
ಬೆಂಗಳೂರು : ಕಡಿಮೆ ಬೆಲೆಗೆ ಚಿನ್ನದ ತುಂಡುಗಳನ್ನು ಕೊಡು ವುದಾಗಿ ನಂಬಿಸಿ ವ್ಯಾಪಾರಿಯೊಬ್ಬರಿಗೆ ಟೋಪಿ ಹಾಕಿದ ಕಿಡಿಗೇಡಿಗಳು 5 ಲಕ್ಷ ದೋಚಿರುವ ಘಟನೆ ಜೆ.ಸಿ.ನಗರದಲ್ಲಿ ನಡೆದಿದೆ. ಜೆ.ಸಿ.ರಸ್ತೆಯ ಟಾರ್ಪಲಿನ್ ಮಾರಾಟ ಮಳಿಗೆ ಮಾಲೀಕ ಪ್ರೇಮ್ ಮೆಹ್ತಾ ವಂಚನೆಗೆ ಒಳಗಾಗಿದ್ದು, ಈ ಸಂಬಂಧ ಫೆ.1 ರಂದು ಎಸ್. ಜೆ.ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಸಿಸಿಟೀವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳಾದ ಮೋಹನ್ ಮತ್ತು ಸೀತಾರಾಮ್ ಪತ್ತೆಗೆ ಬಲೆ ಬೀಸಿದ್ದಾರೆ. ಹದಿನೈದು ದಿನಗಳ ಹಿಂದೆ ಟಾರ್ಪಲಿನ್ ಖರೀದಿಸುವ ನೆಪದಲ್ಲಿ ಮೆಹ್ತಾ ಅವರನ್ನು ಭೇಟಿಯಾದ ಮೋಹನ್ ಹಾಗೂ ಸೀತಾ ರಾಮ್, ನಮ್ಮಲ್ಲಿ ಐದು ಕೆ.ಜಿ. ಬಂಗಾರದ ತುಂಡುಗಳಿವೆ. ಅವುಗಳನ್ನು ತಲಾ ಕೆ.ಜಿ 5 ಲಕ್ಷಕ್ಕೆ ನೀಡುವುದಾಗಿ ನಂಬಿಸಿ ಹಣ ಪಡೆದು ನಕಲಿ ಚಿನ್ನ ಕೊಟ್ಟು ವಂಚಿಸಿದ್ದಾರೆ.
2 ದಿನಗಳ ಬಳಿಕ ನಿಜ ಬೆಳಕಿಗೆ: ಕೆಂಪೇಗೌಡ ನಗರದ ಬಸನಗುಡಿ ರಸ್ತೆಯಲ್ಲಿ ನೆಲೆಸಿರುವ ಪ್ರೇಮ್ ಮೆಹ್ತಾ, ಜೆ.ಸಿ.ರಸ್ತೆಯಲ್ಲಿ ಓಸಿಯಾ ಟಾರ್ಪಲಿನ್ ಅಂಗಡಿಗೆ ಇಟ್ಟಿದ್ದಾರೆ. ಜ.15 ರಂದು ಮೋಹನ್ ಹಾಗೂ ಸೀತಾರಾಮ್, ಟಾರ್ಪಲಿನ್ ಖರೀದಿಸುವ ನೆಪದಲ್ಲಿ ಮೆಹ್ತಾ ಅವರನ್ನು ಭೇಟಿಯಾಗಿದ್ದರು. ಆಗ ಹಳೆಯ ತಾಮ್ರದ ನಾಣ್ಯ ಹಾಗೂ ಹಾಗೂ ಚಿನ್ನದ ತುಂಡುಗಳನ್ನು ತೋರಿಸಿದ ಆರೋಪಿಗಳು, ನಾವು ಆಂಧ್ರಪ್ರದೇಶದಲ್ಲಿ ಒಂದು ಕಟ್ಟಡದ ತೆರವುಗೊಳಿಸುವ ವೇಳೆ ಸುಮಾರು 5 ಕೆ.ಜಿಯಷ್ಟು ಸಿಕ್ಕಿವೆ. ಅವುಗಳನ್ನು ನಾವು ತಲಾ ಕೆಜಿ 7 ಲಕ್ಷಗೆ ಮಾರಾಟ ಮಾಡುವುದಾಗಿ ತಿಳಿಸಿದ್ದರು.
