
ಬೆಂಗಳೂರು (ಡಿ.24): ನೋಟು ಬ್ಯಾನ್ ಆದಮೇಲೆ ಒಂದಿಷ್ಟು ಪೊಲೀಸರ ಕರಾಳ ಮುಖಗಳು ಬಯಲಾಗುತ್ತಿವೆ. ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ಕೆಲ ಪೊಲೀಸರು ತಗಲಾಕ್ಕೊಂಡು ಕೆಲಸ ಕೂಡಾ ಕಳೆದುಕೊಂಡಿದ್ದಾರೆ. ಆದರೆ, ಎಷ್ಟೇ, ನಿಯತ್ತಾಗಿದ್ರೂ ಆರೋಪಗಳು ಮಾತ್ರ ಕೆಲವರ ಸುತ್ತ ಸುತ್ತಿರುತ್ತವೆ. ಹೀಗಾಗಿ, ರೈಡ್ಗಳ ಸಹವಾಸವೇ ಬೇಡ ಅನ್ನೋದು ಇದೀಗ ಪೊಲೀಸರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು..!
ನೋಟ್ ಬ್ಯಾನ್ ಆದ ಬಳಿಕ ಎಲ್ಲರ ಬಾಯಲ್ಲೂ ಪರ್ಸೆಂಟೇಜ್ ವ್ಯವಹಾರಗಳ ಮಾತುಗಳೇ ಹೆಚ್ಚು. ಹೀಗೆ ಅಕ್ರಮವಾಗಿ ಹಣ ಎಕ್ಸೆಂಚ್ ಮಾಡುತ್ತಿರುವವರ ವಿರುದ್ಧ ಐಟಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ನ.08 ರ ಬಳಿಕ, ಇಂತಹ ರೈಡುಗಳು ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಸಾಕಷ್ಟು ನಡೆದಿವೆ. ಆದರೆ, ಒಂದೇ ಒಂದು ಎಫ್ಐಆರ್ ಕೂಡಾ ದಾಖಲಾಗಿಲ್ಲ.ಇದಕ್ಕೆ ಕಾರಣ, ನಗರ ಪೊಲೀಸ್ ಆಯುಕ್ತ ಮೇಘರಿಕ್ ರವರ ಆದೇಶದ ಎಫೆಕ್ಟ್!
ಹಣ ದೊರೆತ ತಕ್ಷಣ ಎಫ್ಐಆರ್ ದಾಖಲಿಸಿ ಜೈಲಿಗೆ ಕಳಿಸಬಹುದು. ಮುಂದೆ ಐಟಿ ಅಧಿಕಾರಿಗಳ ಬಳಿ ದೊರೆತ ಹಣಕ್ಕೆ ತಕ್ಕ ದಾಖಲೆಗಳನ್ನ ನೀಡಿದರೆ, ಬಂಧಿಸಿದ ಪೊಲೀಸರು ಮುಜುಗರಕ್ಕೆ ಈಡಾಗಬೇಕಾಗುತ್ತದೆ. ಹೀಗಾಗಿ, ಬೆಂಗಳೂರಿನಲ್ಲಿ ಯಾವುದೇ ದಾಳಿ ನಡೆಸಿದರೂ, ಐಟಿ ಅಧಿಕಾರಿಗಳ ಸಹಯೋಗದಲ್ಲಿಯೇ ದಾಳಿ ನಡೆಸಬೇಕು, ತನಿಖೆ, ಬಂಧನ, ವಿಚಾರಣೆ ಇವೆಲ್ಲವೂ ಐಟಿ ಇಲಾಖೆಯದ್ದೆ ಹೊಣೆಯಾಗಿದ್ದು, ಆದಾಯ ತೆರಿಗೆ ಇಲಾಖೆಯ ಯಾವುದೇ ದಾಳಿಯಾದರೂ, ಬೆಂಗಳೂರು ನಗರ ವ್ಯಾಪ್ತಿಯ ಯಾವುದೇ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸದಂತೆ ನಿರ್ದೇಶಿಸಿದ್ದರು. ಜೊತೆಗೆ, ಯಾವುದಾದರೂ ಮಾಹಿತಿ ಬಂದರೆ, ಐಟಿ ಅಧಿಕಾರಿಗಳ ಸಹಯೋಗದಲ್ಲಿಯೇ ದಾಳಿ ನಡೆಸಬೇಕು ಎಂಬ ಫರ್ಮಾನನ್ನ ತಮ್ಮ ಪೊಲೀಸರಿಗೆ ಹೊರಡಿಸಿದ್ದರು.
