
ನವದೆಹಲಿ(ಜುಲೈ 06): ಅಡುಗೆ ಅನಿಲದಲ್ಲಿ ಸಬ್ಸಿಡಿ ಕೈಬಿಡುವಂತೆ ಸಾರ್ವಜನಿಕರನ್ನು ಕೋರಿ ಮಾಡಲಾದ "ಗಿವಿಟ್ ಅಪ್" ಅಭಿಯಾನದ ಹಾದಿಯಲ್ಲಿ ರೈಲ್ವೆ ಇಲಾಖೆಯೂ ನಡೆಯಲು ನಿರ್ಧರಿಸಿದೆ. ರೈಲ್ವೆ ಟಿಕೆಟ್ ದರದಲ್ಲಿ ಸರಕಾರ ನೀಡುವ ಸಬ್ಸಿಡಿಯನ್ನು ಕೈಬಿಡುವ ಅವಕಾಶವನ್ನು ಸಾರ್ವಜನಿಕರಿಗೆ ನೀಡಲು ರೈಲ್ವೆ ಇಲಾಖೆ ಯೋಜಿಸಿದೆ. ಮುಂದಿನ ತಿಂಗಳು ಈ ಅಭಿಯಾನ ಆರಂಭವಾಗುತ್ತದೆ.
ಸಬ್ಸಿಡಿಯಿಂದ ರೈಲ್ವೆ ಇಲಾಖೆ ಪ್ರತೀ ವರ್ಷ 30 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ಭಾರತೀಯ ರೈಲ್ವೆ ಟಿಕೆಟ್'ಗಳಲ್ಲಿ ಪ್ರಯಾಣಿಕರಿಗೆ ಶೇ.43ರಷ್ಟು ವಿನಾಯಿತಿ ಇದೆ. ಅಂದರೆ ಪ್ರಯಾಣಿಕರು 57% ಹಣವನ್ನು ಮಾತ್ರ ಪಾವತಿಸುತ್ತಿದ್ದಾರೆ. ಉಳಿದ ಹಣವನ್ನು ಇಲಾಖೆಯೇ ಭರಿಸುತ್ತದೆ. ಎಲ್'ಪಿಜಿ ಸಬ್ಸಿಡಿ ವಿಚಾರದಲ್ಲಿ "ಗಿವ್ ಇಟ್ ಅಪ್" ಅಭಿಯಾನ ತಕ್ಕಮಟ್ಟಿಗೆ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಅದೇ ಪ್ರೇರಣೆಯಲ್ಲಿ ರೈಲ್ವೆ ಇಲಾಖೆ ಈ ಹೊಸ ಯೋಜನೆ ರೂಪಿಸಿದೆ. ಅದರಂತೆ ರೈಲ್ವೆ ಪ್ರಯಾಣಿಕರಿಗೆ ಸದ್ಯಕ್ಕೆ 50% ಮತ್ತು 100% ಸಬ್ಸಿಡಿ ಬಿಟ್ಟುಕೊಡುವ ಎರಡು ಐಚ್ಛಿಕಗಳನ್ನು ಮೊದಲಿಗೆ ನೀಡಲು ನಿರ್ಧರಿಸಲಾಗಿದೆ.
ಆನ್'ಲೈನ್'ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಿದವರಿಗೆ ಸಿಗುವ ಟಿಕೆಟ್ ಪ್ರಿಂಟ್'ನಲ್ಲಿ "ಪ್ರಯಾಣದ 57% ದರವನ್ನು ಮಾತ್ರ ಭಾರತೀಯ ರೈಲ್ವೆ ಪಡೆಯುತ್ತದೆ" ಎಂಬರ್ಥದ ಸಂದೇಶವಿರುವದನ್ನು ನೋಡಬಹುದು.
ಸಬ್'ಅರ್ಬನ್ ರೈಲುಗಳಲ್ಲಿ ಟಿಕೆಟ್ ದರಗಳಿಗೆ ಸಿಕ್ಕಾಪಟ್ಟೆ ಸಬ್ಸಿಡಿ ಇದೆ. ಪ್ರಯಾಣಿಕರು ಶೇ. 36ರಷ್ಟು ಮಾತ್ರ ಹಣ ಪಾವತಿ ಮಾಡುತ್ತಾರೆ. ಉಳಿದದ್ದನ್ನ ಇಲಾಖೆಯೇ ಭರಿಸುತ್ತದೆ. ಸಬ್ಸಿಡಿ ಕೈಬಿಡುವ ಯೋಜನೆಯನ್ನು ರೈಲ್ವೆ ಇಲಾಖೆ ಹಂತಹಂತವಾಗಿ ಜಾರಿಗೊಳಿಸುವ ಸಾಧ್ಯತೆ ಇದೆ. ಮೊದಲಿಗೆ ಲಕ್ಷುರಿ ಟ್ರೈನ್'ಗಳೆನಿಸಿದ ರಾಜಧಾನಿ, ಶತಾಬ್ದಿಯಂತ ರೈಲುಗಳಲ್ಲಿ ಈ ಯೋಜನೆ ಜಾರಿಯಾಗಬಹುದು. ಬಳಿಕ ಅದು ಸಬ್'ಅರ್ಬನ್ ರೈಲುಗಳ ಮಟ್ಟಕ್ಕೂ ತಲುಪಬಹುದು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.