ಸಿದ್ದು ಭೇಟಿಯಾದ ಪೀರಪ್ಪ, ರಾಹುಲ್ ಅಜ್ಜಿಯ ಮಾನ ತೆಗೆದರಪ್ಪ: ಡಿ.16ರ ಟಾಪ್ 10 ಸುದ್ದಿ!

By Suvarna NewsFirst Published Dec 16, 2019, 4:36 PM IST
Highlights

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಡಿ.16 ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|

ಬೆಂಗಳೂರು(ಡಿ.16): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. ಉನ್ನಾವ್‌ ರೇಪ್‌ ಕೇಸ್‌: ಬಿಜೆಪಿ ಉಚ್ಛಾಟಿತ ಶಾಸಕ ದೋಷಿ!

ಉತ್ತರ ಪ್ರದೇಶದ ಉನ್ನಾವ್‌ನಲ್ಲಿ 2 ವರ್ಷದ ಹಿಂದೆ[2017] ನಡೆದಿದ್ದ ಯುವತಿಯೊಬ್ಬಳ ಅಪಹರಣ, ಅತ್ಯಾಚಾರದ ಪ್ರಕರಣದ ತೀರ್ಪನ್ನು ಸ್ಥಳೀಯ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್‌ ಸೇಂಗರ್‌ರನ್ನು ದೋಷಿ ಎಂದು ಘೋಷಿಸಿದೆ.

2. ನೆರೆ ಸಂತ್ರಸ್ತರ ಮೇಲೆ ವಿಶೇಷ ಕಾಳಜಿಯ ಪೋಸು ಕೊಟ್ಟಿದ ರೇಣುಕಾಚಾರ್ಯ ಬಂಡವಾಳ ಬಯಲು!

ಕಳೆದ ಆಗಸ್ಟ್‌ನಲ್ಲಿ ರಾಜ್ಯ ಕಂಡ ಭೀಕರ ನೆರೆ ಪರಿಸ್ಥಿತಿ ಸಂದರ್ಭದಲ್ಲಿ ನೀರಿಲ್ಲದ ಕಡೆ ತೆಪ್ಪಕ್ಕೆ ಹುಟ್ಟುಹಾಕಿ ನಗೆಪಾಟಲಿಗೀಡಾಗಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ ಈಗ  ಪ್ರವಾಹ ಸಂತ್ರಸ್ತರು ಆಕ್ರೋಶಗೊಳ್ಳುವ  ರೀತಿಯಲ್ಲಿ ವರ್ತಿಸಿದ್ದಾರೆ.

3. ಯಶ್ ಮಾತು ಕೇಳಿ ಸೆಲ್ಫಿ ಕೇಳಲು ಬಂದ ಸೈನಿಕರಿಗೆ ಸರ್ಪ್ರೈಸ್!

ಯಶ್ ಕಾರ್ಯಕ್ರಮವೊಂದನ್ನು ಮುಗಿಸಿ ಬೆಂಗಳೂರಿಗೆ ವಾಪಸ್ಸಾಗುವಾಗ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ನಮ್ಮ ಸೈನಿಕರು ಬೇರೆ ಬೇರೆ ಊರಿಗೆ ತೆರಳುತ್ತಿದ್ದರು. ಯಶ್‌ರನ್ನು ಕಂಡ ಕೂಡಲೇ ವಿಶ್ ಮಾಡಿ ಸೆಲ್ಫಿ ಕೇಳಿದರು. ಆಗ ಯಶ್, 'ಸರ್ ನಾವು ನಿಮ್ಮ ಜೊತೆ ಸೆಲ್ಫಿ ಕೇಳಬೇಕು. ನೀವು ನಮ್ಮ ದೇಶದ ವೀರರು.  ನಿಮ್ಮ ಜೊತೆ ಫೋಟೋ ತೆಗೆದುಕೊಳ್ಳೋದೇ ನಮ್ಮ ಅದೃಷ್ಟ. ನಿಮ್ಮ ಮುಂದೆ ನಾವೇನು ಅಲ್ಲ' ಎಂದು ಹೇಳಿ ಆಪ್ತತೆ ಮೆರೆದರು.

