
ಬೆಂಗಳೂರು(ಮಾ.23): ರಾಜ್ಯದಲ್ಲಿ ಕಳೆದ 10 ವರ್ಷಗಳಿಂದಲೂ ರಾಜ್ಯದಲ್ಲೇ ಸೇವೆ ಸಲ್ಲಿಸುತ್ತಿರುವ ದೆಹಲಿ ಮೂಲದ ಐಎಎಸ್ ಅಧಿಕಾರಿ ಶ್ರೀವತ್ಸ ಕೃಷ್ಣ, ಇಂಗ್ಲೀಷ್ನಲ್ಲಿ ಕಡತ ಮಂಡಿಸುವಂತೆ ನೀಡಿದ್ದ ಟಿಪ್ಪಣಿಯನ್ನು ಹಿಂತೆಗೆದುಕೊಂಡಿದ್ದಾರೆ. ಇಂಗ್ಲೀಷ್ನಲ್ಲಿಯೇ ಕಡತ ಮಂಡಿಸುವ ಸೂಚನೆಯನ್ನು ತಮ್ಮ ಅನುಮತಿ ಇಲ್ಲದೆಯೇ ಮತ್ತು ತಮ್ಮ ಗಮನಕ್ಕೆ ತರದೆಯೇ ಹೊರಡಿಸಲಾಗಿದೆ ಎಂದು ನುಣುಚಿಕೊಂಡಿದ್ದಾರೆ. ಹಾಗೆಯೇ ಇಂಗ್ಲೀಷ್ನಲ್ಲಿ ಬರೆದಿದ್ದ ಟಿಪ್ಪಣಿಯನ್ನು ಹಿಂತೆಗೆದುಕೊಂಡಿದ್ದಾರೆ.
ಇಂಗ್ಲೀಷ್ನಲ್ಲಿ ಟಿಪ್ಪಣಿ ಕಳಿಸಿದ್ದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪಡೆದಿದ್ದ ನೋಟೀಸ್ಗೆ ಶ್ರೀವತ್ಸ ಕೃಷ್ಣ ಅವರು ಉತ್ತರಿಸಿದ್ದಾರೆ. ಇಡೀ ಉತ್ತರದಲ್ಲಿ ಎಲ್ಲಿಯೂ ಈ ಜವಾಬ್ದಾರಿಯನ್ನು ಹೊತ್ತಿಲ್ಲ. ಬದಲಿಗೆ ಇದರ ಹಿಂದೆ ಕೆಳ ಹಂತದ ಅಧಿಕಾರಿಗಳ ದುರುದ್ದೇಶವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಗೆ ಬರೆದಿರುವ ಪತ್ರದ ಪ್ರತಿ ಸುವರ್ಣನ್ಯೂಸ್ಗೆ ಲಭ್ಯವಾಗಿದೆ.
'ನಾನು 19 ವರ್ಷಗಳ ನಂತರ ಕರ್ನಾಟಕ ವೃಂದದ ಸೇವೆಗೆ ಬಂದಿದ್ದೇನೆ. ಇತರ ಅಧಿಕಾರಿಗಳಿಗೆ ಐಎಎಸ್ ಅಕಾಡೆಮಿ ತರಬೇತಿ ಸಂದರ್ಭದಲ್ಲಿ ದೊರಕುವ ಸ್ಥಳೀಯ ಭಾಷಾ ಬಳಕೆ ತರಬೇತಿ ದೊರಕಿಲ್ಲ. ಹಾಗಾಗಿ ಇತರ ಅಧಿಕಾರಿಗಳಷ್ಟು ಸ್ಫುಟವಾಗಿ ಕನ್ನಡ ಬಳಸಲು ಸಾಧ್ಯವಾಗಿಲ್ಲ' ಎಂದು ಪತ್ರದಲ್ಲಿ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.
