
ನವದೆಹಲಿ(ಮೇ 16): ವಿಶ್ವಾದ್ಯಂತ ಕಂಪ್ಯೂಟರ್'ಗಳು ಅಭದ್ರತೆಗೆ ಸಿಲುಕಬಹುದೆಂದು ಅಮೆರಿಕ 3 ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿತ್ತಾ? ಈಗ ಬಂದಿರುವ ಸುದ್ದಿಯ ಪ್ರಕಾರ ಮೈಕ್ರೋಸಾಫ್ಟ್ ವಿಂಡೋಸ್ ತಂತ್ರಾಂಶದಲ್ಲಿ ಲೋಪದೋಷ ಇರುವುದನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯು ಗುರುತಿಸಿತ್ತು. ಅದನ್ನು ಮೈಕ್ರೋಸಾಫ್ಟ್ ಸಂಸ್ಥೆಯ ಗಮನಕ್ಕೂ ತರಲಾಗಿತ್ತು. ಮೈಕ್ರೋಸಾಫ್ಟ್ ತತ್'ಕ್ಷಣವೇ ಕಾರ್ಯಪ್ರವೃತ್ತಗೊಂಡು ಸೆಕ್ಯೂರಿಟಿ ಅಪ್'ಡೇಟ್ ಮಾಡಿ ಮಾರ್ಚ್ ತಿಂಗಳಲ್ಲಿ ರಿಲೀಸ್ ಮಾಡಿತ್ತು. ಆದರೆ, ಭಾರತವೂ ಒಳಗೊಂಡಂತೆ ವಿಶ್ವದ ಬಹಳಷ್ಟು ರಾಷ್ಟ್ರಗಳು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದೀಗ, ಹ್ಯಾಕರ್'ಗಳು ವಿಶ್ವದ 2 ಲಕ್ಷಕ್ಕೂ ಹೆಚ್ಚು ಕಂಪ್ಯೂಟರ್'ಗಳಿಗೆ ರ್ಯಾನ್ಸಮ್'ವೇರ್ ವೈರಸ್ ರಿಲೀಸ್ ಮಾಡಿ ಹ್ಯಾಕ್ ಮಾಡಿದ್ದಾರೆ.
ಭಾರತದ ಬಹುತೇಕ ಎಟಿಎಂಗಳು ವಿಂಡೋಸ್ ಎಕ್ಸ್'ಪಿ ಆವೃತ್ತಿಯ ತಂತ್ರಾಂಶವನ್ನೇ ಈಗಲೂ ಉಪಯೋಗಿಸುತ್ತಿವೆ. ವಿಂಡೋಸ್'ನ ಹೊಸ ಸೆಕ್ಯೂರಿಟಿ ಅಪ್'ಡೇಟ್'ಗಳನ್ನೂ ಈ ಎಟಿಎಂಗಳಲ್ಲಿ ಅಳವಡಿಸಲಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಈ ಎಟಿಎಂಗಳಲ್ಲಿ ಸೆಕ್ಯೂರಿಟಿ ಅಪ್'ಡೇಟ್ ಆಗಬೇಕೆಂದು ಎಲ್ಲಾ ಬ್ಯಾಂಕುಗಳಿಗೆ ಕಟ್ಟಪ್ಪಣೆ ಹೊರಡಿಸಿದೆ. ಅಲ್ಲಿಯವರೆಗೆ ಈ ಎಟಿಎಂಗಳು ಬಾಗಿಲು ಮುಚ್ಚುವ ಸಾಧ್ಯತೆ ಇದೆ. ನೋಟ್ ಬ್ಯಾನ್ ನಂತರ ಹಲವು ತಿಂಗಳು ಎಟಿಎಂ ಅಲಭ್ಯತೆಯ ಸಂಕಷ್ಟ ಎದುರಿಸಿದ್ದ ಜನಸಾಮಾನ್ಯರು ಈಗ ಸರಕಾರ ಮತ್ತು ಬ್ಯಾಂಕುಗಳ ನಿರ್ಲಕ್ಷ್ಯತೆಯಿಂದಾಗಿ ಮತ್ತೊಮ್ಮೆ ಕಷ್ಟ ಎದುರಿಸಬೇಕಾಗಿದೆ.
ಇದೇ ವೇಳೆ, ವಿಶ್ವಾದ್ಯಂತ ಕಂಪ್ಯೂಟರ್'ಗಳ ಹ್ಯಾಕ್ ಮಾಡಿರುವ ಘಟನೆಯನ್ನು ಮೈಕ್ರೋಸಾಫ್ಟ್ ಎಚ್ಚರಿಕೆ ಕರೆಗಂಟೆ ಎಂದು ಕರೆದಿದೆ. ತಮ್ಮ ಸಂಸ್ಥೆಯನ್ನೂ ಒಳಗೊಂಡಂತೆ, ಗ್ರಾಹಕರು ಮತ್ತು ಸರಕಾರಗಳು ಈ ಬೆಳವಣಿಗೆಗೆ ಹೊಣೆಯಾಗಿದ್ದಾರೆ ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಮುಖ್ಯ ಕಾನೂನು ಅಧಿಕಾರಿ ಬ್ರಾಡ್ ಸ್ಮಿತ್ ತಮ್ಮ ಬ್ಲಾಗ್'ನಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.