4. ರಾಹುಲ್, ಸಾವರ್ಕರ್ ಅವರದ್ದಲ್ಲ ಅವರ ಅಜ್ಜಿಯ ಮರ್ಯಾದೆ ತೆಗೆದಿದ್ದಾರೆ: ಬಿಜೆಪಿ!

'ನಾನು ರಾಹುಲ್ ಸಾವರ್ಕರ್ ಅಲ್ಲ..'ಎನ್ನುವ ಮೂಲಕ ರಾಹುಲ್ ಗಾಂಧಿ ವೀರ್ ಸಾವರ್ಕರ್ ಅವರದ್ದಲ್ಲ ಬದಲಿಗೆ ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಅಣಕಿಸಿದೆ.

5. ಪರಂ ಮತ್ತೊಂದು ಕರ್ಮಕಾಂಡ ಬಯಲಿಗೆ? ಐಟಿ ತನಿಖೆಯಿಂದ ಸ್ಫೋಟಕ ಮಾಹಿತಿ ಹೊರಗೆ

ಕೆಲದಿನದ ಹಿಂದೆ ಗ್ರಾಮ ಪಂಚಾಯತ್‌ಗೆ ಕಂದಾಯ ಕಟ್ಟದೇ ಸುದ್ದಿಯಾಗಿದ್ದ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪರಮೇಶ್ವರ್ ಮಾಲೀಕತ್ವದ ಸಂಸ್ಥೆಗಳು ಕಳೆದ ನಾಲ್ಕು ವರ್ಷಗಳಿಂದ ಅಪಾರ ಆದಾಯವಿದ್ದರೂ ತೆರಿಗೆಯನ್ನು ಕಟ್ಟದೆ, ಸರ್ಕಾರಕ್ಕೆ ವಂಚಿಸಿರುವ ಆರೋಪ ಕೇಳಿ ಬಂದಿದೆ.

6. ಸಚಿನ್‌‌ಗೆ ಬ್ಯಾಟಿಂಗ್ ಟಿಪ್ಸ್ ಕೊಟ್ಟಿದ್ದ ಹೋಟೆಲ್ ಮಾಣಿ ಸಿಕ್ಕರೆ ಹೇಳಿ, ಪ್ಲೀಜ್!

‘ಕ್ರಿಕೆಟ್‌ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌ ಶನಿವಾರ ಟ್ವೀಟರ್‌ನಲ್ಲಿ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದರು.  ಚೆನ್ನೈನಲ್ಲಿ ಟೆಸ್ಟ್‌ ಸರಣಿ ಆಡುತ್ತಿದ್ದ ವೇಳೆ ತಾವು ಉಳಿದುಕೊಂಡಿದ್ದ ತಾಜ್‌ ಹೋಟೆಲ್‌ನಲ್ಲಿ ಮಾಣಿಯೊಬ್ಬ ತಮಗೆ ಬ್ಯಾಟಿಂಗ್‌ ಸಲಹೆಯೊಂದನ್ನು ನೀಡಿದ್ದ. ಆ ಸಲಹೆ ದೊಡ್ಡ ಮಟ್ಟದಲ್ಲಿ ನೆರವಾಯಿತು. ಆ ಮಾಣಿ ಈಗ ಎಲ್ಲಿದ್ದಾನೆ ಎಂದು ಯಾರಿಗಾದರೂ ಗೊತ್ತಿದ್ದರೆ ತಿಳಿಸಿ ಎಂದು ಟ್ವೀಟ್‌ ಮಾಡಿದ್ದರು.

