ರಾಹುಲ್ ಕರೆದರೂ ಬಾರದ ಕುಮಾರ ಸ್ವಾಮಿ

First Published May 29, 2018, 1:25 PM IST
Highlights

ಗುಲಾಂ ನಬಿ ಅಜಾದ್ ಜೊತೆ ದೇವೇಗೌಡರಿಗೆ ಮತ್ತು ಕುಮಾರ ಸ್ವಾಮಿಗೆ ಒಂದು ಹಂತದ ಕಂಫರ್ಟ್ ಇದೆ.ಶನಿವಾರ ಸಂಜೆ ಒಂದು ಹಂತದಲ್ಲಿ ಹಣಕಾಸು ಇಲಾಖೆ ಬಗ್ಗೆ ಕಾಂಗ್ರೆಸ್ ಜೆ ಡಿ ಎಸ್ ನಡುವೆ ಒಮ್ಮತ ಮೂಡದೇ ಇದ್ದಾಗ ಮಾತುಕತೆ ಮುಗಿದೇ ಹೊಯ್ತೇನು ಎನ್ನುವ ಸ್ಥಿತಿಯಲ್ಲಿದ್ದಾಗ ಸೋಮವಾರ ಬೆಳಿಗ್ಗೆ ಗುಲಾಂ ನಬಿ ಅಜಾದ್ ಜೊತೆ ಕುಮಾರಸ್ವಾಮಿ ಮಾತುಕತೆ ನಡೆದ ನಂತರ ಮತ್ತೆ ಇಬ್ಬರ ನಡುವೆ ಮಾತುಕತೆ ಮುಂದುವರೆದಿದ್ದು ಜೆಡಿಎಸ್ ತನ್ನ ಷರತ್ತು ಗಳನ್ನು ನೇರವಾಗಿ ಮುಂದಿಟ್ಟಿದೆ.

ಬೆಂಗಳೂರು :  ಶುಕ್ರವಾರ ರಾತ್ರಿ ಕರ್ನಾಟಕದ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ನಿವಾಸಕ್ಕೆ ಹೋದಾಗ ಖಾತೆ ಹಂಚಿಕೆ ಆಗದೆ ಸಂಪುಟಕ್ಕೆ ಯಾರ್ಯಾರು ಸೇರ್ಪಡೆ ಎಂದು ಚರ್ಚೆ ನಡೆಸುವುದು ಕಷ್ಟ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದಾಗ ಉತ್ಸಾಹದಲ್ಲಿದ್ದ ರಾಹುಲ್ ಗಾಂಧಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಫೋನ್ ಮಾಡಿ ಬೆಳಿಗ್ಗೆ ದಿಲ್ಲಿಗೆ ಬನ್ನಿ ಕುಳಿತು ಚರ್ಚೆ ಮಾಡಿ ಮುಗಿಸೋಣ ಎಂದಾಗ ಹೂ ಅನ್ನದೇ ಉಹು ಕೂಡ ಎನ್ನದೆ ತಂದೆ ಜೊತೆ ಮಾತನಾಡಿ ಹೇಳುತ್ತೇನೆ ಎಂದಿದ್ದಾರೆ.

ಆದರೆ ರಾತ್ರಿ ದೇವೇಗೌಡರ ಜೊತೆ ಚರ್ಚೆ ಮಾಡಿದ ನಂತರ ನೇರವಾಗಿ ರಾಹುಲ್ ಜೊತೆ ಚರ್ಚೆ ಮಾತನಾಡಿದರೆ ಮುಲಾಜಿಗೆ ಬೀಳಬೇಕಾಗುತ್ತದೆ ಎಂದು ನಿರ್ಧರಿಸಿ ಮರು ದಿನ ರಾಹುಲ್ ಗೆ ಫೋನ್ ಮಾಡಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ.

ರವಿವಾರ ನನಗೆ ಬರಲು ಸಾಧ್ಯವಾಗೋಲ್ಲ  ಎಂದಾಗ ಸರಿ ನೀವು ಗುಲಾಂ ನಬಿ ಅಜಾದ್ ಜೊತೆ ಮಾತನಾಡಿ ಎಂದಿರುವ ರಾಹುಲ್ ರವಿವಾರ ಸಂಜೆ ಅಮೆರಿಕ ಕ್ಕೆ ಹಾರಿದ್ದಾರೆ.