ಅಲ್ಲದೆ, ನಿಮಗೆ ಬೇಕಿದ್ದರೆ 5 ಲಕ್ಷ ಗೆ ಕೊಡುತ್ತೇವೆ ಎಂದಿದ್ದರು. ಈ ಮಾತಿಗೆ ಒಪ್ಪಿದ ಮೆಹ್ತಾ, ನಿಮಗೆ ಫೋನ್ ಮಾಡುತ್ತೇವೆ ಎಂದು ತಿಳಿಸಿದ್ದರು. ಆಗ ಮೆಹ್ತಾ ಅವರನ್ನು ಮೊಬೈಲ್ ಸಂಖ್ಯೆ ಪಡೆದು ತೆರಳಿದ್ದ ಮೋಹನ್, ಜ.17 ರಂದು ಮೆಹ್ತಾ ಅವರಿಗೆ ಕರೆ ಮಾಡಿ ನಾಳೆ ಚಿನ್ನ ತರುತ್ತೇವೆ. ನಾವು ಹೇಳಿದ ಸ್ಥಳಕ್ಕೆ ನೀವು ಹಣವನ್ನು ತೆಗೆದುಕೊಂಡು ಬನ್ನಿ ಎಂದಿದ್ದ. ಮರುದಿನ ಬೆಳಗ್ಗೆ 11 ಗಂಟೆಗೆ ಮತ್ತೊಬ್ಬ ಆರೋಪಿ ಸೀತಾರಾಮ್, ನೇರವಾಗಿ ಮೆಹ್ತಾ ಅಂಗಡಿಗೆ ಹೋಗಿ ಅವರನ್ನು ಟೌನ್ಹಾಲ್ನ ಅಂಡರ್ ಪಾಸ್ ಬಳಿಗೆ ಕರೆ ತಂದಿದ್ದ.
ಅಲ್ಲಿದ್ದ ಮೋಹನ್, ಈ ಜಾಗದಲ್ಲಿ ಟ್ರಾಫಿಕ್ ಇದೆ. ಬೇರೆ ಕಡೆ ಹೋಗೋಣವೆಂದು ಹೇಳಿದ್ದ. ಕೊನೆಗೆ ಮೈಶುಗರ್ ಬಿಲ್ಡಿಂಗ್ ಹಿಂಭಾಗದ ಬಿ ಉಸ್ಮಾನ್ ಖಾನ್ ರಸ್ತೆಯಲ್ಲಿ ಮೆಹ್ತಾಗೆ ಬ್ಯಾಗ್ ನೀಡಿದ ಆರೋಪಿಗಳು, ಇದರದಲ್ಲಿ ಒಂದೂವರೆ ಕೆ.ಜಿ ತೂಕದ ಚಿನ್ನದ ತುಂಡುಗಳಿವೆ ಎಂದು ನಂಬಿಸಿ 5 ಲಕ್ಷ ಪಡೆದು ತೆರಳಿದ್ದರು. ಇತ್ತ ಕಡಿಮೆ ಬೆಲೆಗೆ ಚಿನ್ನ ಸಿಕ್ಕಿದ ಖುಷಿಯಲ್ಲಿದ್ದ ಮೆಹ್ತಾ, 2 ದಿನಗಳ ಬಳಿಕ ಅವುಗಳನ್ನು ಚಿನ್ನದ ಅಂಗಡಿಗೆ ಹೋಗಿ ಸಾಚಾತನ ಪರೀಕ್ಷಿಸಿದ್ದಾಗಲೇ ವಂಚನೆ ಹೋಗಿರುವ ಸಂಗತಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