ಜನಶ್ರೀ ಅಕೌಂಟೆಂಟ್‌ ಸಾವು: ಕೊಲೆ ದೂರು

By Suvarna Web DeskFirst Published Apr 18, 2017, 5:07 AM IST
Highlights

ಯಲಹಂಕ ನಿವಾಸಿ ಕಾರ್ತಿಕ್‌ ಲಾರೆನ್ಸ್‌ ಜನಶ್ರೀ ಸುದ್ದಿ ವಾಹಿನಿಯಲ್ಲಿ ಅಕೌಂಟೆಂಟ್‌ ಆಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕಳೆದ ಏ.10 ರಂದು ತಡರಾತ್ರಿ 1ರ ಸುಮಾರಿಗೆ ಕಾರ್ತಿಕ್‌ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಅಪಘಾತವಾಗಿದ್ದು, ಅಪರಿಚಿತ ವ್ಯಕ್ತಿಗಳು ಬ್ಯಾಪ್ಟಿಸ್ಟ್‌ ಆಸ್ಪತ್ರೆಗೆ ಸೇರಿಸಿ ಹೋಗಿದ್ದರು. ಚಿಕಿತ್ಸೆ ಫಲಿಸದೆ ಏ.13 ರಂದು ಕಾರ್ತಿಕ್‌ ಮೃತಪಟ್ಟಿದ್ದರು.

ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡು ಹೆಬ್ಬಾಳದ ಬ್ಯಾಪಿಸ್ಟ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜನಶ್ರೀ ಸುದ್ದಿ ವಾಹಿನಿಯ ಅಕೌಂಟೆಂಟ್‌ ಕಾರ್ತಿಕ್‌ ಲಾರೆನ್ಸ್‌ (25) ಏ.13 ರಂದು ಮೃತಪಟ್ಟಿದ್ದು, ಪ್ರಕರಣದ ಬಗ್ಗೆ ಅನುಮಾನ ಮೂಡಿದೆ. ಈ ಸಂಬಂಧ ಹೆಬ್ಬಾಳದ ಸಂಚಾರ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಆದರೆ, ಮಗನ ಕೊಲೆಯಾಗಿದೆ ಎಂದು ಆರೋಪಿಸಿ ಮೃತನ ಕುಟುಂಬದವರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಯಲಹಂಕ ನಿವಾಸಿ ಕಾರ್ತಿಕ್‌ ಲಾರೆನ್ಸ್‌ ಜನಶ್ರೀ ಸುದ್ದಿ ವಾಹಿನಿಯಲ್ಲಿ ಅಕೌಂಟೆಂಟ್‌ ಆಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕಳೆದ ಏ.10 ರಂದು ತಡರಾತ್ರಿ 1ರ ಸುಮಾರಿಗೆ ಕಾರ್ತಿಕ್‌ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಅಪಘಾತವಾಗಿದ್ದು, ಅಪರಿಚಿತ ವ್ಯಕ್ತಿಗಳು ಬ್ಯಾಪ್ಟಿಸ್ಟ್‌ ಆಸ್ಪತ್ರೆಗೆ ಸೇರಿಸಿ ಹೋಗಿದ್ದರು. ಚಿಕಿತ್ಸೆ ಫಲಿಸದೆ ಏ.13 ರಂದು ಕಾರ್ತಿಕ್‌ ಮೃತಪಟ್ಟಿದ್ದರು.

ಪೊಲೀಸರು ಆಸ್ಪತ್ರೆಗೆ ಸೇರಿಸಿದವರನ್ನು ಪತ್ತೆ ಹಚ್ಚಿದಾಗ ಟೆಂಪೋ ಟ್ರಾವೆಲರ್‌ ಚಾಲಕ ಆಸ್ಪತ್ರೆಗೆ ಸೇರಿಸಿದ ವಿಷಯ ತಿಳಿಯಿತು. ಚಾಲಕನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕಾರ್ತಿಕ್‌ ಬೈಕ್‌ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾಗಿ ಹೇಳಿಕೆ ನೀಡಿದ್ದಾನೆ.

ಈ ಆಧಾರದ ಮೇಲೆ ಅಪಘಾತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರ್ತಿಕ್‌ ಮರಣೋತ್ತರ ಪರೀಕ್ಷೆ ಇನ್ನೂ ಕೈ ಸೇರಿಲ್ಲ ಎಂದು ಡಿಸಿಪಿ ರೇಣುಕಾ ಸುಕುಮಾರ್‌ ‘ಕನ್ನಡಪ್ರಭ'ಕ್ಕೆ ಹೇಳಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿದ್ದ ಬೈಕ್‌ ನಾಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದರು. ಕಾರ್ತಿಕ್‌ ಮೃತಪಟ್ಟಎರಡು ದಿನಗಳ ಬಳಿಕ ಜನಶ್ರೀ ವಾಹಿನಿಯ ಸಿಇಒ ಲಕ್ಷ್ಮೇ ಪ್ರಸಾದ್‌ ವಾಜಪೇಯಿ ಅವರನ್ನು ಬ್ಲ್ಯಾಕ್‌ಮೇಲ್‌ ಆರೋಪದಡಿ ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದರು.

click me!