ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಳಿಕ ಡಿಕೆಶಿಗೆ ಮತ್ತೊಂದು ಸಂಕಷ್ಟ

By Web DeskFirst Published Oct 10, 2019, 7:23 PM IST
Highlights

ಅಕ್ರಮ ಹಣ ವರ್ಗಾವಣೆ ಹಾಗೂ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಕರ್ನಾಟಕ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಬೆಂಗಳೂರು, [ಅ.10]: ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಅಕ್ರಮ ಕಲ್ಲುಗಣಿಗಾರಿಕೆ ಕಂಟಕ ಎದುರಾಗಿದೆ.

ಕನಕಪುರದಲ್ಲಿ  ಅಕ್ರಮ ಕಲ್ಲುಗಣಿಗಾರಿಕೆ  ಆರೋಪ ಪ್ರಕರಣವನ್ನು ಸಿಬಿಐ ತನಿಖೆ ಕೋರಿ ಎ.ಸಿ.ಶಿವರಾಜ್ ಸಲ್ಲಿಸಿದ್ದ ಪಿಐಎಲ್ ನ್ನು ಇಂದು [ಗುರುವಾರ] ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್,  ಕೈಗೊಂಡ ಕ್ರಮದ ಬಗ್ಗೆ ವರದಿ ನೀಡಲು ಹೈಕೋರ್ಟ್ ಆದೇಶ ಹೊರಡಿಸಿದೆ. ಅಲ್ಲದೇ  ಅರಣ್ಯ ಒತ್ತುವರಿ ತೆರವಿನ ಬಗ್ಗೆ ಮಾಹಿತಿ ಜತೆಗೆ ಇಲಾಖೆಯ ವಿಚಾರಣಾ ವರದಿ ಸಲ್ಲಿಸುವಂತೆಯೂ  ಸೂಚನೆ ನೀಡಿದೆ.

ಡಿಕೆ ಶಿವಕುಮಾರ್‌ಗೆ ಮತ್ತೊಂದು ಕಂಟಕ: ಇಡಿ ಬಳಿಕ ಸಿಬಿಐ ಅಟ್ಯಾಕ್!

ಅರಣ್ಯಾಧಿಕಾರಿ ಯು.ವಿ.ಸಿಂಗ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯನ್ನು ಜಾರಿಗೊಳಿಸುವಂತೆ ಕೋರಿ ಎ.ಸಿ.ಶಿವರಾಜ್ ಎಂಬುವವರು ಹೈಕೋರ್ಟ್‌ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕೈಗೊಂಡ ಕ್ರಮದ ಬಗ್ಗೆ ವರದಿ ನೀಡಲು ಆದೇಶ ಹೊರಡಿಸಿದೆ.

ನವಂಬರ್ 30ರೊಳಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿ ಪಿಐಎಲ್ ವಿಚಾರಣೆ ಡಿಸೆಂಬರ್ 5ಕ್ಕೆ ಮುಂದೂಡಿದೆ.

ಕನಕಪುರದಲ್ಲಿ  ಅಕ್ರಮ ಕಲ್ಲುಗಣಿಗಾರಿಕೆ  ಪ್ರಕರಣದ ತನಿಖೆಗಾಗಿ  ಅರಣ್ಯಾಧಿಕಾರಿ  ಡಾ.ಯು.ವಿ.ಸಿಂಗ್ ನೇತೃತ್ವದ ಸಮಿತಿ ರಚಿಸಲಾಗಿತ್ತು. 22 ಅರಣ್ಯ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿತ್ತು. ಅಲ್ಲದೇ ಒಟ್ಟು 143 ಅರಣ್ಯ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಪೈಕಿ 63 ಕೇಸುಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

click me!
Last Updated Oct 10, 2019, 7:28 PM IST
click me!