
ದಾವಣಗೆರೆ: ಬರಗಾಲ ತಾಂಡವವಾಡುತ್ತಿದ್ದಾಗ ಉದ್ಯೋಗಖಾತ್ರಿ ಯೋಜನೆಯಲ್ಲಿ ಸಹಸ್ರಾರು ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದ ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಓ ಇದೀಗ ಮತ್ತೊಂದು ಮೈಲಿಗಲ್ಲು ದಾಟಲು ಮುಂದಾಗಿದ್ದಾರೆ. ದಾವಣಗೆರೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಪಣತೊಟ್ಟು ರಾತ್ರಿ ಹಗಲು ಕೆಲಸ ಮಾಡುತ್ತಿದ್ದಾರೆ. ಬೆಳಗಾಯಿತೆಂದರೆ ಒಂದಲ್ಲ ಒಂದು ಹಳ್ಳಿಯಲ್ಲಿ ಸಿಇಓ ಎಸ್.ಅಶ್ವತಿ ತಮ್ಮ ತಂಡದೊಂದಿಗೆ ಹಾಜರಿರುತ್ತಾರೆ. ಹೀಗೆ ಚನ್ನಗಿರಿ ತಾಲ್ಲೂಕು ದೇವರಹಳ್ಳಿಗೆ ಭೇಟಿ ನೀಡಿದಾಗ ನಿವೇಶನ ಸಮಸ್ಯೆ ಬಗೆಹರಿಸಲು ಅವರೇ ಸಲಿಕೆ ಹಿಡಿದು ಗುಂಡಿ ತೆಗೆಯಲು ಮುಂದಾದ ಘಟನೆಯೂ ನಡೆಯಿತು.
ದೇವರಹಳ್ಳಿಯಲ್ಲಿ ನಡೆದದ್ದೇನು?
ದೇವರಹಳ್ಳಿ ಗ್ರಾಮದ ಬೈರಪ್ಪನ ಕುಟುಂಬಕ್ಕೂ ಹಾಗೂ ಪಕ್ಕದಲ್ಲಿ ವಾಸವಿದ್ದ ಇನ್ನೊಂದು ಕುಟುಂಬಕ್ಕೂ ಖಾಲಿನಿವೇಶನದ ಮಣ್ಣಿನ ವಿಚಾರವಾಗಿ ವೈಮನಸ್ಸಿತ್ತು. ಈ ವೇಳೆ ಬೈರಪ್ಪನ ಕುಟುಂಬದವರು ನಮಗೆ ಶೌಚಾಲಯ ಕಟ್ಟಿಸಿಕೊಳ್ಳಲು ಇಷ್ಟವಿದೆ. ಆದ್ರೆ ನಿವೇಶನದ ಮಣ್ಣು ತೆಗೆಸಿಕೊಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು. ತತ್'ಕ್ಷಣ ತಮ್ಮ ಪಿಡಿಓಗಳ ಪಡೆಗೆ ಆದೇಶ ನೀಡಿದ ಸಿಇಓ ಅಶ್ವತಿ ತಾವೇ ಸಲಿಕೆ ಹಿಡಿದು ಕಾಮಗಾರಿಗೆ ಚಾಲನೆ ನೀಡಿದರು. ಸುತ್ತಮುತ್ತಲಿದ್ದ ಅಧಿಕಾರಿಗಳು "ಮೇಡಮ್ ಸಲಿಕೆ ನಮ್ಮ ಕಡೆ ಕೊಡಿ" ಎಂದರೂ ಕೊಡದೇ 5 ನಿಮಿಷಗಳ ಕಾಲ ಮಣ್ಣು ಕೊಚ್ಚಿ ಮೇಲೆ ಹಾಕಿದರು.
ಸೀಮಂತದ ಅಸ್ತ್ರ:
ಆಕ್ಟೋಬರ್ 2 ರೊಳಗೆ ದಾವಣಗೆರೆ ಜಿಲ್ಲೆಯನ್ನು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪಣತೊಟ್ಟಿರುವ ಸಿಇಓ ಶೇ 80 ರಷ್ಟು ಶೌಚಾಲಯ ನಿರ್ಮಾಣವಾಗಲು ಕಾರಣವಾಗಿದ್ದಾರೆ. ಈ ಸಾಧನೆಯನ್ನು ಮಾಡಲು ಸಿಇಓ ಆಯ್ಕೆ ಮಾಡಿದ ಒಂದೊಂದು ಕಾರ್ಯಕ್ರಮವು ಶ್ಲಾಘನೆಗೆ ಪಾತ್ರವಾಗಿದೆ. ಶೌಚಾಲಯ ಕಟ್ಟಿಸಿಕೊಂಡ ಮನೆಯ ಗರ್ಭಿಣಿ ಬಾಣಂತಿಯರಿಗೆ ಸೀಮಂತ ಕಾರ್ಯ ಮಾಡುವ ಮೂಲಕ ಸಾರ್ವಜನಿಕರ ಮನಗೆದ್ದ ಸಿಇಓ, ಒಬ್ಬ ಅಧಿಕಾರಿ ಹೇಗೆ ಜನಸ್ನೇಹಿಯಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಟ್ಟಿಸಿಕೊಂಡ ಶೌಚಾಲಯದ ಬಳಕೆಗೆ ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಂಡಿರುವ ಸಿಇಓ ಮುಂಜಾನೆ ಹಳ್ಳಿಗಳ ಗ್ರಾಮ ವಾಸ್ತವ್ಯಕ್ಕೂ ಸಜ್ಜಾಗಿದ್ದಾರೆ.
ವರದಿ: ವರದರಾಜ್, ಸುವರ್ಣನ್ಯೂಸ್, ದಾವಣಗೆರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.