ಕನ್ನಡದ ಶ್ರೇಷ್ಠ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ನಿಧನ

First Published May 11, 2018, 9:56 PM IST
Highlights

ಹಾವೇರಿಯ  ಗ್ರಾಮೀಣ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ತಮ್ಮ ಮೂರು ದಶಕದ ಅವಧಿಯಲ್ಲಿ ಕಲಬುರ್ಗಿ, ಧಾರವಾಡ ವಿವಿಯಲ್ಲಿ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 1999 ಮಾರ್ಚ'ನಲ್ಲಿ ನಿವೃತ್ತರಾದರು.

ಧಾರವಾಡ(ಮೇ.11): ಕನ್ನಡದ ಶ್ರೇಷ್ಠ ವಿಮರ್ಶಕ, ಸಾಹಿತಿ ಡಾ. ಗಿರಡ್ಡಿ ಗೋವಿಂದರಾಜ(79) ಅನಾರೋಗ್ಯದ ಕಾರಣದಿಂದ ಧಾರವಾಡದ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.   
ಗಿರೆಡ್ಡಿ ಅವರು ಸೃಜನಶೀಲ ಸಾಹಿತ್ಯ, ವಿಮರ್ಶೆ ಎರಡರಲ್ಲೂ ಖ್ಯಾತರಾಗಿದ್ದರು. 1939, ಸೆಪ್ಟೆಂಬರ್ 23ರಂದು ಗದಗ ಜಿಲ್ಲೆ ರೋಣದ ಅಬ್ಬಿಗೇರದಲ್ಲಿ ಜನಿಸಿದ ಇವರು ಸ್ವಗ್ರಾಮದಲ್ಲಿ ಪ್ರಾಥಮಿಕ , ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಎಂ.ಎ ಪದವಿ ಪಡೆದರು. 
1973ರಲ್ಲಿ ಇಂಗ್ಲಂಡ್'ಲ್ಲಿರುವ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ತ್ರ ಪದವಿ ಹಾಗೂ 1983ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಶೈಲಿಶಾಸ್ತ್ರದಲ್ಲಿ ಪಿಎಚ್.ಡಿ. ಪದವಿ ಪಡೆದು  ಹಾವೇರಿಯ  ಗ್ರಾಮೀಣ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು.ತಮ್ಮ ಮೂರು ದಶಕದ ಅವಧಿಯಲ್ಲಿ ಕಲಬುರ್ಗಿ, ಧಾರವಾಡ ವಿವಿಯಲ್ಲಿ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 1999 ಮಾರ್ಚ'ನಲ್ಲಿ ನಿವೃತ್ತರಾದರು.
ಕೃತಿಗಳು
ಶಾರದಾಲಹರಿ, ರಸವಂತಿ , ಮರ್ಲಿನ್ ಮನ್ರೋ ಮತ್ತು ಇತರ ಪದ್ಯಗಳು,ಆ ಮುಖಾ-ಈ ಮುಖಾ,ಮಣ್ಣು, ಹಂಗು ಮತ್ತು ಇತರ ಕತೆಗಳು, ಒಂದು ಬೇವಿನಮರದ ಕಥೆ, ಸಣ್ಣ ಕತೆಯ ಹೊಸ ಒಲವುಗಳು, ಜನಪದ ಕಾವ್ಯ,  ಕಾದಂಬರಿ: ವಸ್ತು ಮತ್ತು ತಂತ್ರ ಸೇರಿದಂತೆ  ಮುಂತಾದ ಕೃತಿಗಳನ್ನು ರಚಿಸಿದ್ದಾರೆ. 
ಪ್ರಶಸ್ತಿಗಳು
ಭಾಷಾ ಶಾಸ್ತ್ರದಲ್ಲಿ ಎಮ್.ಎ. ಮಾಡಲು ಬ್ರಿಟಿಷ್ ಕೌನ್ಸಿಲ್ ಶಿಷ್ಯವೇತನ, ಓಡಿಶಾ ರಾಜ್ಯದ ಸಾಹಿತ್ಯಿಕ, ಸಾಂಸ್ಕೃತಿಕ ಅಧ್ಯಯನಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ನೆರವು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ,ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೋಷಿಪ್, “ನವ್ಯ ವಿಮರ್ಶೆ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಥಮ ಬಹುಮಾನ  ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ಕನ್ನಡ ಪ್ರಭಕ್ಕಾಗಿ  http://kpepaper.asianetnews.com ಕ್ಲಿಕ್ ಮಾಡಿ                    
 

click me!