7. ಹೊರಡಿ ಬೇಗನೆ: ನ್ಯಾಶನಲ್ ಕಾಲೇಜ್ ವಿಜ್ಞಾನ ಮೇಳಕ್ಕೆ ಚಾಲನೆ

ಭಾರತೀಯ ಬುದ್ದಿಮತ್ತೆ ವಿಶ್ವದ ಸಕಲ ಜ್ಞಾನವನ್ನು ತನ್ನೊಡಲಲ್ಲಿ ಇಟ್ಟುಕೊಂಡಿದ್ದು, ಇದರ ಸದುಪಯೋಗವೇ ಸಶಕ್ತ ಸಮಾಜ ನಿರ್ಮಾಣಕ್ಕಿರುವ ದಾರಿ ಎಂದು ಅಮೆರಿಕದ ಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಕಂಪ್ಯೂಟಿಂಗ್ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿರ್ದೇಶಕ ಎಸ್.ಎಸ್. ಅಯ್ಯಂಗಾರ್ ಅಭಿಪ್ರಾಯಪಟ್ಟಿದ್ದಾರೆ.

8. ಕೋಲ್ಕತ್ತಾ ಬೀದಿಯಲ್ಲಿ ಸಾವಿರಾರು ಜನರ ಮಧ್ಯೆ ದೀದಿ: CAA ವಿರುದ್ಧ ಪ್ರತಿಭಟನೆ!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೋಲ್ಕತ್ತಾದಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಸಾವಿರಾರು CAA ವಿರೋಧಿ ಪ್ರತಿಭಟನಾಕಾರರು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

9. ಅಮ್ಮನ ಬೈಗುಳ ಇಷ್ಟವಾಗಬೇಕೆಂದರೆ ಮದುವೆಯಾಗಬೇಕು!

ಮದುವೆಗೆ ಮುನ್ನ ಅಮ್ಮನ ಬೈಗುಳಕ್ಕೆ ಸಿಟ್ಟಾಗುವ ಮಗಳು, ಮದುವೆ ಬಳಿಕ ಅವುಗಳನ್ನು ಮಿಸ್ ಮಾಡಿಕೊಳ್ಳಲಾರಂಭಿಸುತ್ತಾಳೆ. ಪ್ರತಿ ಕೆಲಸ ಮಾಡುವಾಗಲೂ ಅಮ್ಮನ ಮಾತನ್ನು ಮೆಲುಕು ಹಾಕುತ್ತ ತಾನೇ ಅಮ್ಮನಾಗುತ್ತಾಳೆ. ಸಂಸಾರದ ಜವಾಬ್ದಾರಿಗಳಿಗೆ ಹೆಗಲಾಗುತ್ತಾಳೆ.

10. ಸಿದ್ದು ಕಾಲಿಗೆ ಬಿದ್ದು 'ಹೌದು ಹುಲಿಯಾ' ಹೇಳಿದ್ದು ಒಂದೇ ಮಾತು

ಕಾಗವಾಡದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಸಿದ್ದರಾಮಯ್ಯ ಭಾಷಣ  ಮಾಡುವಾಗ, ಅಭಿಮಾನಿ  ಪೀರಪ್ಪ ತುಕ್ಕಪ್ಪ ಕಟ್ಟಿಮನಿ ಹೌದು ಹುಲಿಯಾ ಎಂದು ಘೋಷಣೆ ಕೂಗಿ  ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದರು. ನಾನು ನಿಮ್ಮ ಅಭಿಮಾನಿ ಎಂದು ಪೀರಪ್ಪ ಮತ್ತೆ ಹೇಳಿ ಸಿದ್ದರಾಮಯ್ಯ ಕಾಲಿಗೆ ಬಿದ್ದಿದ್ದಾರೆ. ಹೌದು ಹುಲಿಯಾ ಖ್ಯಾತಿಯ ಪೀರಪ್ಪ ತುಕ್ಕಪ್ಪ ಕಟ್ಟಿಮನಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

click me!