
ಆಧಾರ್ ಸಂಖ್ಯೆಯನ್ನು ‘ಪಾನ್' ಕಾರ್ಡ್ನೊಂದಿಗೆ ಸಂಯೋಜಿಸುವುದನ್ನು ಜುಲೈ 1ರಿಂದ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಇನ್ನೂ ಪಾನ್ ಸಂಖ್ಯೆಯೊಂದಿಗೆ ಆಧಾರ್ ಸಂಖ್ಯೆ ಸಂಯೋಜಿಸದೇ ಇದ್ದವರಿಗೆ, ಸಂಯೋಜನೆಗೆ ಇನ್ನು ಎರಡು ದಿನ ಮಾತ್ರವೇ ಬಾಕಿ ಉಳಿದಂತಾಗಿದೆ. ಒಂದು ವೇಳೆ ಎರಡು ದಿನದಲ್ಲಿ ಸಂಯೋಜಿಸದೇ ಇದ್ದಲ್ಲಿ ಪಾನ್ ನಂಬರ್ ಅನೂರ್ಜಿತಗೊಳ್ಳಲಿದ್ದು, ಯಾವುದೇ ದೊಡ್ಡ ಹಣಕಾಸು ವಹಿವಾಟು ನಡೆಸುವುದು ಅಸಾಧ್ಯವಾಗಲಿದೆ. ಪಾನ್ಗೆ ಆಧಾರ್ ಸಂಯೋಜನೆ ಕುರಿತು ಕಳೆದ ಬಜೆಟ್ನಲ್ಲೇ ಕೇಂದ್ರ ಸರ್ಕಾರ ಪ್ರಸ್ತಾಪಿಸಿತ್ತು. ಆ ಕುರಿತು ಮಂಗಳವಾರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಜುಲೈ 1ರಿಂದ ಪಾನ್ ಸಂಖ್ಯೆಗೆ ಅರ್ಜಿ ಸಲ್ಲಿಸುವವರು ಮತ್ತು ಅಂದಿನಿಂದ ಪಾನ್ ಸಂಖ್ಯೆ ಪಡೆಯುವವರು ಕಡ್ಡಾಯವಾಗಿ ಆದಾಯ ತೆರಿಗೆ ಮಹಾನಿರ್ದೇಶಕರಿಗೆ ಆಧಾರ್ ಸಂಖ್ಯೆಯ ಮಾಹಿತಿ ನೀಡಬೇಕು.
ಈಗಾಗಲೇ ಪಾನ್ ಸಂಖ್ಯೆ ಹೊಂದಿರುವವರು ಆನ್ಲೈನ್ ಮೂಲಕ ಆಧಾರ್ ಸಂಯೋಜಿಸುವ ಕಾರ್ಯ ನಡೆಯುತ್ತಿದ್ದು, 2.07 ಕೋಟಿ ತೆರಿಗೆದಾರರು ಆಧಾರ್ ಸಂಯೋಜಿಸಿದ್ದಾರೆ. ಆಧಾರ್ ಸಂಖ್ಯೆಯನ್ನು 115 ಕೋಟಿ ಜನ ಹೊಂದಿದ್ದರೆ, ಪಾನ್ ಸಂಖ್ಯೆ 25 ಕೋಟಿ ಜನರ ಬಳಿ ಇದೆ.
ಇದಲ್ಲದೇ ಇನ್ನು ತೆರಿಗೆ ರಿಟನ್ಸ್ರ್ ಸಲ್ಲಿಕೆ ವೇಳೆ, ಬ್ಯಾಂಕ್ ಖಾತೆ ತೆರೆಯುವ ವೇಳೆ ಹಾಗೂ ಒಂದು ನಿಗದಿತ ಮಿತಿಯನ್ನು ಮೀರಿ ಹಣಕಾಸು ವ್ಯವಹಾರ ಮಾಡುವುದಕ್ಕೆ ಪ್ಯಾನ್ ಸಂಖ್ಯೆ ಕಡ್ಡಾಯವಾಗಲಿದೆ.
ಯಾರಾರಯರು ಸಂಯೋಜಿಸಬೇಕು?: ಯಾರೆಲ್ಲರ ಬಳಿ ಪಾನ್ ಸಂಖ್ಯೆ ಇದೆಯೋ ಅವರೆಲ್ಲಾ ಪಾನ್ ಜೊತೆ ಆಧಾರ್ ಜೊತೆ ಸಂಖ್ಯೆ ಸಂಯೋಜಿಸಬೇಕು. ಒಂದು ವೇಳೆ ಪಾನ್ ಹೊಂದಿರುವವರು ಆದಾಯ ತೆರಿಗೆ ರಿಟನ್ಸ್ರ್ ಸಲ್ಲಿಕೆ ಮಾಡದೇ ಇದ್ದರೂ ಕೂಡಾ ಪಾನ್ ಜೊತೆ ಆಧಾರ್ ಸಂಯೋಜಿಸುವುದು ಕಡ್ಡಾಯ. ಇಲ್ಲದೇ ಹೋದಲ್ಲಿ ಪಾನ್ಕಾರ್ಡ್ ಮಾನ್ಯತೆ ಕಳೆದುಕೊಳ್ಳಲಿದೆ. ಹೀಗಾದಲ್ಲಿ ಬ್ಯಾಂಕ್ನಲ್ಲಿ ಖಾತೆ ತೆರೆಯಲು, 50000 ರು.ಗಿಂತ ಹೆಚ್ಚಿನ ಯಾವುದೇ ನಗದು ಹಣಕಾಸು ವ್ಯವಹಾರ ನಡೆಸುವುದು ಸಾಧ್ಯವಿಲ್ಲ. ಕಾರಣ, 50000 ರು.ಗೆ ಮೇಲ್ಪಟ್ಟಹಣಕಾಸು ವ್ಯವಹಾರಗಳಿಗೆ ಬ್ಯಾಂಕ್ನಲ್ಲಿ ಪಾನ್ ನಂಬರ್ ಅನ್ನು ಕಡ್ಡಾಯವಾಗಿ ಕೇಳಲಾಗುತ್ತದೆ.
