ದಾವಣಗೆರೆಯಲ್ಲಿ 'ಸಲಿಕೆ' ಓಬ್ಬವ್ವ..? ಜಿ.ಪಂ. ಸಿಇಒ ಅಶ್ವತಿ ಕ್ರಾಂತಿ; ಸರಿದಾರಿಗೆ ಬಂದ ಗ್ರಾಮಸ್ಥರು

By Suvarna Web DeskFirst Published Aug 30, 2017, 12:33 PM IST
Highlights

ಸಾಮಾನ್ಯವಾಗಿ ಉನ್ನತ ಹುದ್ದೆಯಲ್ಲಿರುವ ಎಂತಹ ಸಣ್ಣ ಕೆಲಸವಾದರೂ ಅಧಿಕಾರಿಗಳಿಗೆ ಹೇಳಿ ಮಾಡಿಸೋದೆ ಜಾಸ್ತಿ. ಅದರಲ್ಲೂ ಸಾರ್ವಜನಿಕ ಕೆಲಸ ಅಂದ್ರೆ ಕೈಯಲ್ಲಿ ಮುಟ್ಟೋದಿರಲಿ ಸ್ಥಳಕ್ಕೆ ಹೋಗದೇ ಕಡತಗಳಿಗೆ ಸಹಿ ಹಾಕಿ ಜೈ ಅನ್ನುತ್ತಾರೆ. ಅಂತಹದ್ದರಲ್ಲಿ ದಾವಣಗೆರೆ ಜಿ ಪಂ ಸಿ ಇಓ ತಾವೇ ಕೂಲಿ ಕಾರ್ಮಿಕರಾಗಿ ಕೆಲಸ  ಮಾಡಿದ್ದಾರೆ. ಫಲಾನುಭವಿಯೊಬ್ಬರ ಶೌಚಾಲಯದ ಗುಂಡಿಗೆ ತಾವೇ ಗುನ್ನ ಹಾಕಿ ಸಲಿಕೆ ಹಿಡಿದು ಮಣ್ಣು ತೆಗೆಯುವ ಮೂಲಕ ನೀವು ಶೌಚಾಲಯ ನಿರ್ಮಿಸಿಕೊಳ್ಳಬೇಕೆಂದು ತಾಕೀತು ