
ಮನೆಯೂಟದ ರುಚಿ ಮರೆತು, ಹೋಟೆಲ್ಗಳ ಘಮಘಮಿಸುವ ಬಿರಿಯಾನಿ ಅಥವಾ ಮಸಾಲೆಯುಕ್ತ ತಿನಿಸುಗಳಿಗೆ ಮನಸೋಲುವವರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಆದರೆ, ಆಕರ್ಷಕ ಬಣ್ಣ ಮತ್ತು ರುಚಿಯ ಹಿಂದೆ ಅಡಗಿರುವ ಕರಾಳ ಸತ್ಯವೇನು ಗೊತ್ತಾ? ಹಣದ ಹಪಾಹಪಿಗೆ ಬಿದ್ದ ಕೆಲವರು, ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹೈದರಾಬಾದ್ನಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ದಾಳಿಯು, ನಾವು ತಿನ್ನುವ ಆಹಾರದಲ್ಲಿ ಎಷ್ಟು ದೊಡ್ಡ ಮಟ್ಟದ ಕಲಬೆರಕೆ ನಡೆಯುತ್ತಿದೆ ಎಂಬುದನ್ನು ಬಯಲು ಮಾಡಿದೆ. ಈ ವರದಿ ಓದಿದ ನಂತರ, ನೀವು ಹೊರಗಡೆ ಊಟ ಮಾಡುವ ಮುನ್ನ ಖಂಡಿತವಾಗಿಯೂ ಹತ್ತು ಬಾರಿ ಯೋಚಿಸುತ್ತೀರಿ.
ನಗರದ ಹೋಟೆಲ್ಗಳು ಮತ್ತು ಕೇಟರಿಂಗ್ ಉದ್ದಿಮೆಗಳಿಗೆ ವಿಷಕಾರಿ ಆಹಾರ ಪದಾರ್ಥಗಳನ್ನು ಪೂರೈಸುತ್ತಿದ್ದ ಬೃಹತ್ ಜಾಲವನ್ನು ಹೈದರಾಬಾದ್ ಪೊಲೀಸರು ಭೇದಿಸಿದ್ದಾರೆ. ಈ ಭರ್ಜರಿ ಕಾರ್ಯಾಚರಣೆಯಲ್ಲಿ, ಅಸಿಟಿಕ್ ಆಸಿಡ್ ಬೆರೆಸಿದ ಒಂದು ಟನ್ಗೂ ಅಧಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು 300 ಕೆಜಿಯಷ್ಟು ಕೊಳೆತ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಮಲ್ಲೇಪಲ್ಲಿಯ ತಯಾರಿಕಾ ಘಟಕವೊಂದರಲ್ಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ಗೆ ಅಪಾಯಕಾರಿ ಕೆಮಿಕಲ್ಗಳನ್ನು ಬೆರೆಸಲಾಗುತ್ತಿತ್ತು. ಲಾಭದ ಆಸೆಗಾಗಿ ಆರೋಪಿಗಳು ಅಸಿಟಿಕ್ ಆಸಿಡ್, ಸಿಂಥೆಟಿಕ್ ಬಣ್ಣಗಳು ಮತ್ತು ಗಮ್ ಪೌಡರ್ ಬಳಸಿ ಪೇಸ್ಟ್ ತಯಾರಿಸುತ್ತಿದ್ದರು. ಅತ್ಯಂತ ಅಶುಚಿಯಾದ ವಾತಾವರಣದಲ್ಲಿ, ಧೂಳು ಮತ್ತು ನೊಣಗಳ ನಡುವೆ ಸಂಗ್ರಹಿಸಿಡಲಾಗಿದ್ದ ಈ ಪೇಸ್ಟ್ ಅನ್ನು ನಗರದಾದ್ಯಂತ ಹೋಟೆಲ್ಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಈ ಘಟಕದಿಂದ ಪೊಲೀಸರು ಸುಮಾರು 1,090 ಕೆಜಿ ಪೇಸ್ಟ್ ಜಪ್ತಿ ಮಾಡಿದ್ದಾರೆ.
ಹಾಗೆಯೇ ಮತ್ತೊಂದು ದಾಳಿಯಲ್ಲಿ, ತಿನ್ನಲು ಯೋಗ್ಯವಲ್ಲದ ಸುಮಾರು 300 ಕೆಜಿ ಹಳಸಿದ ಕುರಿ ಮತ್ತು ಮೇಕೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಬೇರೆ ರಾಜ್ಯಗಳಿಂದ ಕಡಿಮೆ ಬೆಲೆಗೆ ಕೊಳೆತ ಮಾಂಸವನ್ನು ತರುತ್ತಿದ್ದ ದಂಧೆಕೋರರು, ಅದರ ದುರ್ನಾತ ಬರದಂತೆ ಕೆಮಿಕಲ್ ಮಿಶ್ರಿತ ನೀರಿನಲ್ಲಿ ನೆನೆಸಿಡುತ್ತಿದ್ದರು. ನಂತರ ಈ ಹಳೆಯ ಮಾಂಸಕ್ಕೆ 'ತಾಜಾ ಮಾಂಸ' ಎಂದು ಬಣ್ಣ ಹಚ್ಚಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಮಾಂಸವನ್ನು ಅಧಿಕಾರಿಗಳು ನಾಶಪಡಿಸಿದ್ದು, ಹೋಟೆಲ್ಗಳಲ್ಲಿ ಅಥವಾ ಮಾರುಕಟ್ಟೆಯಲ್ಲಿ ಆಹಾರ ಖರೀದಿಸುವಾಗ ಜನರು ಜಾಗರೂಕರಾಗಿರಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.