ಹೀಗಾಗಿ ಆದಾಯ ತೆರಿಗೆ ವ್ಯಾಪ್ತಿಗೆ ಬರದೇ ಇದ್ದರೂ ಪಾನ್ ಮತ್ತು ಆಧಾರ್ ಎರಡೂ ಹೊಂದಿರುವ ಹಿರಿಯ ವಯಸ್ಕರು, ವಿದ್ಯಾರ್ಥಿಗಳು, ಗೃಹಿಣಿಯರು, ಸ್ವಯಂ ಉದ್ಯೋಗಿಗಳು ಕೂಡಾ ಪಾನ್ ಜೊತೆ ಆಧಾರ್ ಸಂಯೋಜನೆ ಮಾಡುವುದು ಕಡ್ಡಾಯವಾಗಿದೆ.
ಆಧಾರ್ ಇಲ್ಲದಿದ್ದಲ್ಲಿ ರಿಯಾಯಿತಿ: ಪಾನ್ ಕಾರ್ಡ್ ಹೊಂದಿದ್ದು, ಆಧಾರ್ ಕಾರ್ಡ್ ಹೊಂದದೇ ಇದ್ದವರಿಗೆ ಸಂಯೋಜನೆ ಕಡ್ಡಾಯವಲ್ಲ. ಇಂಥವರ ಪಾನ್ಕಾರ್ಡ್ ಮಾನ್ಯತೆ ಕಳೆದುಕೊಳ್ಳುವುದಿಲ್ಲ.
ಆದಾಯ ತೆರಿಗೆ ಇಲಾಖೆಯ htpps://incometaxindiaefiling.gov.in/ ವೆಬ್ಸೈಟ್ ತೆರೆಯಿರಿ. ಎಡಭಾಗದಲ್ಲಿ ಲಿಂಕ್ ಹಿಯರ್ ಎಂಬ ಸೂಚನೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಹೊಸ ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ಪಾನ್, ಆಧಾರ್ನಲ್ಲಿ ಇರುವ ಹೆಸರು, ಹುಟ್ಟಿದ ದಿನಾಂಕ, ಆಧಾರ್ ನಂಬರ್ ದಾಖಲಿಸಿ, ಕೆಳಗೆ ನೀಡಿರುವ ಕ್ಯಾಪ್ಚಾ ತುಂಬಬೇಕು. ನಂತರ ಸಬ್ಮಿಟ್ ಬಟನ್ಒತ್ತಿದರೆ, ಪಾನ್ ಜೊತೆ ಆಧಾರ್ ಲಿಂಕ್ ಆಗಿರುವ ಬಗ್ಗೆ ಸಂದೇಶ ಬರುತ್ತದೆ.
ಆಧಾರ್ ಮಾಹಿತಿ ದುರ್ಬಳಕೆ ತಡೆಯಲು ‘ಲಾಕ್' ಮಾಡಿ
ಇತ್ತೀಚೆಗೆ ಆಧಾರ್ ಮಾಹಿತಿ ದುರ್ಬಳಕೆ ಆಗುತ್ತಿದೆ ಎಂಬ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಈ ಮಾಹಿತಿಯನ್ನು ಯಾರೂ ಕದಿಯದಂತೆ ಸುರಕ್ಷಿತವಾಗಿಡಲು ಆಧಾರ್ ಪ್ರಾಧಿಕಾರವು ತನ್ನ ವೆಬ್ಸೈಟ್ನಲ್ಲಿ ಅವಕಾಶ ಕಲ್ಪಿಸಿದೆ. ಆಧಾರ್ ವೆಬ್ಸೈಟ್ಗೆ ಹೋಗಿ ಆಧಾರ್ ಸಂಖ್ಯೆ, ಬಳಿಕ ಸೆಕ್ಯುರಿಟಿ ಕೋಡ್ ಹಾಗೂ ಕ್ಯಾಪ್ಚಾ ದಾಖಲಿಸಬೇಕು.
ಆಗ ಆಧಾರ್ನಲ್ಲಿ ನೋಂದಣಿಯಾದ ಮೊಬೈಲ್ಗೆ ಒಂದು ಒಟಿಪಿ ಸಂಕೇತ ಸಂಖ್ಯೆ ಬರುತ್ತದೆ. ಆ ಸಂಕೇತ ಸಂಖ್ಯೆಯನ್ನು ಬಳಿಕ ವೆಬ್ನಲ್ಲಿ ದಾಖಲಿಸಬೇಕು. ಆಗ ಆಧಾರ್ ಮಾಹಿತಿ ತನ್ನಿಂತಾನೇ ‘ಲಾಕ್' ಆಗುತ್ತದೆ.
ಇನ್ನು ‘ಅನ್ಲಾಕ್' ಮಾಡಬೇಕೆಂದರೆ ಕೂಡ ಈ ಮೇಲ್ಕಾಣಿಸಿದ ವಿಧಾನವನ್ನೇ ಅನುಸರಿಸಿ ಬೀಗ ತೆರೆಯಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.