
ಬೆಂಗಳೂರು : ಸತತ ನಾಲ್ಕು ವರ್ಷಗಳಿಂದ ನಷ್ಟದ ಸುಳಿಯಲ್ಲಿ ಸಿಲುಕಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ಪ್ರಸಕ್ತ ಆರ್ಥಿಕ ವರ್ಷದ ಫೆಬ್ರವರಿ ಅಂತ್ಯಕ್ಕೆ 10.29 ಕೋಟಿ ಲಾಭ ಗಳಿಸಿದ್ದು, ಮಾರ್ಚ್ ಅಂತ್ಯದ ವೇಳೆಗೆ 15 ಕೋಟಿ ಲಾಭ ಗಳಿಸುವ ನಿರೀಕ್ಷೆ ಹೊಂದಿದೆ.
ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಿರ್ದೇಶಕ ಮಂಡಳಿ ಸಭೆ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ, ಕಳೆದ ವರ್ಷ ಸುಮಾರು 138 ಕೋಟಿ ನಷ್ಟದಲ್ಲಿದ್ದ ಸಂಸ್ಥೆಯನ್ನು ಲಾಭ ದತ್ತ ಕೊಂಡೊಯ್ಯಲಾಗಿದೆ ಎಂದು ವಿವರಿಸಿದರು.
ಡೀಸೆಲ್ ದರ ಹೆಚ್ಚಳ, ನೌಕರರ ವೇತನ ಹೆಚ್ಚಳ, ಬಂದ್, ಗಲಾಟೆ ಮುಂತಾದ ಕಾರಣಗಳಿಗೆ ಈ ವರ್ಷ ಸಂಸ್ಥೆಗೆ 250 ಕೋಟಿ ನಷ್ಟ ಆಗಬಹುದು ಎಂದು ಆರಂಭದಲ್ಲಿ ನಿರೀಕ್ಷಿಸಲಾಗಿತ್ತು. ಆದರೆ, ಹೆಚ್ಚುವರಿ ವೆಚ್ಚಗಳಿಗೆ ಕಡಿವಾಣ ಹಾಕುವ ಮತ್ತು ಆರ್ಥಿಕ ಶಿಸ್ತು ಕಾಪಾಡುವ ಮೂಲಕ ಸಂಸ್ಥೆಯನ್ನು
ಲಾಭದಾಯಕವನ್ನಾಗಿ ಮಾಡಲಾಗಿದೆ. ಈ ವರ್ಷ ಸಂಸ್ಥೆಗೆ ಒಟ್ಟು 3,164.88 ಕೋಟಿ ಆದಾಯ ಬಂದಿದ್ದು, ಅದರಲ್ಲಿ 10.29 ಕೋಟಿ ಲಾಭ ಆಗಿದೆ. ಕೆಲವು ಉಪಕರಣಗಳನ್ನು ಖರೀದಿಸಲು ಸಂಸ್ಥೆಯು ಜಯದೇವ ಹೃದ್ರೋಗ ಸಂಸ್ಥೆಗೆ 40 ಲಕ್ಷ ದೇಣಿಗೆ ನೀಡಿದೆ ಎಂದು ತಿಳಿಸಿದರು.
ನೌಕರರಿಗೆ ಉಚಿತ ಆರೋಗ್ಯ ಸೇವೆ:
ಕೆಎಸ್ಸಾರ್ಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಚಾಲಕರು, ನಿರ್ವಾಹಕರು ಹಾಗೂ ಮೆಕ್ಯಾನಿಕ್ ಗಳು ಸೇರಿ 40 ವರ್ಷ ದಾಟಿದ ನೌಕರರಿಗೆ ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಕುರಿತು ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.