
ಮಿಜೋರಾಂ[ನ.11]: ಚುನಾವಣಾ ಆಯೋಗವು ಮಿಜೋರಾಂನ ಮುಖ್ಯ ಚುನಾವಣಾಧಿಕಾರಿ ಎಸ್. ಬಿ. ಶಶಾಂಕ್ರನ್ನು ಅಧಿಕಾರದಿಂದ ತೆಗೆದು ಹಾಕಲು ನಿರ್ಧರಿಸಿದೆ. ಮಿಜೋರಾಂನಲ್ಲಿರುವ ಶಶಾಂಕ್ರನ್ನು ಕೆಳಗಿಳಿಸಿ ಎಂಬುವುದು ಹಲವು ಸಮಯದ ಬೇಡಿಕೆ. ಇಲ್ಲಿನ ರಾಜಧಾನಿ ಆಯಿಜ್ವಾಲ್ ಸೇರಿದಂತೆ ಹಲವಾರು ಕ್ಷೇತ್ರದ ರಾಜಕೀಯ ನಾಯಕರು ಅವರನ್ನು ಅಧಿಕಾರದಿಂದ ತೆಗೆದು ಹಾಕುವ ವಿಚಾರವಾಗಿ ಹೋರಾಟವನ್ನೂ ನಡೆಸಿದ್ದರು. 40 ಕ್ಷೇತ್ರಗಳಿರುವ ಮಿಜೋರಾಂಗೆ ನವೆಂಬರ್ನ 28 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ ಎಂಬುವುದು ಗಮನಾರ್ಹ.
ಮುಖ್ಯ ಚುನಾವಣಾಧಿಕಾರಿ ಶಶಾಂಕ್ರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದ್ದ ಬೆನ್ನಲ್ಲೇ ಕೇಂದ್ರ ಚುನಾವಣಾಧಿಕಾರಿಯು ತಮ್ಮ ತಂಡದೊಂದಿಗೆ ತನಿಖೆ ನಡೆಸಲು ಮಿಜೋರಾಂಗೆ ತೆರಳಿದ್ದರು. ತನಿಖೆಯ ಬಳಿಕ ಅಂತಿಮವಾಗಿ ಶಶಾಂಕ್ರನ್ನು ತೆಗೆದು ಹಾಕಲು ನಿರ್ಧರಿಸಲಾಗಿದೆ. ಇದರೊಂದಿಗೆ ಚುನಾವಣಾ ಆಯೋಗವು ನೂತನ ಮುಖ್ಯ ಚುನಾವಣಾ ಅಧಿಕಾರಿಯ ಆಯ್ಕೆಗಾಗಿ ಮಿಜೋರಾಂನ ಪ್ರಮುಖ ಕಾರ್ಯದರ್ಶಿಯ ಬಳಿ ಸಮಿತಿಯೊಂದನ್ನು ರಚಿಸಲು ಸೂಚಿಸಿದ್ದಾರೆ.
ಮಿಜೋರಾಂನ ನಾಗರಿಕರು ಎಸ್ ಬಿ ಶಶಾಂಕ್ರನ್ನು ಅಧಿಕಾರದಿಂದ ಕೆಳಗಿಳಿಸುವುದರೊಂದಿಗೆ, ತ್ರಿಪುರಾದಲ್ಲಿ ಶರಣಾಗತಿಯಾಗಿರುವ ಬ್ರೂ ಸಮುದಾಯದ ಜನರಿಗೆ ಮಿಜೋರಾಂ ಗಡಿ ಭಾಗದಲ್ಲಿ ಮತದಾನ ನಡೆಸಲು ಅವಕಾಶ ನೀಡುವಂತೆ ಆಯೋಗಕ್ಕೆ ಮನವಿ ಮಾಡಿದ್ದರು. ಇದೀಗ ಚುನಾವಣಾ ಆಯೋಗವು ಇವರ ಎರಡೂ ಬೇಡಿಕೆಗಳನ್ನು ಈಡೇರಿಸಲು ಸ್ವೀಕರಿಸಿದೆ.
ಅಧಿಕಾರಿಯನ್ನು ತೆಗೆದು ಹಾಕಿ ಎನ್ನಲು ಕಾರಣವೇನು?
ಅಸ್ತಿತ್ವದಲ್ಲಿರುವ ಆಯೋಗವು ರಾಜ್ಯದ ಮುಖ್ಯ ಕಾರ್ಯದರ್ಶಿ ಲಲನುಲ್ಮಾವಿಯಾ ಚುವಾಂಗ್ವೋರನ್ನು ಅಮಾನತ್ತುಗೊಳಿಸಿತ್ತು. ಇದಾಧ ಬಳಿಕ ಎನ್ಜಿಒ ಕಮಿಟಿಯು ಶಶಾಂಕ್ರನ್ನು ಕೆಳಗಿಳಿಸುವಂತೆ ಧ್ವನಿ ಎತ್ತಿತ್ತು. ಚುವಾಂಗ್ವೋ ಚುನಾವಣಾ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಶಶಾಂಕ್ರವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೆಂಬುವುದು ಕೆಲವರ ಆರೋಪವಾಗಿದೆ. ಅತ್ತ ಮಿಜೋರಾಂ ಮುಖ್ಯಮಂತ್ರಿ ಲಲಥನ್ ಹವ್ಲಾ ಕೂಡಾ ಪ್ರಧಾನಿ ಮೋದಿಗೆ ಪತ್ರ ಬರೆದು 'ಜನರು ಮುಖ್ಯ ಚುನಾವಣಾ ಅಧಿಕಾರಿ ಎಸ್ ಬಿ ಶಶಾಂಕ್ ಮೇಲಿರುವ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಹೀಗಿರುವಾಗ 2018ರ ಚುನಾವಣೆ ಸರಾಗವಾಗಿ ನಡೆಯಬೇಕಾದರೆ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದೇ ಉತ್ತಮ' ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