ವೃದ್ಧರ ಸಂಖ್ಯೆ ಏರಿಕೆ : ಆರ್ಥಿಕ ಸಮೀಕ್ಷೆ ಕಳವಳ

By Web DeskFirst Published Jul 5, 2019, 8:11 AM IST
Highlights

ವೃದ್ಧರ ಸಂಖ್ಯೆಯನ್ನು ಎದುರಿಸಲು ದೇಶ ಸಜ್ಜಾಗಬೇಕು ಎಂದು ದೇಶದ ಆರ್ಥಿಕಾಭಿವೃದ್ಧಿಯ ಮುನ್ನೋಟ ಎಂದೇ ಕರೆಯಲಾಗುವ ಆರ್ಥಿಕ ಸಮೀಕ್ಷಾ ವರದಿ ಯಲ್ಲಿ ಎಚ್ಚರಿಕೆ ನೀಡಲಾಗಿದೆ.

ನವದೆಹಲಿ (ಜು.05): ದೇಶದಲ್ಲಿ ಯುವಕರ ಸಂಖ್ಯೆ ಕುಸಿಯಲಿದ್ದು, ವೃದ್ಧರ ಸಂಖ್ಯೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಸದ್ಯ 60 ವರ್ಷದಷ್ಟಿರುವ ನಿವೃತ್ತಿ ವಯಸ್ಸನ್ನು ಹಂತ ಹಂತವಾಗಿ ಏರಿಕೆ ಮಾಡಬೇಕು. 

ವೃದ್ಧರ ಸಂಖ್ಯೆಯನ್ನು ಎದುರಿಸಲು ದೇಶ ಸಜ್ಜಾಗಬೇಕು ಎಂದು ದೇಶದ ಆರ್ಥಿಕಾಭಿವೃದ್ಧಿಯ ಮುನ್ನೋಟ ಎಂದೇ ಕರೆಯಲಾಗುವ ಆರ್ಥಿಕ ಸಮೀಕ್ಷಾ ವರದಿ ಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಅತಿ ಹೆಚ್ಚು ತೆರಿಗೆ ಪಾವತಿಸುವ 10 ನಾಗರಿಕರನ್ನು ಪ್ರತಿ ಜಿಲ್ಲೆಗ ಳಲ್ಲೂ ಗುರುತಿಸಿ ಅವರಿಗೆ ರಾಜ ತಾಂತ್ರಿಕ ಶೈಲಿಯ ಸೌಲಭ್ಯಗಳನ್ನು ಕಲ್ಪಿಸಬೇಕು. ರಸ್ತೆ, ರೈಲು, ಕಟ್ಟಡ ಹಾಗೂ ಶಾಲೆ- ವಿಶ್ವವಿದ್ಯಾಲಯಗಳಿಗೆ ಅವರ ಹೆಸರನ್ನಿಡಬೇಕು ಎಂದೂ ಶಿಫಾರಸು ಮಾಡಲಾಗಿದೆ. ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ರಚಿಸಿರುವ ಆರ್ಥಿಕ ಸಮೀಕ್ಷೆ ವರದಿಯನ್ನು ಬಜೆಟ್ ಮುನ್ನಾ ದಿನವಾದ ಗುರುವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡನೆ ಮಾಡಿದರು. 

5 ವರ್ಷಗಳ ಕನಿಷ್ಠ ಮಟ್ಟಕ್ಕೆ ಜಾರಿರುವ ಆರ್ಥಿಕ ಪ್ರಗತಿ ದರ ಪುಟಿದೇಳಲಿದೆ. 2019 - 20 ನೇ ಸಾಲಿನಲ್ಲಿ ಶೇ. 7ರ ಜಿಡಿಪಿ ದರವನ್ನು ದೇಶ ಕಾಣಲಿದೆ. 2024 ರೊಳಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಭಾರತ ರೂಪುಗೊಳ್ಳಬೇಕವೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಗುರಿ ಈಡೇರಬೇಕೆಂದರೆ, ದೇಶ ಶೇ.೮ರ ಜಿಡಿಪಿ ದರದಲ್ಲಿ ಏಳ್ಗೆ ಹೊಂದಬೇಕೂ ಎಂದು ವಿವರಿಸಲಾಗಿದೆ.

ವೃದ್ಧರ ನಾಡಾಗುತ್ತಿದೆ ಭಾರತ: ಮಾನವರ ಜೀವಿತಾವಧಿ ಏರಿಕೆ, ಸಂತಾನೋತ್ಪತ್ತಿ ಪ್ರಮಾಣ ಕುಸಿದ ಹಿನ್ನೆಲೆಯಲ್ಲಿ 2031 -2041 ರ ಅವಧಿಯಲ್ಲಿ ಭಾರತದ ಜನಸಂಖ್ಯೆ ಶೇ.೦.5 ರಷ್ಟು ಮಾತ್ರ ಏರಿಕೆ ಕಾಣಲಿದೆ. ವೃದ್ಧರ ಸಂಖ್ಯೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಸದ್ಯ 60 ವರ್ಷದಷ್ಟಿರುವ ನಿವೃತ್ತಿ ವಯಸ್ಸನ್ನು ಹೆಚ್ಚಳ ಮಾಡುವುದು ಅನಿವಾರ್ಯ. 

