
ಬೆಂಗಳೂರು(ಮೇ.27): ಬೆಂಗಳೂರಿನಲ್ಲಿ ರಾತ್ರಿ ಸುರಿದ ಗುಡುಗು-ಮಿಂಚು ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ರಾತ್ರಿ 8 ಗಂಟೆಗೆ ಆರಂಭವಾದ ಮಳೆ ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಕಾರ್ಪೋರೇಷನ್, ಕೋರಮಂಗಲ, ಜಯನಗರ, ಜೆ.ಪಿ.ನಗರ, ಹೆಬ್ಬಾಳ, ಕೆ.ಆರ್.ಪುರಂ ಸೇರಿದಂತೆ ನಗರದ ಹಲವೆಡೆ ರೋಹಿಣಿ ಅಬ್ಬರಿಸಿದ್ದಾಳೆ.
ಇನ್ನು ರಾತ್ರಿ ಸುರಿದ ಭಾರೀ ಮಳೆಗೆ ನಗರದಲ್ಲಿ 11ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಹೆಬ್ಬಾಳ, ಶಾಂತಿನಗರ, ಡಬಲ್ರೋಡ್, ಸಂಜಯ್ನಗರ, ಕೋರಮಂಗಲ, ಕಾರ್ಪೋರೇಷನ್, ಪುಲಿಕೇಶಿ ನಗರ, ಬಿಟಿಎಂ ಲೇಔಟ್ ಸೇರಿದಂತೆ ಹಲವಡೆ ಮರಗಳು ನೆಲಕ್ಕುರುಳಿವೆ. ಇತ್ತ ಶಿವಾನಂದ ಸರ್ಕಲ್ ಬಳಿಯ ರೈಲ್ವೆ ಬ್ರಿಡ್ಜ್ ಕೆಳಗಡೆ ನೀರಿನಲ್ಲಿ ಕಾರು ಮುಳುಗಿದೆ. ಶೇಷಾದ್ರಿಪುರಂನ ಮನೆಯೊಂದಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಇತ್ತ ಹೆಬ್ಬಾಳ, ಕಸ್ತೂರಿ ಬಾ ರಸ್ತೆ ಸೇರಿದಂತೆ ಹಲವಡೆ ವಿದ್ಯುತ್ ಕಂಬ ಬಿದ್ದು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಹಲವಡೆ ವಾಹನಗಳ ಮೇಲೆ ಮರಗಳು ಬಿದ್ದು ವಾಹನಗಳು ಜಖಂಗೊಂಡಿದೆ. ಇತ್ತ ಬಿಬಿಎಂಪಿ ಸಹಾಯವಾಣಿ ಆರಂಭಿಸಿದ್ದು, ಮೇಯರ್ ಜಿ.ಪದ್ಮಾವತಿಯವರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಇನ್ನು ಧಾರಾಕಾರ ಮಳೆ ಹಿನ್ನೆಲೆ ಜಯನಗರ, ಹಳೆ ಏರ್ಪೋರ್ಟ್ ರಸ್ತೆ, ಮಡಿವಾಳ, ಶಾಂತಿನಗರ, ಶಿವಾನಂದ, ಕಾರ್ಪೋರೇಷನ್ ಸೇರಿದಂತೆ ಹಲವೆಡೆ ಸುಮಾರು 2 ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್ ಆಗಿದ್ದು ಸವಾರರಿಗೆ ತೀವ್ರ ತೊಂದರೆಯಾಗಿತ್ತು. ಒಟ್ನಲ್ಲಿ ಮೊದಲಿಗೆ ಬ್ರೇಕ್ ಕೊಟ್ಟು ಆಮೇಲೆ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಗಾರ್ಡನ್ ಸಿಟಿ ಜನರಿಗೆ ಒಂದು ಕಡೆ ಖುಷಿ ಮತ್ತೊಂದು ಕಡೆ ಸಂಕಷ್ಟವೂ ಎದುರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.