಉಳಿವಿನ ಪ್ರಶ್ನೆ. ಗ್ರಾಮೀಣ ಕ್ರೀಡೆ ಕಂಬಳ ಬೇಕೇ ಬೇಕು ಎಂದು ಸಾಮಾಜಿಕ ಜಾಲತಾಣಗಳಿಂದ ಆರಂಭವಾದ ಹೋರಾಟ ಈಗ ಪ್ರತಿಭಟನಾ ಸ್ವರೂಪ ಪಡೆದುಕೊಂಡಿದೆ. ಇತ್ತ ಸರ್ಕಾರ ಕೂಡ ಕಂಬಳ ಉಳಿಸಿಕೊಳ್ಳೋಕೆ ನಾವು ಸಿದ್ಧ ಎನ್ನುತ್ತಿದೆ.
ಕಾವೇರುತ್ತಿದೆ ಕಂಬಳ ಕಾಪಾಡಿ ಕೂಗು
ತುಳುನಾಡಿನ ಕಂಬಳದ ಭವಿಷ್ಯ ಜನವರಿ 30ಕ್ಕೆ ಹೈಕೋರ್ಟ್'ನಲ್ಲಿ ನಿರ್ಧಾರವಾಗಲಿದೆ. ನಿಷೇಧ ತೆರವಾಗುತ್ತದೋ.. ಇಲ್ಲ ಕಂಬಳ ಆಚರಣೆ ಕನಸಾಗಿಯೇ ಉಳಿಯುತ್ತದಾ ಎಂಬ ಕುತೂಹಲ ಮನೆಮಾಡಿದೆ. ಈ ಮಧ್ಯೆ ಕಾಪಾಡಿ ಕಂಬಳ ಕೂಗು ದಿನೇ ದಿನೇ ಹೆಚ್ಚುತ್ತಿದೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಂಬಳಕ್ಕೆ ಅನುಮತಿ ಕೊಡಿ ಎನ್ನುವ ಕೂಗು ಕೇಳಿ ಬಂತು.
ತಮಿಳುನಾಡಿನಲ್ಲಿ ಜಲ್ಲಿಕಟ್ಟಿಗೆ ಪನ್ನೀರ್ ಸೆಲ್ವಂ ಸರ್ಕಾರ ಕೊಟ್ಟ ಬೆಂಬಲ ರಾಜ್ಯದಲ್ಲಿ ಕಂಬಳಕ್ಕೆ ಸಿದ್ದರಾಮಯ್ಯ ಸರ್ಕಾರ ನೀಡಬೇಕು ಎನ್ನುವ ಹೋರಾಟಗಾರರ ಒತ್ತಾಯ. ಇದಕ್ಕೆ ನಮ್ಮ ಬೆಂಬಲವಿದೆ ಎಂದು ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಕೇಂದ್ರದ ಬೆಂಬಲವೂ ಬೇಕಿದೆ ಎಂದರು.
ತುಳುನಾಡಿನ ಕೇಂದ್ರ ಸಚಿವ ಸದಾನಂದಗೌಡ ಪ್ರಧಾನಿ ಜೊತೆ ಚರ್ಚಿಸುವುದಾಗಿಯೂ ಹೇಳಿದ್ದಾರೆ. ನಟ ಜಗ್ಗೇಶ್ ಬಳಿಕ ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಕಂಬಳದ ಪರ ದನಿಯೆತ್ತಿದ್ದಾರೆ. ಈ ಮಧ್ಯೆ ದಕ್ಷಿಣ ಕನ್ನಡದ ಮೂಡಬಿದಿರೆಯಲ್ಲಿ ಕಂಬಳ ಸಮಿತಿ ಶನಿವಾರ ಕೋಟಿ ಚನ್ನಯ್ಯ ಜೋಡುಕೆರೆ ಕಂಬಳ ಆಚರಣೆಗೆ ಅಖಾಡ ಸಿದ್ಧಪಡಿಸಿಕೊಂಡಿದೆ. ಒಟ್ಟಿನಲ್ಲಿ ತುಳುನಾಡಿನ ಕಂಬಳ ತಮಿಳುನಾಡಿನ ಜಲ್ಲಿಕಟ್ಟಿನಂತೆ ಜಯ ಗಳಿಸುತ್ತಾ ಅನ್ನೋದು ಸದ್ಯಕ್ಕಿರೋ ಕುತೂಹಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.