
ನವದೆಹಲಿ(ಡಿ.31): ಐವತ್ತು ದಿನಗಳ ಸುದೀರ್ಘ ಹಳೆ ನೋಟು ಚಲಾವಣೆ ರದ್ದು ವಿನಿಮಯ ಪ್ರಕ್ರಿಯೆ ಮುಕ್ತಾಯಗೊಂಡರೂ ಬ್ಯಾಂಕುಗಳಿಂದ ಹಿಂಪಡೆಯುವ ಹಣದ ಮೇಲಿನ ಮಿತಿ ಹಾಗೆ ಮುಂದುವರೆಯಲಿದೆ. ಎಟಿಎಂಗಳಲ್ಲಿ ಹಣ ಪಡೆಯುವ ಮಿತಿಯನ್ನು .2500ದಿಂದ .4500 ಸಾವಿರಕ್ಕೆ ಹೆಚ್ಚಿಸಿ, ಜನರಿಗೆ ಕೊಂಚ ರಿಲೀಫ್ ನೀಡಿದೆ.
ಹಳೆ ನೋಟು ವಿನಿಮಯ ಮುಕ್ತಾಯವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ, ದೇಶಾದ್ಯಂತ ಬಹುತೇಕ ನೋಟು ಲಭ್ಯತೆ ಸಹಜಸ್ಥಿತಿಗೆ ಬಂದಿದೆ ಎಂದು ಹೇಳಿದ್ದಾರೆ. ಆದರೆ, ಬ್ಯಾಂಕುಗಳಲ್ಲಿ ವಾರಕ್ಕೆ 24 ಸಾವಿರ ಪಡೆಯುವ ಮಿತಿ ಹಾಗೆ ಮುಂದುವರಿಯಲಿದ್ದು, ಎಟಿಎಂಗಳಲ್ಲಿ ಹಣ ಹಿಂಪಡೆವ ಮಿತಿ ಸಡಿಲಿಸಲಾಗಿದೆ ಎಂದು ಹೇಳಿದ್ದಾರೆ.
ಆರ್ಥಿಕ ವ್ಯವಸ್ಥೆಗೆ ಬೇಕಾಗುವಷ್ಟುನೋಟುಗಳನ್ನು ಆರ್ಬಿಐ ಬಳಿ ಇದೆ. ತ್ವರಿತಗತಿಯಲ್ಲಿ ನೋಟು ಮುದ್ರಿಸುತ್ತಿದೆ. ಬಹುತೇಕ ಬ್ಯಾಂಕುಗಳಲ್ಲಿ ಜನಜಂಗುಳಿ ತಗ್ಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನವೆಂಬರ್ 8 ರಂದು ಪ್ರಧಾನಿ ನರೇಂದ್ರಮೋದಿ .500 ಮತ್ತು 1000 ನೋಟುಗಳ ಚಲಾವಣೆ ರದ್ದು ಮಾಡಿರುವುದಾಗಿ ಘೋಷಿಸಿದ್ದರು. ನಂತರ ದೇಶವ್ಯಾಪಿ ನಗದು ಕೊರತೆಯಿಂದಾಗಿ ಅಲ್ಲೋಲ ಕಲ್ಲೋಲಸೃಷ್ಟಿಯಾಗಿತ್ತು. ಆರ್ಬಿಐ ಹೊಸ 2000 ಮತ್ತು 500 ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಬಿಡುತ್ತಿದೆ. ಆದರೂ ನಗದು ಕೊರತೆ ಮುಖ್ಯವಾಗಿ 2000 ನೋಟುಗಳನ್ನು ಚಲಾವಣೆಗೆ ತಂದಿರುವುದರಿಂದ ಚಿಲ್ಲರೆ ಕೊರತೆ ಎದ್ದುಕಾಣುತ್ತಿದೆ.
ಮಾರುಕಟ್ಟೆಅಗತ್ಯಕ್ಕೆ ತಕ್ಕಂತೆ ಆರ್ಬಿಐ ನೋಟುಗಳನ್ನು ಬಿಡುಗಡೆ ಮಾಡುತ್ತಿದೆ. ನಾಳೆಯಿಂದ ಬ್ಯಾಂಕುಗಳಲ್ಲಿ ಮಾನ್ಯತೆ ಇರುವ ನೋಟುಗಳುಮಾತ್ರ ಲಭ್ಯವಾಗಲಿವೆ ಎಂದರು.
ಹಣ ಹಿಂಪಡೆಯುವ ಮಿತಿ ಬಗ್ಗೆ ಪ್ರಶ್ನಿಸಿದಾಗ ದಯವಿಟ್ಟು ಕಾಯಿರಿ, ನಾವು ಮಿತಿ ತೆಗೆದು ಹಾಕಿದಾಗ ನಿಮಗೆ ತಿಳಿಸುತ್ತೇವೆ ಎಂದರು.
ಸತತ ದಾಳಿಯಿಂದ ಅಕ್ರಮ ನೋಟುಗಳ ಪ್ರಕರಣಗಳು ಪತ್ತೆಯಾಗುತ್ತಿರುವುದು ವ್ಯಾಪಕ ಕರೆನ್ಸಿ ಅವ್ಯವಹಾರ ಇರುವುದಕ್ಕೆ ಸಾಕ್ಷಿಯಾಗಿದೆ. ಇದು ನವೆಂಬರ್ 8 ರಂದು ಪ್ರಧಾನಿ ಕೈಗೊಂಡ ನಿರ್ಧಾರವನ್ನು ಸಮರ್ಥಿಸುತ್ತದೆ ಎಂದರು.
ಮಾಜಿ ವಿತ್ತ ಸಚಿವ ಚಿದಂಬರಂ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಜೇಟ್ಲಿ, ಕಡಮೆ ಜಿಡಿಪಿಯಲ್ಲಿ ಹೆಚ್ಚು ತೆರಿಗೆ ಆದಾಯ ತರುವಂತಹ ಅರ್ಥಶಾಸ್ತ್ರವನ್ನು ನಾನು ಕಲಿಯಬೇಕಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.