ಪೊಲೀಸ್ ಆಯುಕ್ತರ ಈ ಆದೇಶ, ನಿಜಕ್ಕೂ ಸ್ವಾಗತಾರ್ಹ. ಇಂಥಾ ಬ್ಲಾಕ್ ಅಂಡ್ ವೈಟ್ ದಂಧೆಯ ಬಹುತೇಕ ಪ್ರಕರಣಗಳ ದಾಳಿಯನ್ನ ಐಟಿ ಅಧಿಕಾರಿಗಳು ಮಾಡಿದ್ದಾರೆ. ಇದಕ್ಕೆ ಹೆಚ್ಚಿನ ಪ್ರಕರಣಗಳಲ್ಲಿ ಸಹಕಾರ ಕೊಟ್ಟದ್ದು ಸಿಸಿಬಿ. ವಿಶೇಷ ವಿಚಾರಣಾ ವಿಭಾಗದ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನೇ ಐಟಿ ದಾಳಿಗಳ ಸಂಯೋಜಕರನ್ನಾಗಿ ಮಾಡಿದ್ದರು. ಡಿಮಾನಿಟೇಷನ್ ಆದ ಬಳಿಕ ನಡೆಸಿದ ಆರು ಐಟಿ ದಾಳಿಗಳಲ್ಲಿ, ನಾಲ್ಕು ಕೋಟಿಗೂ ಅಧಿಕ ಮೊತ್ತದ ಹಣ ವಶಪಡಿಸಿಕೊಂಡಿದ್ದಾರೆ.
ಇತ್ತೀಚಿಗೆ ಗಿರಿನಗರದಲ್ಲಿ ನಡೆದ ದಾಳಿಯಲ್ಲೂ ಐಟಿ ಅಧಿಕಾರಿಗಳ ಸಹಯೋಗದೊಂದಿಗೆ ದಾಳಿ ನಡೆಸಿ 50 ಲಕ್ಷದ 20 ಸಾವಿರ ರೂಪಾಯಿ ಹಣವನ್ನ ವಶಪಡಿಸಿಕೊಂಡಿದ್ದರು. ಆ ಪೈಕಿ ವಶಪಡಿಸಿಕೊಂಡ ಹಣದ ಪೈಕಿ 25 ಲಕ್ಷ ಹಣ ಇತ್ತೀಚಿಗೆ ಬಿಡುಗಡೆಯಾದ ಹೊಸ ನೋಟುಗಳೇ. ಐಟಿ ಅಧಿಕಾರಿಗಳ ಎದುರಿನಲ್ಲಿಯೇ ಈ ಪ್ರಕರಣದಲ್ಲಿ ಆರೋಪಿಗಳು, ದೊರೆತ ಹಣದ ಮೂಲ ವಿವರಿಸುವಲ್ಲಿ ವಿಫಲರಾಗಿದ್ದಾರೆ. ಆದರೆ, ಎಸಿಪಿ ವೆಂಕಟೇಶ್ ಪ್ರಸನ್ನ ಅವರ ಮೇಲೆ ಸವಿತಾ ಎಂಬಾಕೆ, 21 ಲಕ್ಷ ಹಣ ವಂಚನೆಯಾಗಿದೆ ಎಂದು ದೂರು ನೀಡಿದ್ದಾರೆ. ಪ್ರಕರಣ ಸಿಐಡಿಯಲ್ಲಿದ್ದು ವಿಚಾರಣೆ ಕೂಡಾ ಮುಕ್ತಾಯದ ಹಂತದಲ್ಲಿದೆ. ಸಿಸಿಬಿ ಮೇಲೆ, ಆರೋಪ ಮಾಡಿದ್ದ ಸವಿತಾ, ನೀಡಿದ ಯಾವುದೇ ದಾಖಲೆಗಳು, ದೊರೆತ ಹಣಕ್ಕೆ ಹೊಂದಿಕೆಯಾಗುತ್ತಿಲ್ಲ ಎಂಬ ಅಂಶವನ್ನ ಸಿಐಡಿ ಪುಷ್ಟೀಕರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.