ಹಾಸನದಲ್ಲಿ ರೇವಣ್ಣ ಕಣ್ಣಿರು ಹಾಕಿದ ಘಟನೆ ನಡೆದಿದೆ. ರೇವಣ್ಣ ಅವರು ಕಣ್ಣಿರು ಹಾಕಲು ಕಾರಣವಾಗಿದ್ದು ಹೋಟೆಲ್ ನಲ್ಲಿ ತಿಂದ ಮೆಣಸಿನ ಕಾಯಿ ಬಜ್ಜಿ ಆಗಿತ್ತು.
ಹಾಸನ: ಮೆಣಸಿನಕಾಯಿ ಬಜ್ಜಿ ತಿಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕಣ್ಣೀರು ಹಾಕಿದ ಘಟನೆ ಸೋಮವಾರ ನಗರದಲ್ಲಿ ನಡೆದಿದೆ.
ನಗರದ ಖಾಸಗಿ ಹೋಟೆಲ್ ವೊಂದರಲ್ಲಿ ಸಚಿವರ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಚಿವರಿಗೆ ಹೋಟೆಲ್ ಮಾಣಿ ಮೆಣಸಿನಕಾಯಿ ಬಜ್ಜಿ ತಂದು ನೀಡಿದ್ದ. ರೇವಣ್ಣ ಅದನ್ನು ತಿಂದಿದ್ದೇ ತಡ ಕಣ್ಣಲ್ಲಿ ನೀರು ಸುರಿಯಲು ಆರಂಭಿಸಿತು. ಕಣ್ಣೀರು ಒರೆಸಿಕೊಂಡು, ನೀರು ಕುಡಿದು ಸುಧಾರಿಸಿಕೊಂಡರು.
ಆ ಕ್ಷಣದಲ್ಲಿ ಸಚಿವರು ಬಜ್ಜಿ ನೀಡಿದ ಹೋಟೆಲ್ ಮಾಣಿಯನ್ನು ಉದ್ದೇಶಿಸಿ ಜೈಲಲ್ಲಿ ನೀಡುವ ರೀತಿ ಖಾರದ ಬಜ್ಜಿ ನೀಡ್ತಿಯಲ್ಲಪ್ಪ, ನಂಗೆ ಮೆಣಸಿನ ಕಾಯಿ ಬಜ್ಜಿ ಬೇಡ ಆಲೂಗಡ್ಡೆ ಅಥವಾ ಹೀರೇಕಾಯಿ ಬಜ್ಜಿ ನೀಡು ಎಂದು ಹೇಳಿ ತಮಾಷೆ ಮಾಡಿದರು. ಇನ್ನು ಮುಂದೆ ಮೆಣಸಿನಕಾಯಿ ಬಜ್ಜಿನೇ ತಿನ್ನಬಾರದು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಕ್ಕು ಬಿಟ್ಟರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.