
ಹುಬ್ಬಳ್ಳಿ (ಫೆ.19): ಹಳ್ಳಿಗಳಿಂದ ನಗರ ಪ್ರದೇಶಕ್ಕೆ ಬದುಕು ಕಟ್ಟಿಕೊಳ್ಳಲು ಬರುವವರ ಸಂಖ್ಯೆ ದಿನಗಳೆದಂತೆ ಹೆಚ್ಚುತ್ತಿದೆ, ಇದರಿಂದಾಗಿ ಮಹಾ ನಗರಗಳಲ್ಲಿ ವಸತಿ ರಹಿತರದ್ದೇ ದೊಡ್ಡ ಸಮಸ್ಯೆಯಾಗುತ್ತಿದೆ.
ತಲೆ ಮೇಲೊಂದು ಸೂರು ಇರಬೇಕು ಎಂದು ಕನಸು ಕಟ್ಟಿಕೊಂಡಿರುವ ಸಾವಿರಾರು ಜನರ ಮುಗ್ಧತೆಯನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಮನೆ, ನಿವೇಶನ ಕೊಡಿಸುವದಾಗಿ ಸಾವಿರಾರು ಜನರಿಂದ ಹಣ ವಸೂಲಿಗೆ ನಡೆಸುತ್ತಿದ್ದಾರೆ.
ಅಮಾಯಕರಿಂದ ಹಣ ಬಾಚಿಕೊಳ್ಳುವ ಕೆಲಸಕ್ಕೆ ಕೈಹಾಕಿದ್ದು ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿ. ನಿವೇಶನ ಬೇಕಾದವರು ಇವರಿಂದ ಕೂಪನ್ ಪಡೆಯಬೇಕಂತೆ. ಅದಕ್ಕೆ 200 ರೂಪಾಯಿ ಶುಲ್ಕ ಪಾವತಿಸಬೇಕಂತೆ. ನಿವೇಶನ ರಹಿತರಿಗೆ ನಿವೇಶನ ಕೊಡಲಾಗುವುದು ಎಂಬ ಬೊಗಳೆ ಮಾತಿಗೆ ಓಡೋಡಿ ಬಂದ ಅಮಾಯಕ ಜನರು ನಾಲ್ಕು ಕೌಂಟರ್ಗಳಲ್ಲಿ ಕ್ಯೂನಲ್ಲಿ ನಿಂತು ರೊಕ್ಕ ನೀಡುತ್ತಿದ್ದರು ಕೂಡಾ.
ಇದ್ಯಾವ ಸ್ಕೀಮಲ್ಲಿ ನಿವೇಶನ ಕೊಡ್ತಾರಪ್ಪ, ಇಷ್ಟೊಂದು ಜನರಿಗೆ ಎಂದು ಸುವರ್ಣ ನ್ಯೂಸ್ ಕುತೂಹಲದಿಂದ ಹೋಗಿ ನೋಡಿದಾಗ ಅಲ್ಲಿ ನಡೀತಿದ್ದದ್ದೇ ಬೇರೆ. ಯಾವಾಗ ಸುವರ್ಣ ನ್ಯೂಸ್ ಕ್ಯಾಮರಾ ಕಂಡ್ರೋ ಆಗ ಇಡೀ ಸೀನೇ ಬದಲಾಯ್ತು.
ಅಸಲಿಗೆ ಹಣ ವಸೂಲಿಗೆ ಬೇರೇಯದ್ದೇ ಕಾರಣ ಇದೆ. ಫೆಬ್ರವರಿ 27ರಂದು ಹುಬ್ಬಳ್ಳಿಯಲ್ಲಿ ನಿವೇಶನ ರಹಿತರ ಹೋರಾಟ ಸಮಿತಿ ರಾಜ್ಯಮಟ್ಟದ ಸಮಾವೇಶ ಇದಿಯಂತೆ. ಅವತ್ತು ಆಗಮಿಸೋ ವಸತಿ ಸಚಿವರು ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರನ್ನ ಕರೆಸಿ ಸನ್ಮಾನ ಮಾಡೋಕೆ ಖರ್ಚುವೆಚ್ಚ ಹೊಂದಿಸೋ ಕೆಲಸ ಇದಾಗಿತ್ತು.
ಅಮಾಯಕರು ಕೊಟ್ಟ ಹಣದಲ್ಲಿ ಗಣ್ಯರನ್ನ ಸಂತೈಸಿ, ಶಹಭಾಷ್'ಗಿರಿ ಗಿಟ್ಟಿಸ್ಕೊಂಡು ಅವರಿಂದ ನಿವೇಶನ ಮಂಜೂರಿ ಮಾಡಿಸಿಕೊಡೋ ಪ್ಲಾನ್ ಇದು. ಪಾಪ ಈ ಅಮಾಯಕರಿಗೇನು ಗೊತ್ತು? ನಿವೇಶನ ಕೊಟ್ಟೇ ಬಿಡ್ತಾರೆ ಅಂತಾ ಕೂಲಿ ನಾಲಿ ಮಾಡಿ ಕೂಡಿಟ್ಟ ಹಣ ತಂದು ಸುರಿದಿದ್ದಾರೆ.
ವರದಿ: ಹುಬ್ಬಳ್ಳಿಯಿಂದ ಗುರುರಾಜ ಹೂಗಾರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.