ಕನ್ನಡ ಭಾಷೆಯ ಬಗ್ಗೆ ಅತ್ಯುಚ್ಛ ಗೌರವವಿದ್ದು, ಕನ್ನಡ ಭಾಷೆಯ ರಾಷ್ಟ್ರದ ಪ್ರಮುಖ ಮತ್ತು ಶಾಸ್ತ್ರೀಯ ಭಾಷೆಯಾಗಿ ಮಾನ್ಯತೆ ಪಡೆದುಕೊಂಡಿದೆ. ಐತಿಹಾಸಿಕ ಕಾಲದಿಂದ ಆಧುನಿಕ ಕಾಲಘಟ್ಟದವರೆಗೆ ಅತ್ಯುತ್ತಮ ಸಾಹಿತ್ಯ ಸೃಜಿಸಿರುವ ಬಗ್ಗೆ ತಮಗೆ ಅರಿವು ಇದೆ ಎಂದು ಪತ್ರದಲ್ಲಿ ತಿಳಿಸಿರುವ ಶ್ರೀ ವತ್ಸ ಕೃಷ್ಣ, ಇದನ್ನು ಅಪಮಾನಿಸುವ ಯಾವುದೇ ಉದ್ದೇಶವೂ ಇಲ್ಲ. ಈ ಸಂಬಂಧ ಯಾವುದೇ ನಿರ್ದೇಶನಗಳನ್ನು ಬರಹ ರೂಪದಲ್ಲಿ ನೀಡಿಲ್ಲ ಎಂದು ಪತ್ರದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಇಂಗ್ಲೀಷ್ನಲ್ಲಿ ಕಡತಗಳನ್ನು ಮಂಡಿಸಿ ಎಂದು ಬರೆದಿದ್ದ ಟಿಪ್ಪಣಿಯನ್ನು ನನ್ನ ಅನುಮತಿ ಇಲ್ಲದೆಯೇ ಮತ್ತು ಗಮನಕ್ಕೆ ತರದೆಯೇ ಹೊರಡಿಸಲಾಗಿದೆ. ಆ ಟಿಪ್ಪಣಿ ಹೊರಡಿಸಿದ್ದ ಸಂದರ್ಭದಲ್ಲಿ ನಾನು ಕಚೇರಿಯಲ್ಲಿ ಇರಲಿಲ್ಲ. ಬದಲಾಗಿ ಆಸ್ಪತ್ರೆಯಲ್ಲಿದ್ದೆ. ಈ ಟಿಪ್ಪಣಿ ಸರ್ಕಾರದ ನಿರ್ದೇಶನಗಳಿಗೆ ವ್ಯತಿರಿಕ್ತವಾಗಿರುತ್ತದೆ. ಇದಕ್ಕಾಗಿ ವಿಷಾದಿಸುತ್ತೇನೆ. ಕೆಲವು ಕೆಳ ಹಂತದ ಅಧಿಕಾರಿಗಳ ದುರುದ್ದೇಶ ಕಾರ್ಯವಾಗಿರಬಹುದು ಎಂದು ಶ್ರೀವತ್ಸ ಕೃಷ್ಣ ಅವರು ಪತ್ರದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾನೂನು ವಿಭಾಗದ ಕೆಲ ಅಧಿಕಾರಿಗಳು ಕಾನೂನಾತ್ಮಕ ಪ್ರಕ್ರಿಯೆ ಸಂದರ್ಭದಲ್ಲಿ ಕಾಲಕಾಲಕ್ಕೆ ಕಡತ, ದಾಖಲೆ, ಟಿಪ್ಪಣಿಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಒದಗಿಸಲು ಕೋರುತ್ತಾರೆ ಎಂದು ಪತ್ರದಲ್ಲಿ ತಿಳಿಸಿರುವ ಶ್ರೀ ವತ್ಸ ಕೃಷ್ಣ, ಕನ್ನಡ ಭಾಷೆ ಕಲಿಯಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಇಂಗ್ಲೀಷ್ನಲ್ಲಿಯೇ ಕಡತ ಮಂಡಿಸಿ ಎಂದು ಬರೆದಿದ್ದ ಟಿಪ್ಪಣಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ಬಂದಿತ್ತು. ಈ ವಿಚಾರ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಸಿದ್ದರಾಮಯ್ಯ ಅವರು ಶ್ರೀವತ್ಸ ಕೃಷ್ಣ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ 3 ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚನೆ ನೀಡಿದ್ದರು.
ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.