
ಚಿಕ್ಕಬಳ್ಳಾಪುರ(ಆ.05): ಸಂಚಾರ ಅವ್ಯವಸ್ಥೆಯಿಂದಾಗಿ ನಾನಾ ಕಡೆ ವಿಮಾನದಲ್ಲಿ ಸಂಚರಿಸುವವರು ಸಮಯಕ್ಕೆ ಸರಿಯಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗದ ಸ್ಥಿತಿ, ಇನ್ನು ಅಮೂಲ್ಯವಾದ ಸಮಯದಲ್ಲಿ ಹಲವು ಗಂಟೆಗಳು ರಸ್ತೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ, ಈ ಎಲ್ಲ ಸಮಸ್ಯೆಗಳಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗ ಮಾರ್ಗೋಪಾಯ ಕಂಡು ಹಿಡಿದಿದೆ.
ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗಾಗಿ ಹೆಲಿಕಾಪ್ಟರ್ ಸೇವೆ ಆರಂಭಿಸಿದ್ದು, ಪ್ರಸ್ತುತ ಎರಡು ಹೆಲಿಕಾಪ್ಟರ್ಗಳಿಗೆ ಶುಕ್ರವಾರ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಕಾಪ್ಟರ್ಗಳನ್ನು ಹೆಚ್ಚಿಸುವ ಉದ್ದೇಶವನ್ನು ವಿಮಾನಯಾನ ಸಂಸ್ಥೆ ಹೊಂದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಥಾಣದಲ್ಲಿ ಕೇಂದ್ರ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಶುಕ್ರವಾರ ಚಾಲನೆ ನೀಡಿದ್ದಾರೆ. ರಾಜ್ಯ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ವಿಮಾನ ನಿಲ್ದಾಣ ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಆ.5ರಿಂದ ಕೆಐಎಎಲ್ ಪ್ರಯಾಣಿಕರಿಗೆ ಹೆಲಿಕಾಪ್ಟರ್ ಸೇವೆ ಸಿಗಲಿದ್ದು, ಎರಡು ಹೆಲಿಕ್ಯಾಪ್ಟರ್ಗಳು ಕಾರ್ಯನಿರ್ವಹಿಸುತ್ತಿವೆ. ಪೀಣ್ಯ, ಎಲೆಕ್ಟ್ರಾನಿಕ್ ಸಿಟಿ, ಹಳೆ ಏರ್ಪೋಟ್ (ಎಚ್ಎಎಲ್)ನಿಂದ ಹೆಲಿಕಾಪ್ಟರ್ ಸೇವೆ ಸಲ್ಲಿಸಲಿವೆ. ಮೆಜೆಸ್ಟಿಕ್ನಲ್ಲಿ ಶೀಘ್ರದಲ್ಲಿಯೇ ಸೇವೆ ಆರಂಭವಾಗಲಿದೆ. ವಿಮಾನಗಳು ಹೊರಡುವ ಸಮಯಕ್ಕೆ ಅನುಗುಣವಾಗಿ ಹೆಲಿಕಾಪ್ಟರ್ಗಳ ಸಮಯವನ್ನು ಹೊಂದಿಸಿಕೊಳ್ಳಲಾಗುತ್ತದೆ. ಹೆಲಿ ಟ್ಯಕ್ಸಿಗಳ ದರವು ಉನ್ನತ ಹಂತದ ಟ್ಯಾಕ್ಸಿಗಳ ಬಾಡಿಗೆ ಇರಲಿದೆ. ಆದರೆ ಎಷ್ಟು ಎನ್ನುವುದನ್ನು ಅಧಿಕಾರಿಗಳು ಖಚಿತ ಪಡಿಸಿಲ್ಲ. ಥುಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಆರಂಭವಾಗಿರುವ ಹೆಲಿ ಟ್ಯಾಕ್ಸಿ ಸೇವೆಯಲ್ಲಿ ಒಂದು ಹೆಲಿಕಾಪ್ಟರ್ನಲ್ಲಿ ಒಮ್ಮೆಗೆ 5 ಮಂದಿ ಮತ್ತು ಇನ್ನೊಂದು ಕಾಪ್ಟರ್ನಲ್ಲಿ 13 ಮಂದಿ ಏಕಕಾಲದಲ್ಲಿ ಪ್ರಯಾಣಿಸಬಹುದಾಗಿದೆ.
