ತಮ್ಮವರ ಬಗ್ಗೆಯೇ ಅಸಮಾಧಾನ ಹೊರ ಹಾಕಿದ ಡಿಕೆಶಿ

By Web DeskFirst Published Aug 2, 2018, 9:31 AM IST
Highlights

ಯಾರು ಏನೇ ಮಾಡಲಿ ತಾವು ಪಕ್ಷಕ್ಕಾಗಿ ದುಡಿಯಲು ಸಿದ್ಧನಿದ್ದೇನೆ. ತಮ್ಮ ಬಗ್ಗೆ ಯಾವುದೇ ಭಾವನೆ ಇಟ್ಟುಕೊಂಡರೂ ತಲೆ ಕೆಡಿಸಿಕೊಳ್ಳುವುದಿಲ್ಲ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಬೆಂಗಳೂರು :  ಪಕ್ಷ ಸಂಘಟನೆಗಾಗಿ ಶಕ್ತಿ ಮೀರಿ ದುಡಿದಿದ್ದರಿಂದ ಐಟಿ ದಾಳಿ ಸೇರಿ ಹಲವು ಕಿರುಕುಳ ಅನುಭವಿಸುವಾಗ ಡಿ.ಕೆ. ಶಿವಕುಮಾರ್ ಇನ್ನೂ ಅನುಭವಿಸ ಬೇಕು ಎಂದು ಖುಷಿ ಪಟ್ಟವರೂ ಇದ್ದಾರೆ. ಈ ಬಗ್ಗೆ ತಮಗೆ ಗೊತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮಹಾನಗರ ಹಾಗೂ ಗ್ರಾಮಾಂತರ ಜಿಲ್ಲೆ ಯುವ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸ್ಪೂರ್ತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ನೇಮಕಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ತಮ್ಮನ್ನು ಎಷ್ಟಾದರೂ ಬಳಸಿಕೊಳ್ಳಬಹುದು. ಪಕ್ಷಕ್ಕಾಗಿ ಸಾಮಾನ್ಯ ಕಾರ್ಯಕರ್ತನಂತೆ ದುಡಿಯಲು ತಾವು ಸದಾ ಸಿದ್ಧ. ಈ ಹಿಂದೆಯೂ ಶಕ್ತಿ ಮೀರಿ ಪಕ್ಷವನ್ನು ಉಳಿಸಿ ಬೆಳೆಸಲು ಕೆಲಸ ಮಾಡಿದ್ದೇನೆ. ಇದರ ಪರಿಣಾಮವಾಗಿ ಏನೇನು ಹಿಂಸೆ ಅನುಭವಿಸಬೇಕಾಯಿತು ಎಂಬುದು ಕಾರ್ಯಕತರಿಗೂ ಗೊತ್ತಿದೆ. ಯಾರು ಏನೇ ಮಾಡಲಿ ತಾವು ಪಕ್ಷಕ್ಕಾಗಿ ದುಡಿಯಲು ಸಿದ್ಧನಿದ್ದೇನೆ. ತಮ್ಮ ಬಗ್ಗೆ ಯಾವುದೇ ಭಾವನೆ ಇಟ್ಟುಕೊಂಡರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಪಕ್ಷ ಕಟ್ಟುವ ಸಲುವಾಗಿ ಎಂತಹ ಸಂದರ್ಭದಲ್ಲೂ ಎಲ್ಲ ರೀತಿಯ ಸಹಕಾರ ಕೊಡಲು ಸಿದ್ಧನಿದ್ದೇನೆ ಎಂದರು. ಭಿನ್ನಮತ ಸುದ್ದಿಗೆ ತೇಪೆ: ಈ ನಡುವೆ, ಕಾಂಗ್ರೆಸ್ಸಿನ ಸ್ಫೂರ್ತಿ ಸಮಾವೇಶದಲ್ಲಿ ಭಾಗವಹಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಡಿ.ಕೆ.ಶಿವಕುಮಾರ್ ಸನ್ಮಾನ ಮಾಡುವ ಮೂಲಕ ಭಿನ್ನಮತದ ಆರೋಪಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. 

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ದಿನೇಶ್ ನೇಮಕಗೊಂಡ ಬಳಿಕ ಡಿಕೆಶಿಗೆ ಅಸಮಾಧಾನ ಉಂಟಾಗಿದೆ ಎಂದು ಚರ್ಚೆಯಾಗಿತ್ತು. ಈ ಕಾರಣಕ್ಕೆ ದಿನೇಶ್ ಅವರ ಯಾವ ಕಾರ್ಯಕ್ರಮಕ್ಕೂ ಶಿವಕುಮಾರ್ ಬಣ ಸಾಥ್ ನೀಡುತ್ತಿಲ್ಲ ಎನ್ನಲಾಗಿತ್ತು.

click me!