
ನವದೆಹಲಿ (ಮೇ.29): ದೇಶದ ಉತ್ತರ ಮತ್ತು ಪೂರ್ವದ ರಾಜ್ಯಗಳಲ್ಲಿ ಉಷ್ಣಾಂಶದಲ್ಲಿ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಮಂಗಳವಾರ ರಾಜಸ್ಥಾನದ ಚುರು ಮತ್ತು ಹರ್ಯಾಣದ ಸಿರ್ಸಾದಲ್ಲಿ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಷಿಯಸ್ ದಾಟಿದೆ. ಚುರುನಲ್ಲಿ 50.5 ಡಿಗ್ರಿ ಮತ್ತು ಸಿರ್ಸಾದಲ್ಲಿ 50.3 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಚುರುವಿನಲ್ಲಿ ದಾಖಲಾದ ಉಷ್ಣಾಂಶ ಸಾಮಾನ್ಯಕ್ಕಿಂತ 7 ಡಿಗ್ರಿಯಷ್ಟು ಹೆಚ್ಚಳವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 2019ರಲ್ಲಿ 50.8 ಡಿಗ್ರಿ ದಾಖಲಾಗಿತ್ತು.ಇನ್ನು ರಾಜಧಾನಿ ದೆಹಲಿಯ ಹಲವು ಪ್ರದೇಶಗಳಲ್ಲೂ ಬುಧವಾರ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸಮೀಪಕ್ಕೆ ತಲುಪಿದೆ. ಮುಂಗೇಶ್ಪುರ, ನರೇಲಾದಲ್ಲಿ 49.4 ಡಿಗ್ರಿ ತಾಪಮಾನ ತಲುಪಿದ್ದು, ಸಾಮಾನ್ಯ ಅವಧಿಗಿಂತ ಶೇ.9ರಷ್ಟು ಹೆಚ್ಚಾಗಿದೆ.
ಈ ಮೂಲಕ ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ದೆಹಲಿಗಳು ತೀವ್ರವಾದ ಉಷ್ಣಾಂಶದ ಅಲೆಗೆ ನಲುಗಿ ಹೋಗಿದೆ. ಮತ್ತು ಕೆಲವು ಪ್ರದೇಶಗಳಲ್ಲಿ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ಮೀರಿದೆ. ಹೀಗಾಗಿ ರಾಜಸ್ಥಾನ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ ಮತ್ತು ಗುಜರಾತ್ ನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಿಮಾಚಲ ಪ್ರದೇಶದ ಬೆಟ್ಟಗಳು, ಬಯಲು ಸೀಮೆಯು ತೀವ್ರವಾದ ಶಾಖವನ್ನು ಕಾಣದಂತಹ ಜನಪ್ರಿಯ ತಾಣವಾಗಿದ್ದು, ಈ ಬಾರಿ ಈ ಪ್ರದೇಶ ಕೂಡ ಸುಡುವ ತಾಪಮಾನವನ್ನು ಎದುರಿಸುತ್ತಿದೆ. ಶಿಮ್ಲಾ 30.6 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಈ ಋತುವಿನ ಅತ್ಯಂತ ಬಿಸಿಯಾದ ದಿನವನ್ನು ಕಂಡಿದೆ.
ಮಂಗಳವಾರ ಹೀಟ್ ಸ್ಟ್ರೋಕ್ನಿಂದ ಜೈಪುರದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ, ಸೋಮವಾರ ಒಟ್ಟು ಹೀಟ್ ಸ್ಟ್ರೋಕ್ ಪ್ರಕರಣಗಳ ಸಂಖ್ಯೆ 3965 ಕ್ಕೆ ಏರಿದೆ. ಮೃತಪಟ್ಟವರು ಆಗ್ರಾ ಮತ್ತು ದೆಹಲಿಯವರು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಝಲಾವರ್ ಜಿಲ್ಲೆಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದ ಎರಡು ನವಜಾತ ಶಿಶುಗಳು ಮಂಗಳವಾರ ಸಾವನ್ನಪ್ಪಿವೆ. ಆಸ್ಪತ್ರೆಯಲ್ಲಿ ಕೂಲರ್ ಅಥವಾ ವೈದ್ಯರಿಲ್ಲದ ಕಾರಣ ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ರಾಜಸ್ಥಾನದಲ್ಲಿ 50 ಡಿಗ್ರಿ ಉಷ್ಣಾಂಶ: ದೇಶದಲ್ಲೇ ಅಧಿಕ:
ರಾಜಸ್ಥಾನದಲ್ಲಿ ಫಲೋಡಿಯಲ್ಲಿ ಮೇ.25ರಂದು 50 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಈ ಮೂಲಕ ದೇಶದ ಗರಿಷ್ಠ ತಾಪಮಾನ ದಾಖಲಾಗಿದೆ. ಫಲೋಡಿ ಬಳಿಕ ಬಾಢಮೇರ್ನಲ್ಲಿ 48.8 ಡಿಗ್ರಿ, ಜೈಸಲ್ಮೇರ್ನಲ್ಲಿ 48 ಡಿಗ್ರಿ, ಬಿಕಾನೇರ್ನಲ್ಲಿ 47.2 ಡಿಗ್ರಿ, ಚುರುವಿನಲ್ಲಿ 47 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಲ್ಲದೆ ಉತ್ತರ ಭಾರತದ ಇತರ ರಾಜ್ಯಗಳಲ್ಲಿ 45 ಡಿಗ್ರಿಗಿಂತ ಹೆಚ್ಚು ತಾಪ ದಾಖಲಾಗಿದೆ. ಶುಕ್ರವಾರ ರಾಜಸ್ಥಾನದಲ್ಲಿ 49 ಡಿ.ಸೆ ತಾಪಮಾನ ದಾಖಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.