ಎಲ್ಲಾ ಶಿವಭಕ್ತರು ಹಿಂದೂಗಳಲ್ಲ ಎಂದು ವ್ಯಾಖ್ಯಾನಿಸಿರುವ ಮಾನವ ಧರ್ಮಪೀಠದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ವಿಭಿನ್ನ ತರ್ಕವನ್ನು ಪ್ರತಿಪಾದಿಸಿದ್ದಾರೆ.
ಮೈಸೂರು: ಎಲ್ಲಾ ಶಿವಭಕ್ತರು ಹಿಂದೂಗಳಲ್ಲ ಎಂದು ವ್ಯಾಖ್ಯಾನಿಸಿರುವ ಮಾನವ ಧರ್ಮಪೀಠದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ವಿಭಿನ್ನ ತರ್ಕವನ್ನು ಪ್ರತಿಪಾದಿಸಿದ್ದಾರೆ.
ಭಾರತ ಮೂಲ ನಿವಾಸಿಗಳ ಸಂಸ್ಕೃತಿ, ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯು ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಲಿಚಕ್ರವರ್ತಿ ಸ್ಮರಣೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಮೂಲನಿವಾಸಿಗಳಲ್ಲಿ 18 ಕೋಮಿನವರು ವೈದಿಕ ಮೌಲ್ಯಗಳನ್ನು ಧಿಕ್ಕರಿಸಿ ಶಿವಭಕ್ತರಾಗಿದ್ದು. ಹೀಗಾಗಿ ಎಲ್ಲಾ ಶಿವಭಕ್ತರು ಹಿಂದೂಗಳು ಎನ್ನುವುದು ಅನ್ಯಾಯ ಎಂದರು. ದೀಪಾವಳಿ ರೈತರ ಹಬ್ಬವಾಗಿ, ಬೆಳೆ ಹೆಚ್ಚಲಿ ಎಂದು ಬದುಗಳ ಮೇಲೆ ದೀಪ ಹಚ್ಚುತ್ತಿದ್ದರು. ಆದರೆ, ವೈದಿಕರು ಪ್ರಜಾಪೀಡಕನಾಗಿದ್ದ ಬಲಿ ಚಕ್ರವರ್ತಿಯನ್ನು ನಾಶ ಮಾಡಿದ ದಿನ ಎಂದು ಕಥೆ ಕಟ್ಟಿ ನಮ್ಮ ಮೇಲೆ ಹೇರಿದ್ದಾರೆ. ಯಾವುದೇ ರಾಜರೂ ಪ್ರಜಾಪೀಡಕರಾಗಿರಲಿಲ್ಲ. ಅವರೆಲ್ಲರೂ ಶಿವಭಕ್ತರಾಗಿದ್ದರು ಎಂದು ಹೇಳಿದರು.
ಗಣಪತಿ ಪಾರ್ವತಿ ಮಗನಲ್ಲ: ರಾಮಾಯಣ ಮತ್ತು ಮಹಾಭಾರತ ಮಾತ್ರ ಮಹತ್ವದ್ದು ಎಂದು ವೈದಿಕರು ಬಿಂಬಿಸಿದ್ದಾರೆ. ಅದಕ್ಕಿಂತಲೂ ಮಹತ್ವದ ಘಟನೆ ದಕ್ಷ ಯಜ್ಞ. ದೇಶದ ಮೂಲ ನಿವಾಸಿಗಳೆಲ್ಲಾ ಯಜ್ಞದ ವಿರೋಧಿಗಳಾಗಿದ್ದರಿಂದಲೇ ಕೊಂಡ ತುಳಿಯುತ್ತಿದ್ದರು. ಆರ್ಯರ ಜತೆಗಿನ ಸಂಘರ್ಷವನ್ನು ತಪ್ಪಿಸಲು ಶಿವ- ದಾಕ್ಷಾಯಿಣಿಯನ್ನು ಮದುವೆಯಾಗುತ್ತಾನೆ. ಇವರಿಗೆ ಹುಟ್ಟಿದವ ಗಣಪತಿ. ಹೀಗಾಗಿ ಗಣಪತಿ, ಪಾರ್ವತಿಯ ಮಗನಲ್ಲ. ಪಾರ್ವತಿ ಬೇಡರವಳು, ಪರ್ವತರಾಜನ ಮಗಳು. ಹೀಗಾಗಿ ಯಜ್ಞಗಳಲ್ಲಿ ಶಿವನಿಗೆ ಕೊನೆ ಸ್ಥಾನ. ಗಣಪತಿಗೆ ಮೊದಲ ಸ್ಥಾನ ನೀಡಲಾಗಿದೆ ಎಂದರು.
ಶಿವ ದಕ್ಷಿಣ ಭಾರತೀಯ: ಶಿವ ದಕ್ಷಿಣವನ, ರುದ್ರ ಉತ್ತರದವ ಇವರಿಬ್ಬರು ಆದಿವಾಸಿಗಳ ಮಹಾನ್ ನಾಯಕರು. ರಾಮ-ಕೃಷ್ಣ-ಹನುಮಂತ ಕೂಡ ಶಿವ ಭಕ್ತರು. ಶಿವ ಸಂಸ್ಕೃತಿಯೇ ಈ ದೇಶದ ಪ್ರಾಚೀನ ಸಂಸ್ಕೃತಿ ಎಂದ ಅವರು, ನನ್ನ ಸಂಶೋಧನೆ ಪ್ರಕಾರ ಶಿವ ಶ್ರೀಶೈಲದವನು ಎಂದರು. ವೀರಭದ್ರ ಕಾಡು ಕುರುಬ ಜನಾಂಗಕ್ಕೆ ಸೇರಿದವನು. ವೀರಭದ್ರನ ತಂಗಿ ಚೌಡಿಯೇ ಚಾಮುಂಡಿ. ಇಂತಹ ಚಾಮುಂಡಿ, ಅಸುರ ಕಾಲದ ಮಹಿಷಾಸುರನನ್ನು ಕೊಂದ ಕಥೆಯನ್ನು ವೈದಿಕರು ಸೃಷ್ಟಿಸಿದರು ಎಂದು ಅವರು ಹೇಳಿದರು.
ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಮತ್ಸಾವತಾರ, ಕೂರ್ಮಾವತಾರ ಸೇರಿದಂತೆ ದಶಾವತಾರಗಳೆಲ್ಲೂ ನಮ್ಮನ್ನು ತುಳಿಯಲೆಂದೇ ನಡೆದಿರುವುದು. ಈಗ ದೇಶದಲ್ಲಿ ಮೋದಿಯವರನ್ನು ಮತ್ತೊಂದು ಅವತಾರ ಎಂದು ಕರೆಯಲಾಗುತ್ತಿದೆ ಎಂದರು. ಪ್ರಾಧ್ಯಾಪಕ ಡಾ. ಬಿ.ಪಿ.ಮಹೇಶ್ಚಂದ್ರಗುರು ಅಧ್ಯಕ್ಷತೆ ವಹಿಸಿದ್ದರು.