ಆ ಬದಲಾವಣೆಗೆ ಒಂದು ದಶಕದ ಮೊದಲೇ ಸಜ್ಜಾಗ ಬೇಕು. ಇದರಿಂದ ಪಿಂಚಣಿ ಹಾಗೂ ಇನ್ನಿತರೆ ನಿವೃತ್ತಿ ಸೌಲಭ್ಯಗಳ ಕುರಿತು ಯೋಜನೆ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಸಮೀಕ್ಷೆ ವಿವರಿಸಿದೆ. 0 - 19 ವರ್ಷದೊಳಗಿನವರ ಸಂಖ್ಯೆ ದೇಶದಲ್ಲಿ ಕುಸಿಯಲು ಪ್ರಾರಂಭಿಸಿದೆ. 2011 ರಲ್ಲಿ ಶೇ.೪೧ರಷ್ಟಿದ್ದ ಈ ವರ್ಗದವರ ಜನಸಂಖ್ಯೆ 2041 ರ ಹೊತ್ತಿಗೆ ಶೇ.25 ಕ್ಕೆ ಇಳಿಯಲಿದೆ.

ಇದೇ ವೇಳೆ, 60  ಹಾಗೂ ಅದಕ್ಕಿಂತ ಮೇಲ್ಪಟ್ಟವರ ಸಂಖ್ಯೆ ಗಮನಾರ್ಹವಾಗಿ ಏರುತ್ತಿದೆ. 2011 ರಲ್ಲಿ ಶೇ.8.6ರಷ್ಟಿದ್ದ ಈ ವರ್ಗದ ಜನಸಂಖ್ಯೆ 2041ರ ಹೊತ್ತಿಗೆ ಶೇ.25ಕ್ಕೆ  ಜಿಗಿಯಲಿದೆ. ಇದರಿಂದಾಗಿ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ ಕುಸಿಯಲಿದೆ. ಹೀಗಾಗಿ ವೃದ್ಧರನ್ನು ಎದುರಿಸಲು ಸಜ್ಜಾಗಬೇಕು ಎಂದು ತಿಳಿಸಿದೆ.

ತೆರಿಗೆದಾರರಿಗೆ ರಾಯಲ್ ಟ್ರೀಟ್‌ಮೆಂಟ್: ದೇಶದಅಭಿವೃದ್ಧಿಗೆ ತೆರಿಗೆ ಆದಾಯ ಭಾರಿ ಮಹತ್ವದ್ದಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ತೆರಿಗೆ ಪಾವತಿಸುವವರಿಗೆ ರಾಜತಾಂತ್ರಿಕ ಸೌಲಭ್ಯ ನೀಡಬೇಕು ಎಂದು ಆರ್ಥಿಕ ಸಮೀಕ್ಷೆಯಲ್ಲಿ ಶಿಫಾರಸು ಮಾಡಲಾಗಿದೆ. ಪ್ರತಿ ಜಿಲ್ಲೆಗಳಲ್ಲೂ ಅತಿ ಹೆಚ್ಚು ತೆರಿಗೆ ಪಾವತಿಸುವ 10 ಜನರನ್ನು ಗುರುತಿಸಬೇಕು. ವಿಮಾನಗಳನ್ನು ತ್ವರಿತವಾಗಿ ಏರುವ ಅವಕಾಶ, ರಸ್ತೆಗಳು ಹಾಗೂ ಟೋಲ್ ಬೂತ್‌ಗಳಲ್ಲಿ ತಡೆ ಇಲ್ಲದೆ ತೆರಳುವ ಸೌಕರ್ಯ, ವಿಮಾನ ನಿಲ್ದಾಣಗಳ ವಲಸೆ ವಿಭಾಗದಲ್ಲಿ ರಾಜತಾಂತ್ರಿಕರ ರೀತಿಯ ಮಾರ್ಗವನ್ನು ಅವರಿಗೆ ಕಲ್ಪಿಸಬೇಕು. 

ಒಂದು ದಶಕದ ಕಾಲ ಅತಿ ಹೆಚ್ಚು ತೆರಿಗೆ ಪಾವತಿಸಿದ ಜನರ ಹೆಸರನ್ನು ಪ್ರಮುಖ ಕಟ್ಟಡ, ಸ್ಮಾರಕ, ರಸ್ತೆ, ರೈಲು, ಯೋಜನೆ, ಶಾಲೆ, ಆಸ್ಪತ್ರೆ, ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಸಮೀಕ್ಷೆಯಲ್ಲಿ ಸಲಹೆ ಮಾಡ ಲಾಗಿದೆ. ದೇಶದ ಆರ್ಥಿಕ ಸಾಮರ್ಥ್ಯವನ್ನು 2024 - 25 ರೊಳಗೆ 5 ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸಬೇಕು ಎಂದು ಸಮೀಕ್ಷೆ ತಿಳಿಸಿದೆ. ಸದ್ಯ ಭಾರತ 2.7 ಟ್ರಿಲಿ ಯನ್ ಡಾಲರ್ ಆರ್ಥಿಕತೆ ಹೊಂದಿದ್ದು, ವಿಶ್ವದಲ್ಲಿ 6 ನೇ ಸ್ಥಾನದಲ್ಲಿದೆ. 

click me!