ಈಶ್ವರಪ್ಪ, ಸೋಮಣ್ಣ  ಟಿಕೆಟ್ ತಪ್ಪಿಸಲೆತ್ನ?

Published : Oct 09, 2017, 02:06 PM ISTUpdated : Apr 11, 2018, 01:10 PM IST
ಈಶ್ವರಪ್ಪ, ಸೋಮಣ್ಣ  ಟಿಕೆಟ್ ತಪ್ಪಿಸಲೆತ್ನ?

ಸಾರಾಂಶ

ಸಂಸದರಿಗೆ ಟಿಕೆಟ್ ಇಲ್ಲ ಎಂಬ ನೀತಿ ಮೇಲ್ಮನೆ ಸದಸ್ಯರಿಗೂ ಅನ್ವಯಿಸಲು ಪ್ರಯತ್ನ ವಿಧಾನಸಭೆಗೆ ಸ್ಪರ್ಧಿಸಲು ಆಸಕ್ತಿ ಇರುವ ವಿ.ಪರಿಷತ್ ಸದಸ್ಯರು ಇವರಿಬ್ಬರು ಮಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಾಲಿ ವಿಧಾನಪರಿಷತ್ ಸದಸ್ಯರಾಗಿರುವವರಿಗೆ ಟಿಕೆಟ್ ಸಿಗುತ್ತಾ ಎಂಬ ಅನುಮಾನ ಮೂಡಿದೆ. ಈಗ ವಿಧಾನಪರಿಷತ್ ಸದಸ್ಯರಾಗಿರುವವರಿಗೆ ವಿಧಾನಸಭೆಯಲ್ಲಿ ಟಿಕೆಟ್ ನೀಡುವುದು ಬೇಡ ಎಂಬ ಅಭಿಪ್ರಾಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರು ಪಕ್ಷದ ಆಂತರಿಕ ವಲಯದಲ್ಲಿ ವ್ಯಕ್ತಪಡಿಸಿರುವುದು ಗೊಂದಲಕ್ಕೀಡು ಮಾಡಿದೆ.

ಹಾಲಿ ಪರಿಷತ್ ಸದಸ್ಯರಾಗಿರುವ ಕೆ.ಎಸ್.ಈಶ್ವರಪ್ಪ ಮತ್ತು ವಿ.ಸೋಮಣ್ಣ ಅವರನ್ನು ಗುರಿಯಾಗಿಸಿ ಕೊಂಡೇ ಇಂಥದ್ದೊಂದು ಗೊಂದಲ ಹುಟ್ಟುಹಾಕಲಾಗುತ್ತಿದೆ ಎಂಬ ಮಾತೂ ಕೇಳಿಬಂದಿದೆ. ಈಗಾಗಲೇ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಸಂಸತ್ ಸದಸ್ಯರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ರವಾನಿಸಿದ್ದಾರೆ. ತೀರಾ  ಅನಿವಾರ್ಯವಾದಲ್ಲಿ ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಅವರಿಗೆ ಟಿಕೆಟ್ ನೀಡುವ ನಿರೀಕ್ಷೆಯಿದೆ. ಅದು ಚುನಾವಣೆ ಸಮೀಪಿ ಸಿದಾಗಲೇ ಸ್ಪಷ್ಟವಾಗಲಿದೆ. ಉಳಿದ ಸಂಸದರಿಗೆ ಟಿಕೆಟ್ ನೀಡುವುದು ಸಾಧ್ಯವಿಲ್ಲ ಎಂಬ ನಿಲುವಿಗೆ ವರಿಷ್ಠರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೀಗ ಸಂಸದರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಮಾದರಿಯನ್ನೇ ವಿಧಾನಪರಿಷತ್ ಸದಸ್ಯರಿಗೂ ಅನ್ವಯಿಸಬೇಕು ಎಂಬ ಪ್ರಯತ್ನ ಯಡಿಯೂರಪ್ಪ ಅವರ ಆಪ್ತರಿಂದ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗಿದ್ದು, ಇದು ಯಶಸ್ವಿಯಾಗುತ್ತಾ ಎಂಬುದನ್ನು ಕಾದು ನೋಡಬೇಕು.

