ಕರ್ನಾಟಕ ಭವನದಲ್ಲಿ ಅಡುಗೆಗೆ ಗೌಡರೇ ಬೇಕು..!

By Suvarna NewsFirst Published Jul 17, 2018, 3:58 PM IST
Highlights

ಮಂಜೇಗೌಡರು, ಅನಂತಗೌಡರು, ಚಂದ್ರೇಗೌಡರು ಡ್ಯೂಟಿ ಮೇಲೆ ಬಂದಿದ್ದಾರೆ. ಸಿದ್ದು ಇರಲಿ, ಬಿಎಸ್‌ವೈ ಇರಲಿ, ಕುಮಾರಣ್ಣ ಇರಲಿ ವೈಯಕ್ತಿಕ ಸಹಾಯಕ್ಕೂ ಅವರದೇ ಜಾತಿಯ ಜನರೇ ಯಾಕಿರಬೇಕು ಎಂಬುದಕ್ಕೆ ಉತ್ತರವನ್ನು ಜಾತ್ಯತೀತ ಪಕ್ಷದ ನೇತಾರರೇ ಹೇಳಬೇಕು ಬಿಡಿ.

ನವದೆಹಲಿ[ಜು.17]: ದೆಹಲಿಯ ಕರ್ನಾಟಕ ಭವನದಲ್ಲಿ ಸಿದ್ದರಾಮಯ್ಯ ಕಾಲದಲ್ಲಿ ಮುಖ್ಯಮಂತ್ರಿಯ ಡ್ಯೂಟಿಗಿದ್ದ ಎಲ್ಲ ಸಿಬ್ಬಂದಿಯನ್ನು ಬದಲಾಯಿಸಲಾಗಿದೆ. ಮಂಜೇಗೌಡರು, ಅನಂತಗೌಡರು, ಚಂದ್ರೇಗೌಡರು ಡ್ಯೂಟಿ ಮೇಲೆ ಬಂದಿದ್ದಾರೆ. ಸಿದ್ದು ಇರಲಿ, ಬಿಎಸ್‌ವೈ ಇರಲಿ, ಕುಮಾರಣ್ಣ ಇರಲಿ ವೈಯಕ್ತಿಕ ಸಹಾಯಕ್ಕೂ ಅವರದೇ ಜಾತಿಯ ಜನರೇ ಯಾಕಿರಬೇಕು ಎಂಬುದಕ್ಕೆ ಉತ್ತರವನ್ನು ಜಾತ್ಯತೀತ ಪಕ್ಷದ ನೇತಾರರೇ ಹೇಳಬೇಕು ಬಿಡಿ.

ನೋ ಈಟಿಂಗ್ ಓನ್ಲಿ ಮೀಟಿಂಗ್: 
ಪ್ರಧಾನಿ ನರೇಂದ್ರ ಮೋದಿ ನಡೆಸುವ ಸಭೆಗಳಲ್ಲಿ ಮಧ್ಯೆ ಮಧ್ಯೆ ಟೀ, ಬಿಸ್ಕತ್ತು, ಸಮೋಸಾ ಕೊಡುವ ಪದ್ಧತಿಯೇ ಇಲ್ಲವಂತೆ. ಸಭೆಗೆ ಬರುವಾಗಲೇ ನಿಮ್ಮ ನಿಮ್ಮ ತಿಂಡಿ ತೀರ್ಥ ಮುಗಿಸಿಕೊಂಡು
ಬರಬೇಕು, ಸಭೆಯ ಮಧ್ಯದಲ್ಲಿ ತಿಂಡಿ ಕೊಡುವುದರಿಂದ ಏಕಾಗ್ರತೆಗೆ ಭಂಗ ಬರುತ್ತದೆ ಎಂದು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಿಗೆ ಸ್ವಯಂ ಪ್ರಧಾನಿಯೇ ಸೂಚಿಸಿದ್ದಾರಂತೆ. ಮಂತ್ರಿಗಳಾಗಲಿ, ಅಧಿಕಾರಿಗಳಾಗಲಿ ಎಲ್ಲರಿಗೂ ನಿಯಮ ಒಂದೇ. ನಿಮ್ಮ ನಿಮ್ಮ ಮನೆಗಳಿಂದ ತಿಂಡಿ ತಿಂದು ಬರಬೇಕು. ಪೆನ್ನು ಪೇಪರ್ ಸಮೇತ ಬಂದು ಮೀಟಿಂಗ್‌ಗೆ ಹಾಜರಾಗಬೇಕು. ಇನ್ನು, ಸಭೆಯಲ್ಲಿ ಹೆಚ್ಚು ಮಾತನಾಡುವುದು ಮೋದಿ ಮಾತ್ರ ಎಂದು ಬೇರೆ ಹೇಳಬೇಕಿಲ್ಲ.

ಯೋಗಿ ವರ್ಸಸ್ ಮೌರ್ಯ: 
ಉತ್ತರ ಪ್ರದೇಶದಲ್ಲಿ ಉಪಚುನಾವಣೆಗಳಲ್ಲಿ ಬಿಜೆಪಿ ಸೋತ ನಂತರ ಆಂತರಿಕ ಜಗಳ ಆರಂಭ ಆಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ
ನಡುವೆ ಜಗಳ ತಾರಕಕ್ಕೆ ಏರಿದೆ. ಉಪ ಮುಖ್ಯಮಂತ್ರಿಗೆ ಸೇರಿದ ಫೈಲ್'ಗಳನ್ನು ಮುಖ್ಯಮಂತ್ರಿ ಯೋಗಿ ಇಟ್ಟುಕೊಂಡು ಕೂರುತ್ತಾರೆ ಎಂಬ ಚರ್ಚೆ ಜೋರಾಗಿದೆ. 
ಅಮಿತ್ ಶಾ ಕೂಡ ಯೋಗಿ ಆಡಳಿತ ವೈಖರಿಯಿಂದ ಖುಷ್ ಇಲ್ಲವಂತೆ. ಗೋರಖ್‌ಪುರದ ಪೀಠದ ಮಹಾಂತರಾಗಿರುವ ಯೋಗಿಗೆ ಆದೇಶ ಕೊಟ್ಟು ಗೊತ್ತೇ ವಿನಃ ಉಳಿದವರು ಹೇಳಿದ್ದನ್ನು ಕೇಳಿಸಿಕೊಳ್ಳುವ ರೂಢಿಯೂ ಇಲ್ಲ, ವ್ಯವಧಾನವೂ ಇಲ್ಲವಂತೆ.

[ಕನ್ನಡಪ್ರಭ : ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]  

click me!