ಕೆಲವು ತಿಂಗಳುಗಳಲ್ಲಿ ಮತ್ತಷ್ಟು ಕಾಪ್ಟರ್ ಸೌಲಭ್ಯ
ಮುಂದಿನ ಮೂರು ತಿಂಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಕಾಪ್ಟರ್ಗಳನ್ನು ಹೆಚ್ವಿಸುವುದಾಗಿ ಕೇಂದ್ರ ಸಚಿವರು ಇದೇ ಸಂದರ್ಭದಲ್ಲಿ ಘೋಷಿಸಿದರು. ನೂತನ ಹೆಲಿಕಾಪ್ಟರ್ ಸೇವೆಯಿಂದ ಪ್ರಯಾಣಿಕರಿಗೆ ಸಂಚಾರಿ ಕಿರಿ ಕಿರಿ ತಪ್ಪಲಿದ್ದು, ವಿಮಾನ ನಿಲ್ಥಾಣಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಸಹಕಾರಿಯಾಗಲಿದೆ ಎಂದು ಕೇಂದ್ರ ಸಚಿವ ಜಯಂತ್ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರಿಯಾ ವಿಮಾನ ನಿಲ್ಥಾಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾರಂಭದಿಂದಲೂ ಉತ್ತಮ ಸೇವೆ ನೀಡುವಲ್ಲಿ ದೇಶದಲ್ಲಿಯೇ ಖ್ಯಾತಿ ಗಳಿಸಿರುವ ಈ ವಿಮಾನ ನಿಲ್ದಾಣ ಪ್ರಸ್ತುತ ಸೇವೆಯಿಂದ ಇನ್ನಷ್ಟು ಬಲಗೊಂಡಿದೆ ಎಂದರು.
ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ನಾನಾ ಕಡೆಗಳಿಂದ ವಿಮಾನ ನಿಲ್ಥಾಣಕ್ಕೆ ತೆರಳುವ ಪ್ರಯಾಣಿಕರು ಸಮಯದ ಅಭಾವದಿಂದ ಪರದಾಡುವಂತಾಗಿತ್ತು. ಇಂತಹ ಸಂಚಾರಿ ಸಸ್ಯೆಯಿಂದ ಬಳಲುತ್ತಿದ್ದ ಪ್ರಯಾಣಿಕರಿಗೆ ವಿಮಾನ ನಿಲ್ಥಾಣ ಪ್ರಾಧಿಕಾರ ಮತ್ತೊಂದು ಮೆಗಾ ಪ್ಲಾನ್ ಮಾಡಿದ್ದು, ಇದರಿಂದ ವಿಮಾನ ತಪ್ಪುತ್ತದೆ ಎಂಬ ಆತಂಕ ಪಡುತ್ತಿದ್ದ ಪ್ರಯಾಣಿಕರ ಪಾಲಿಗೆ ವರದಾನವಾಗಲಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಮಹಾನಗರಕ್ಕೆ ಹೆಲಿ ಟ್ಯಾಕ್ಸಿ ಸೇವೆ ಅಗತ್ಯವಾಗಿದ್ದು, ಪ್ರಯಾಣಿಕರಿಗೆ ಕೈ ಗಟುಕುವ ಲಕ್ಜುರಿ ಟ್ಯಾಕ್ಸಿ ಬೆಲೆಯಲ್ಲಿ ಹೆಲಿ ಟ್ಯಾಕ್ಸಿ ಸೇವೆ ಸಿಗಲಿದೆ, ಕೆಂಪೇಗೌಡ ಅಂತಾರಾಷ್ಟಿಯಾ ವಿಮಾನ ನಿಲ್ಥಾಣ ಪ್ರಯಾಣಿಕರಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಸಂತಸ ವಕ್ತಪಡಿಸಿದರು.
ಒಟ್ಟಿನಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ತೀವ್ರ ಪರದಾಡುತ್ತಿದ್ದ ವಿಮಾನ ನಿಲ್ದಾಣ ಪ್ರಯಾಣಿಕರ ಪಾಲಿಗೆ ಪ್ರಸ್ತುತ ಹೆಲಿಟ್ಯಾಕ್ಸಿ ಸೇವೆ ವರದಾನವಾಗಲಿದ್ದು, ಪ್ರಯಾಣಿಕರು ಎಷ್ಟರ ಮಟ್ಟಿಗೆ ಇದರ ಸದುಪಯೋಗ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.