ನಾನು ಈ ಮೊದಲೇ ಕಾಂಗ್ರೆಸಿಗರನ್ನು ಎಚ್ಚರಿಸಿದ್ದೆ| ನನ್ನ ಮೇಲೆಯೇ ಕ್ರಮ ಕೈಗೊಂಡು ಅಮಾನತ್ತು ಮಾಡಿದ್ರು| ಇವಾಗ ನಾನು ಅವರಿಗೆ ಬೇಕಾದ್ನಾ?
ಬೆಂಗಳೂರು[ಜು.07]: ಕರ್ನಾಟಕದಲ್ಲಿ ಶಾಸಕರ ರಾಜೀನಾಮೆ ವಿಚಾರ ರಾಜಕೀಯ ವಲಯದಲ್ಲಿ ಬಹುದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಸಾಮೂಹಿಕ ರಾಜೀನಾಮೆಯಿಂದ ದೋಸ್ತಿ ಸರ್ಕಾರ ಪತನಗೊಳ್ಳುವ ಲಕ್ಷಣಗಳು ದಟ್ಟವಾಗಿದ್ದು, ರಾಜ್ಯ ಬಿಜೆಪಿ ಹಿಂದೆಂದಿಗಿಂತಲೂ ಫುಲ್ ಆ್ಯಕ್ಟಿವ್ ಆಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಪಕ್ಷದಿಂದ ಅಮಾನತ್ತುಗೊಂಡ ಮಾಜಿ ಸಚಿವ ರೋಶನ್ ಬೇಗ್ ರಾಜೀನಾಮೆ ವಿಚಾರಜಕ್ಕೆ ಸಂಬಂಧಿಸಿದಂತೆ ಕೈ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ಹೌದು ಶಾಸಕರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿರುವ ರೋಶನ್ ಬೇಗ್ 'ನಾನು ಈ ಮೊದಲೇ ಕಾಂಗ್ರೆಸಿಗರನ್ನು ಎಚ್ಚರಿಸಿದ್ದೆ. ಆದರೆ ನನ್ನ ಮೇಲೆಯೇ ಕ್ರಮ ಕೈಗೊಂಡು ಅಮಾನತ್ತು ಮಾಡಿದ್ರು. ಈಗ ರೋಶನ್ ಬೇಗ್ ಅವರಿಗೆ ಬೇಕಾಗಿದ್ದಾನಾ? ಇಷ್ಟೆಲ್ಲಾ ನಡೆದ ಬಳಿಕ ನನಗೆ ಕರೆ ಮೇಲೆ ಕರೆ ಮಾಡ್ತಾರೆ. ನಾನು ನನಗೆ ಯಾವುದು ಬೇಡಾ ಅಂತ ಕೈ ಮುಗಿದಿದ್ದೇನೆ' ಎಂದಿದ್ದಾರೆ.
ತಮ್ಮ ಮುಂದಿನ ನಡೆ ಕುರಿತಾಗಿ ಮಾತನಾಡಿದ ರೋಶನ್ ಬೇಗ್ 'ಇಂದು ಸಂಜೆ ಕಾರ್ಯಕ್ರಮ ಇದೆ. ಅದನ್ನು ಮುಗಿಸಿ ನಂತರ ನನ್ನ ತೀರ್ಮಾನ ಹೇಳ್ತೀನಿ. ನಾನು ಯಾವುದೂ ಸಹ ಮುಚ್ಚಿಟ್ಟು ಮಾಡೋದಿಲ್ಲ ನಿಮಗೆಲ್ಲ ಹೇಳಿಯೇ ನನ್ನ ಮುಂದಿನ ನಡೆ ತಿಳಿಸುತ್ತೇನೆ' ಎಂದಿದ್ದಾರೆ.