
ಶಿರಾಳಕೊಪ್ಪ[ಅ.28]: ಮುಖ್ಯಮಂತ್ರಿ ಕುಮಾರಸ್ವಾಮಿಗಳೇ ನಿಮ್ಮನ್ನು ಕಣ್ಣೀರು ಹಾಕುವದಕ್ಕೆ ಸಿಎಂ ಆಗಿ ಮಾಡಿಲ್ಲ. ಸಂಕಷ್ಟದಲ್ಲಿರುವ ಬಡವರ ಮತ್ತು ರೈತರ ಕಣ್ಣೀರು ಒರೆಸುವ ಕೆಲಸ ಮಾಡಲಿ ಎಂದು ಮುಖ್ಯಮಂತ್ರಿ ಮಾಡಿದ್ದಾರೆ. ಕಣ್ಣೀರು ಒರೆಸಲು ಆಗದಿದ್ದಲ್ಲಿ ನಿಮ್ಮ ಜಾಗ ಖಾಲಿ ಮಾಡಿ ಎಂದು ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ತೊಗರ್ಸಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಮಗೆ ಕಣ್ಣೀರು ಕಣ್ಣೀರು ಹಾಕುವ ಸಿಎಂ ಬೇಡ, ಕಣ್ಣೀರು ಒರೆಸುವ ಸಿಎಂ ಬೇಕು. ಆ ಶಕ್ತಿ ರಾಜ್ಯದಲ್ಲಿ ಯಡಿಯೂರಪ್ಪನವರಿಗೆ ಮಾತ್ರ ಇದೆ ಎಂದರು.
ಈ ಕ್ಷೇತ್ರ ಶರಣರ ನಾಡು. ಯಾವುದೇ ಅನ್ಯಾಯವಾದರೂ ಅದನ್ನು ಖಂಡಿಸಿ ಸಿಡಿದೇಳುವ ಗುಣ ಇಲ್ಲಿಯದು. ಯಡಿಯೂರಪ್ಪನವರು ಅನ್ಯಾಯವಾದಾಗಲೆಲ್ಲ ಸಿಡಿದೆದ್ದಿದ್ದಾರೆ. ಕಳೆದ ಬಾರಿಗಿಂತ ಎರಡು ಪಟ್ಟು ಶಾಸಕರ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. ರಾಜ್ಯದ ಜನತೆಯ ಹೃದಯ ಗೆದ್ದಿರುವ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಈ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸಿದರೆ ಯಡಿಯೂರಪ್ಪ ಮತ್ತೆ ಸಿಎಂ ಆಗುವದರಲ್ಲಿ ಅನುಮಾನವೇ ಬೇಡ ಇದು ನನ್ನ ಭವಿಷ್ಯ ಎಂದು ಹೇಳಿದರು.
ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ನಮ್ಮ ವಿರೋಧಿಗಳು ಯಡಿಯೂರಪ್ಪರ ಕಾಲದಲ್ಲಿ ನೀರಾವರಿ ಮಾಡಲಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಮಳೆ ಸಾಕಷ್ಟು ಬೀಳುತ್ತಿತ್ತು. ಕೆರೆಕಟ್ಟೆಗಳು ಕೊಚ್ಚಿಕೊಂಡು ಹೋಗುವದನ್ನು ತಾಲೂಕಿನ ಜನತೆ ನೋಡಿದ್ದಾರೆ. ಆದರೆ ಮೂರು ವರ್ಷಗಳಿಂದೀಚೆಗೆ ಮಳೆ ಆಗದೇ ಅಂತರಜಲ ಬತ್ತಿ ಕೆರೆಕಟ್ಟೆಗಳಲ್ಲಿ ನೀರಿಲ್ಲದಂತಾಗಿದೆ. ಆ ಕಾರಣಕ್ಕಾಗಿ ನೀರಾವರಿ ಮಾಡಲು ಯಡಿ
ಯೂರಪ್ಪನವರು ಸಂಕಲ್ಪ ಮಾಡಿ ಕೆಲ ದಿನಗಳ ಹಿಂದೆ ಏತ ನೀರಾವರಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಸರ್ವೆ ಕಾರ್ಯ ಮುಗಿದ ತಕ್ಷಣ ನೀರಾವರಿ ಯೋಜನೆ ಪ್ರಾರಂಭವಾಗಲಿದೆ ಎಂದರು.
ಸುರಪುರ ಶಾಸಕ ರಾಜೀವಗೌಡ ಮಾತನಾಡಿ, ಬಳ್ಳಾರಿಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಅದಕ್ಕಿಂತ ಹೆಚ್ಚು ವಿಶ್ವಾಸ ಶಿವಮೊಗ್ಗದಲ್ಲಿ ರಾಘಣ್ಣ ಗೆಲವಿನಲ್ಲಿದೆ. ಬಿಜೆಪಿ ಎದುರಿಗೆ ಇಂದು ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸಿಗದೆ ಹೀನಾಯ ಸ್ಥಿತಿ ತಲುಪಿದೆ. ಜೆಡಿಎಸ್ಗೆ ಲೋಕಸಭಾ ಸ್ಥಾನ ಬಿಟ್ಟುಕೊಟ್ಟು , ಪಕ್ಕದ ಮನೆಯಲ್ಲಿ ಮಗು ಹುಟ್ಟಿದರೆ ಸಿಹಿ ಹಂಚುವ ಹಂತಕ್ಕೆ ಹೋಗಿದ್ದಾರೆ ಎಂದು ಲೇವಡಿ ಮಾಡಿದರು.
ಪಪಂ ಸದಸ್ಯ ಮಂಜುನಾಯಕ್ ಇತರರು ಪಕ್ಷಕ್ಕೆ ಸೇರ್ಪಡೆಗೊಂಡರು. ಕುಡಚಿ ಶಾಸಕ ರಾಜೀವ್, ಶೃಂಗೇರಿ ಮಾಜಿ ಶಾಸಕ ಜೀವರಾಜ್, ಹಿರೇ ಕೆರೂರ ಮಾಜಿ ಶಾಸಕ ಯುಬಿ ಬಣ ಕಾರ್ ಗುರುಮೂರ್ತಿ, ತಾಪಂ ಅಧ್ಯಕ್ಷ ಸುಬ್ರಮಣ್ಯ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಸಣ್ಣ ಹನುಮಂತಪ್ಪ, ಜಿಪಂ ಸದಸ್ಯರಾದ ಅಕ್ಷತಾ, ರೇಣುಕಾ ಹನಮಂತಪ್ಪ, ಪದ್ಮನಾಭ ಭಟ್, ಅಗಡಿ ಅಶೋಕ, ರಾಮಾನಾಯಕ್, ಬಂಗಾರ್ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಶಿವಣ್ಣ, ಪಪಂ ಅಧ್ಯಕ್ಷೆ ಭಾರತಿ ಇತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.