ಸದ್ಯ ಪರಿಷತ್ತಿನಲ್ಲಿ ಬಿಜೆಪಿಯ ಸುಮಾರು 23 ಸದಸ್ಯರಿದ್ದರೂ ವಿಧಾನಸಭಾ ಚುನಾವಣೆಯತ್ತ ಗಂಭೀರ ಆಸಕ್ತಿ ತೋರಿದವರು ಈಶ್ವರಪ್ಪ ಮತ್ತು ಸೋಮಣ್ಣ ಅವರಿಬ್ಬರೇ. ಕಾರಣ ಸರಳ. ಅವರಿಬ್ಬರೂ ಅನಿವಾರ್ಯವಾಗಿ ವಿಧಾನಪರಿಷತ್ ಪ್ರವೇಶಿಸಿದ್ದಾರೆ.

ವಿಧಾನಸಭೆಯಲ್ಲಿ ಸೋಲುಂಡಿರುವ ಹಿನ್ನೆಲೆಯಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಅವರಿಬ್ಬರನ್ನೂ ಪರಿಷತ್ತಿಗೆ ಕಳುಹಿಸಲಾಗಿತ್ತು. ಪರಿಷತ್ ಸದಸ್ಯರಾಗಿರುವವರು ವಿಧಾನಸಭೆಗೆ ಸ್ಪರ್ಧಿಸುವುದರಿಂದ ವೈಯಕ್ತಿಕವಾಗಿ ನಷ್ಟವೇನೂ ಉಂಟಾಗಲಿಕ್ಕಿಲ್ಲ. ಗೆದ್ದರೆ ವಿಧಾನಸಭೆಯತ್ತ ಹೆಜ್ಜೆ ಹಾಕುವುದು, ಸೋತಲ್ಲಿ ಈಗಿರುವ ಪರಿಷತ್ ಸದಸ್ಯತ್ವದಲ್ಲೇ ಮುಂದುವರೆಯಬಹುದಾಗಿದೆ. ಆದರೆ, ಗೆದ್ದರೆ ಪಕ್ಷಕ್ಕೆ ನಷ್ಟವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಉಪಚುನಾವಣೆ ಎದುರಿಸಬೇಕಾಗಿರುವುದರಿಂದ ಮತ್ತೆ ಪಕ್ಷಕ್ಕೆ ಕಷ್ಟವಾಗಬಹುದು.

ಆದರೆ, ಇಲ್ಲಿ ಈಶ್ವರಪ್ಪ ಮತ್ತು ಸೋಮಣ್ಣ ಅವರಿಬ್ಬರನ್ನೂ ವಿಧಾನಸಭೆ ಪ್ರವೇಶಿಸದಂತೆ ತಡೆಯುವ ಪ್ರಯತ್ನ ನಡೆಯುತ್ತಿರುವಂತೆ ಕಂಡುಬರುತ್ತಿದೆ. ಕಳೆದ ಬಾರಿ ಈಶ್ವರಪ್ಪ ಅವರು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಮತ್ತು ಸೋಮಣ್ಣ ಅವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಬಾರಿಯೂ ಅವರಿಬ್ಬರೂ ಆಯಾ ಕ್ಷೇತ್ರಗಳಿಂದ ಗೆಲ್ಲುವುದಿಲ್ಲ, ಆ ಕ್ಷೇತ್ರಗಳಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಬೇಕು, ಈಶ್ವರಪ್ಪ ಮತ್ತು ಸೋಮಣ್ಣ ಅವರು ಸೂಚಿಸುವವರಿಗೇ ಟಿಕೆಟ್ ನೀಡಿದರಾಯಿತು ಎಂಬ ವಾದವನ್ನು ಯಡಿಯೂರಪ್ಪ ಆಪ್ತರು ಮಂಡಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ!
ಬೆಂಗಳೂರಲ್ಲಿ ಇಂದು ಇನ್ನಷ್ಟು ಚಳಿ; ತಾಪಮಾನ ಕುಸಿತ, ಈ ಮೂರು ಜಿಲ್ಲೆಗಳಲ್ಲಿ ಶೀತ ಅಲೆ ಎಚ್ಚರಿಕೆ!