ಮಗಳ ಮದುವೆಗಾಗಿ ಇರಿಸಿದ್ದ ಚಿನ್ನ ಕೊನೆಗೂ ಮನೆಯವರ ಕೈ ಸೇರಿದೆ. ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ಚಿನ್ನ ಬಂದು ಹುಡುಕಿದಾಗ ಅಲ್ಲಿಯೇ ಪತ್ತೆಯಾಗಿದೆ.
ಮಡಿಕೇರಿ: ಮಗಳ ಮದುವೆಗೆಂದು ಕುಟುಂಬವೊಂದು ಸಂಗ್ರಹಿಸಿಟ್ಟಿದ್ದ ಹಣ, ಒಡವೆಗಳು ಭೂಕುಸಿತದ ವೇಳೆ ಮನೆ ಸಮೇತ ಮಣ್ಣು ಪಾಲಾಗಿತ್ತು. ಮಳೆ ಕಡಿಮೆಯಾಗುತ್ತಿದ್ದಂತೆ ಮನೆ ಕುಸಿದ ಜಾಗದಲ್ಲಿ ಗುರುವಾರ ಹುಡುಕಾಟ ನಡೆಸಿದಾಗ ಅದೃಷ್ಟವಶಾತ್ ಒಡವೆಗಳೆಲ್ಲ ಸಿಕ್ಕಿವೆ!
ಹೌದು, ತಾಲೂಕಿನ ಹಟ್ಟಿಹೊಳೆಯ ಉಮೇಶ್ ಶೆಟ್ಟಿದಂಪತಿಯ ಹಿರಿಯ ಪುತ್ರಿ ನವ್ಯಾ ಅವರ ವಿವಾಹ ಆ.30ರಂದು ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದವರು ಮದುವೆಗಾಗಿ ಒಂದಷ್ಟುಒಡವೆ, ಹಣ ತೆಗೆದಿಟ್ಟಿದ್ದರು. ಆದರೆ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿರೋಪದಲ್ಲಿ ಇವರ ಮನೆ ಸಂಪೂರ್ಣ ಹಾನಿಗೊಳಗಾಗಿತ್ತು. ಪರಿಣಾಮ ಪೋಷಕರು ಮಗಳ ಮದುವೆಗೆ ಕೂಡಿಟ್ಟಿದ್ದ ಚಿನ್ನ, ಹಣ, ಬಟ್ಟೆಗಳು ತುಂಬಿದ್ದ ಬೀರು ಮಣ್ಣಿನಡಿ ಹೂತು ಹೋಗಿತ್ತು. ಮಳೆ ಕಡಿಮೆಯಾಗುತ್ತಿದ್ದಂತೆ ಮಣ್ಣಿನಡಿ ಹೂತುಹೋಗಿದ್ದ ಮನೆಯ ಸಾಮಗ್ರಿಗಳನ್ನು ಮೇಲೆತ್ತಲು ಸ್ಥಳೀಯರು ಹರಸಾಹಸ ಪಟ್ಟರು.
ನಂತರ ಶಾಸಕ ಅಪ್ಪಚ್ಚು ರಂಜನ್ ಅವರು ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿದಾಗ ಎಲ್ಲಾ ಚಿನ್ನಾಭರಣಗಳು ದೊರಕಿವೆ. ಆದರೆ ಹಣ ಪತ್ತೆಯಾಗಲಿಲ್ಲ. ಈ ಭಾಗದಲ್ಲಿ ಗುಡ್ಡ ಕುಸಿದ ಪರಿಣಾಮ 10 ಎಕರೆಯಷ್ಟುಪ್ರದೇಶ ಭೂಕುಸಿತಕ್ಕೆ ಒಳಗಾಗಿದೆ.