ಗುಲಾಂ ನಬಿ ಅಜಾದ್ ಜೊತೆ ದೇವೇಗೌಡರಿಗೆ ಮತ್ತು ಕುಮಾರ ಸ್ವಾಮಿಗೆ ಒಂದು ಹಂತದ ಕಂಫರ್ಟ್ ಇದೆ.ಶನಿವಾರ ಸಂಜೆ ಒಂದು ಹಂತದಲ್ಲಿ ಹಣಕಾಸು ಇಲಾಖೆ ಬಗ್ಗೆ ಕಾಂಗ್ರೆಸ್ ಜೆ ಡಿ ಎಸ್ ನಡುವೆ ಒಮ್ಮತ ಮೂಡದೇ ಇದ್ದಾಗ ಮಾತುಕತೆ ಮುಗಿದೇ ಹೊಯ್ತೇನು ಎನ್ನುವ ಸ್ಥಿತಿಯಲ್ಲಿದ್ದಾಗ ಸೋಮವಾರ ಬೆಳಿಗ್ಗೆ ಗುಲಾಂ ನಬಿ ಅಜಾದ್ ಜೊತೆ ಕುಮಾರಸ್ವಾಮಿ ಮಾತುಕತೆ ನಡೆದ ನಂತರ ಮತ್ತೆ ಇಬ್ಬರ ನಡುವೆ ಮಾತುಕತೆ ಮುಂದುವರೆದಿದ್ದು ಜೆಡಿಎಸ್ ತನ್ನ ಷರತ್ತು ಗಳನ್ನು ನೇರವಾಗಿ ಮುಂದಿಟ್ಟಿದೆ.

ಎಲ್ಲಾ ಒಡೆದು ಹಾಕೋಣ : ರೇವಣ್ಣ

ನವದೆಹಲಿ : ಒಡೆದು ಕಟ್ಟುವುದೆಂದರೆ ದೇವೇಗೌಡರ ಪುತ್ರ ರೇವಣ್ಣರಿಗೆ ಅದೇನೋ ಒಂದು ಖುಷಿ . ಸಂಜೆ ಕುಮಾರಸ್ವಾಮಿ ಮೋದಿ ನಿವಾಸದಿಂದ ವಾಪಾಸ್ ಬರುವ ಪ್ರತೀಕ್ಷೆಯಲ್ಲಿದ್ದಾಗ ಹೊರಗೆ ನಿಂತಿದ್ದ ಪತ್ರಕರ್ತರಿಗೆ ಹಳೆಯ ಭವನದ ಕಟ್ಟಡ ತೋರಿಸಿದ ರೇವಣ್ಣ ಇದನ್ನು ಒಡೆದು ಹೊಸದಾಗಿ ಕಟ್ಟುತ್ತೇನೆ ನೋಡಿ ಸರ್ ಪ್ಲಾನಿಂಗ್ ವಾಸ್ತು ಪ್ರಕಾರ ನಾನೇ ಕಟ್ಟುತ್ತೇನೆ ಎಂದು ಹೇಳುತ್ತಿದ್ದರು. 

ದೇವೇಗೌಡರ ಮನೆ ಇನ್ನು ಒಂದು ವಾರ ನೋಡಿ ಬರೀ ಬಾಗಿಲುಗಳೇ ಇದ್ದವು ಎಲ್ಲ ತೆಗೆದು ಹಾಕಿಸಿದ್ದೀನಿ ಬೇಡವಾದ ರೂಮ್ ತೆಗೆಸಿ ಹಾಕಿದ್ದೀನಿ ದನದ ಕೊಟ್ಟಿಗೆ ಥರ ಇತ್ತು ಸರ್ ಎಂದು ಹೇಳುತ್ತಿದ್ದರು.

ಕನ್ನಡ ಪ್ರಭದಲ್ಲಿ ಪ್ರಕಟವಾದ ಸುವರ್ಣ ನ್ಯೂಸ್ ದಿಲ್ಲಿ ವಿಶೇಷ ಪ್ರತಿನಿಧಿ ಪ್ರಶಾಂತ್ ನಾತು ಅವರ 'ಇಂಡಿಯಾ ಗೇಟ್' ಅಂಕಣದ ಆಯ್ದ ಭಾಗವಿದು.

click me!