
ಚೆನ್ನೈ(ಜೂನ್ 11): ದಿವಂಗತ ಜೆ.ಜಯಲಲಿತಾ ಅವರ ಪೋಯೆಸ್ ಗಾರ್ಡನ್'ನಲ್ಲಿರುವ ನಿವಾಸದಲ್ಲಿ ಇಂದು ಮಧ್ಯಾಹ್ನ ಸ್ವಲ್ಪ ಹೊತ್ತು ಹೈಡ್ರಾಮಾ ನಡೆದಿದೆ. ಜಯಲಲಿತಾ ಅವರ ನಿವಾಸವನ್ನು ಪ್ರವೇಶಿಸಲು ಯತ್ನಿಸಿದ ದೀಪಾ ಜಯಕುಮಾರ್ ಅವರನ್ನು ಶಶಿಕಲಾ ಬೆಂಬಲಿಗರು ತಡೆದ ಘಟನೆ ವರದಿಯಾಗಿದೆ. ಟಿಟಿವಿ ದಿನಕರನ್ ಹಾಗೂ ಸಂಗಡಿಗರು ದೀಪಾ ಜಯಕುಮಾರ್ ಅವರನ್ನು ಮನೆಯ ಒಳಗೆ ಬರದಂತೆ ತಡೆಹಿಡಿದಿದ್ದಾರೆ. ಜಯಲಲಿತಾ ಅವರ ಸೋದರನ ಮಗಳಾದ ದೀಪಾ ಜಯಕುಮಾರ್ ಅವರ ಜೊತೆ ಬಂದಿದ್ದ ಕ್ಯಾಮೆರಾಮ್ಯಾನ್'ವೊಬ್ಬರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಎಂಜಿಆರ್ ಅಮ್ಮಾ ದೀಪಾ ಪೆರವೈ ಎಂಬ ಹೊಸ ಪಕ್ಷ ಕಟ್ಟಿರುವ ದೀಪಾ ಜಯಕುಮಾರ್ ತಮ್ಮ ಬೆಂಬಲಿಗರೊಂದಿಗೆ ವೇದ ನಿಲಯಂ ಎದುರು ಪ್ರತಿಭಟನೆ ಕೂಡ ಮಾಡಿದರು.
ಸೋದರತ್ತೆ ಜಯಲಲಿತಾ ಅವರ ಕಾರ್ಯ ಮಾಡಲು ಮನೆಗೆ ಬರುವಂತೆ ಸೋದರ ದೀಪಕ್ ಅವರ ಆಹ್ವಾನದ ಮೇರೆಗೆ ತಾನು ಇಲ್ಲಿಗೆ ಬಂದಿದ್ದಾಗಿ ದೀಪಾ ಜಯಕುಮಾರ್ ಹೇಳಿದ್ದಾರೆ. ಶಶಿಕಲಾ ಬೆಂಬಲಿಗರು ಮನೆಗೆ ದೀಪಾ ಪ್ರವೇಶಿಸುವುದನ್ನು ತಡೆದು ಗಲಾಟೆ ಮಾಡುವ ವೇಳೆ ಸೋದರ ದೀಪಕ್ ಮನೆಯೊಳಗೆಯೇ ಇದ್ದದ್ದು ಖಚಿತಪಟ್ಟಿದೆ. ತನ್ನ ಸೋದರ ಅಚೆ ಬರುವವರೆಗೂ ತಾನು ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ದೀಪಾ ಹೇಳಿದ್ದಾರೆ.
ಮತ್ತೊಂದು ವರದಿ ಪ್ರಕಾರ, ತನ್ನ ಸೋದರ ದೀಪಕ್ ದುರುದ್ದೇಶಪೂರ್ವಕವಾಗಿ ತನ್ನನ್ನು ಇಲ್ಲಿಗೆ ಆಹ್ವಾನಿಸಿ ಈ ಹೈಡ್ರಾಮಾ ಸೃಷ್ಟಿಸಿದ್ದಾನೆ ಎಂದು ದೀಪಾ ಜಯಕುಮಾರ್ ಆರೋಪಿಸಿದ್ದಾರೆನ್ನಲಾಗಿದೆ. ಅತ್ತೆ ಜಯಲಲಿತಾ ಅವರ ಸಾವಿಗೆ ಶಶಿಕಲಾ ಜೊತೆ ತನ್ನ ಸೋದರ ದೀಪಕ್ ಕೂಡ ಕೈಜೋಡಿಸಿದ್ದಾನೆ ಎಂದೂ ದೀಪಾ ಆರೋಪಿಸಿರುವುದು ಎನ್'ಡಿಟಿವಿಯಲ್ಲಿ ವರದಿಯಾಗಿದೆ.
"ಜಯಲಲಿತಾ ಅವರು ಆತನಿಗೆ ತಾಯಿಗೆ ಸಮಾನವಾಗಿದ್ದರು. ಆದರೆ, ಶಶಿಕಲಾ ಜೊತೆ ಸೇರಿ ಸಂಚು ರೂಪಿಸಿ ದುಡ್ಡಿಗೋಸ್ಕರ ಅತ್ತೆಯನ್ನು ಸಾಯಿಸಿದ್ದಾನೆ," ಎಂಬುದು ದೀಪಾ ಜಯಕುಮಾರ್ ಆರೋಪ.
ದೀಪಾ ಜಯಕುಮಾರ್ ಹುಟ್ಟಿ ಬೆಳೆದದ್ದೆಲ್ಲಾ ಪೋಯೆಸ್ ಗಾರ್ಡನ್'ನಲ್ಲಿರುವ ವೇದ ನಿಲಯಂ ಮನೆಯಲ್ಲೇ. ಚೆನ್ನೈನಲ್ಲೇ ಓದಿದ ದೀಪಾ ಅವರು ವೇಲ್ಸ್'ನ ಕಾರ್ಡಿಫ್ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮದಲ್ಲಿ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜಯಲಲಿತಾ ಸಾವಿಗೆ ಶಶಿಕಲಾ ಅಂಡ್ ಗ್ಯಾಂಗ್ ಕಾರಣ ಎಂಬುದು ದೀಪಾ ಜಯಕುಮಾರ್ ಅವರ ಪ್ರಬಲ ಆರೋಪ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.