
ಜೆರುಸಲೇಂ(ಏ.03): ಭಾರತ-ಇಸ್ರೇಲ್ ನಡುವೆ ಕಳೆದ ಜನೆವರಿಯಲ್ಲಿ ನಡೆದಿದ್ದ ರಕ್ಷಣಾ ಒಪ್ಪಂದದ ರಹಸ್ಯ ಕಡತಗಳನ್ನು ಇಸ್ರೇಲಿ ಅಧಿಕಾರಿಗಳು ಕಳೆದುಕೊಂಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಸ್ರೇಲ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೇರ್ ಬೆನ್, ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಮಿತಿಯೊಂದಿಗೆ ಕಳೆದ ಜನೆವರಿಯಲ್ಲಿ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಬೆನ್ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಈ ವೇಳೆ ಉಭಯ ರಾಷ್ಟ್ರಗಳ ನಡುವೆ ಹಲವು ಮಹತ್ವದ ಒಪ್ಪಂದ ಏರ್ಪಟ್ಟಿದ್ದು, ಪ್ರಮುಖವಾಗಿ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅಲ್ಲದೇ ಒಪ್ಪಂದದಲ್ಲಿ ಕೆಲವು ಅಂಶಗಳನ್ನು ರಹಸ್ಯವಾಗಿ ಇರಿಸಲಾಗಿತ್ತು.
ಆದರೆ ಇಸ್ರೇಲಿ ಅಧಿಕಾರಿಗಳು ಮರಳಿ ಸ್ವದೇಶಕ್ಕೆ ಹೋಗುವಾಗ ಈ ಕಡತಗಳನ್ನು ತಾವು ಉಳಿದುಕೊಂಡಿದ್ದ ಹೊಟೇಲ್ ನಲ್ಲೇ ಬಿಟ್ಟು ತೆರಳಿದ್ದರು. ಭಾರತ-ಇಸ್ರೇಲ್ ರಕ್ಷಣಾ ಒಪ್ಪಂದದ ಕಡತ ಟೈಪ್ ಮಾಡಿದ್ದ ಇಸ್ರೇಲ್ ನ ಓರ್ವ ಅಧಿಕಾರಿ, ತನ್ನ ಹೊಟೇಲ್ ಕೋಣೆಯಲ್ಲೇ ಈ ಕಡತವನ್ನು ಬಿಟ್ಟು ತೆರಳಿದ್ದರು.
ಆದರೆ ಅದೃಷ್ಟವಶಾತ್ ಅದೇ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಮಾಣಿಯೋರ್ವ ಈ ಕಡತಗಳನ್ನು ಪತ್ತೆ ಹಚ್ಚಿದ್ದಾನೆ. ಅಲ್ಲದೇ ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ತನ್ನ ಗಳೆಯನ ತಾಯಿಯನ್ನು ಸಂಪರ್ಕಿಸಿ ಈ ರಹಸ್ಯ ಕಡತಗಳನ್ನು ಇಸ್ರೇಲ್ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ.
ಒಂದು ವೇಳೆ ಈ ರಹಸ್ಯ ಕಡತಗಳು ಬಹಿರಂಗಗೊಂಡಿದ್ದರೆ ಭಾರತ-ಇಸ್ರೇಲ್ ರಹಸ್ಯ ರಕ್ಷಣಾ ಒಪ್ಪಂದದ ಕುರಿತು ಶತ್ರುರಾಷ್ಟ್ರಗಳ ಗಮನಕ್ಕೆ ಬಂದಿರುತ್ತಿತ್ತು. ಅದಾಗ್ಯೂ ಇಸ್ರೇಲ್ ಈ ಕುರಿತು ತನಿಖೆಗೆ ಆದೇಶಿಸಿದ್ದು, ಕಡತಗಳನ್ನು ಜೋಪಾನವಾಗಿ ಇಸ್ರೇಲ್ ರಾಯಭಾರ ಕಚೇರಿಗೆ ಒಪ್ಪಿಸಿದ ಹೊಟೇಲ್ ಮಾಣಿಗೆ ಧನ್ಯವಾದ ಅರ್ಪಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.