ಪ್ರಜ್ವಲ್ ರೇವಣ್ಣ ಲೋಕಸಭೆಗೆ ಸ್ಪರ್ಧಿಸಲಿದ್ದಾರಾ ? ಮಹಾಮೈತ್ರಿಗೆ ಯಾರ ನೇತೃತ್ವ ?

By Web DeskFirst Published Aug 4, 2018, 6:21 PM IST
Highlights

ಮುಂದಿನ ಚುನಾವಣೆಯಲ್ಲೂ ದೇವೇಗೌಡರು ಹಾಸನದಿಂದ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ ಎಂಬ ಗುಸುಗುಸು ಶುರುವಾಗಿದೆ. ಪ್ರಜ್ವಲ್ 2ನೇ ಬಾರಿಯೂ ಟಿಕೆಟ್ ಮಿಸ್ ಮಾಡಿಕೊಳ್ಳುತ್ತಾರಾ ಎಂಬುದೇ ಸದ್ಯದ ಪ್ರಶ್ನೆ.

ಹಾಸನ[ಆ.04]: ದೇವೇಗೌಡರ ಕುಟುಂಬದಲ್ಲಿ ಹೊಸಬರ ಪ್ರವೇಶ ಯಾರೆಂಬುದರ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ,ರೇವಣ್ಣ ಮಾತ್ರ ಸ್ಪರ್ಧಿಸಿ ಇಬ್ಬರು ವಿಜಯ ಸಾಧಿಸಿ ಒಬ್ಬರು ಮುಖ್ಯಮಂತ್ರಿಯಾಗಿ, ಮತ್ತೊಬ್ಬರು ಪ್ರಭಾವಿ ಸಚಿವರಾಗಿದ್ದಾರೆ.

ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಹಾಗೂ ಭವಾನಿ ರೇವಣ್ಣ ಮೂವರಲ್ಲಿ ಯಾರಾದರೂ ಒಬ್ಬರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ನಿರೀಕ್ಷೆಗಳು ಕಾರ್ಯಕರ್ತರಲ್ಲಿತ್ತು. ಆದರೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಇವೆಲ್ಲಕ್ಕೂ ತಿಲಾಂಜಲಿ ನೀಡಿ ಪ್ರಜ್ವಲ್ ಮಾತ್ರ  ನನ್ನ ಬದಲು ಲೋಕಸಭೆಯಲ್ಲಿ ಹಾಸನದಲ್ಲಿ ಸ್ಪರ್ಧಿಸುತ್ತಾರೆ ಇದು ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿಬಿಟ್ಟರು. ಆದರೆ ಮುಂದಿನ ಚುನಾವಣೆಯಲ್ಲೂ ದೇವೇಗೌಡರು ಹಾಸನದಿಂದ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ ಎಂಬ ಗುಸುಗುಸು ಶುರುವಾಗಿದೆ. ಪ್ರಜ್ವಲ್ 2ನೇ ಬಾರಿಯೂ ಟಿಕೆಟ್ ಮಿಸ್ ಮಾಡಿಕೊಳ್ಳುತ್ತಾರಾ ಎಂಬುದೇ ಸದ್ಯದ ಪ್ರಶ್ನೆ.

ಇವತ್ತೇ ರಾಜಕೀಯ ಮುಗಿದು ಹೋಗಿಲ್ಲ ಎಂದ ರೇವಣ್ಣ 
ಪ್ರಜ್ವಲ್ ಮುಂದಿನ ಬಾರಿ ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ  ಸಚಿವ ರೇವಣ್ಣ, ಪ್ರಜ್ವಲ್‌ ಗೆ ರಾಜಕೀಯವಾಗಿ ಬೆಳೆಯಲು ಇನ್ನೂ  ಸಮಯವಿದೆ .
ಅವರು ಪಕ್ಷದ ಪ್ರದಾನ ಕಾರ್ಯದರ್ಶಿಯಾಗಿದ್ದಾರೆ ಹೆಚ್ಚು ಕೆಲಸ ಮಾಡಲಿ. ನಾನು ಶಾಸಕನಾಗಿದ್ದು 32 ನೇ ವರ್ಷಕ್ಕೆ. ಇವತ್ತೆ ರಾಜಕೀಯವೇನು ಮುಗಿದು ಹೋಗಲ್ಲ. ಅವರು ಬಡವರ ಪರ ಕೆಲಸ ಮಾಡಲಿ ಎಂದು ಚುನಾವಣೆಯ ಸ್ಪರ್ಧೆ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ  ಮಾತನಾಡಿದ ಅವರು,  ದೇವೇಗೌಡರು ಹಾಗೂ  ಕುಮಾರಸ್ವಾಮಿ ಈ ಬಗ್ಗೆ ನಿರ್ದಾರ ಮಾಡಲಿದ್ದಾರೆ. ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾದ್ಯಕ್ಷರಾದ್ರೆ ನಮಗೂ ಸಂತೋಷ. ಅವರು ನಮ್ಮ ನಾಯಕರು,ನಾವೇನು ಬೇಡಾ ಅನ್ನೋದಿಲ್ಲ. ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧ ಎಂದು ತಿಳಿಸಿದರು.

ಮಹಾಮೈತ್ರಿಗೆ ದೇವೇಗೌಡರ ನೇತೃತ್ವ ?   
ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸೋಲಿಸಲು ದೇಶದ ಎಲ್ಲ ವಿರೋಧ ಪಕ್ಷಗಳು ಒಂದಾಗುತ್ತಿವೆ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿ ಮೂರು ತಿಂಗಳು ಪೂರೈಸಲಾಗಿದೆ. ಸಿಎಂ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸೋನಿಯಾ, ರಾಹುಲ್, ಅಖಿಲೇಶ್ ಯಾದವ್, ಮಾಯಾವತಿ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಸೇರಿದಂತೆ  ದೇಶದ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಬಿಜೆಪಿ ಸೋಲಿಸಲು ರಾಜ್ಯಗಳಲ್ಲಿ ಬಿಜೆಪಿಯೇತರ ವಿರೋಧ ಪಕ್ಷಗಳು ಒಗ್ಗೂಡುತ್ತಿವೆ. ರಾಜಕೀಯದಲ್ಲಿ ಹಿರಿಯ ನಾಯಕರಾಗಿರುವ ಹೆಚ್.ಡಿ.ದೇವೇಗೌಡರು ಮಹಾಮೈತ್ರಿಯ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ.                                  
 

click me!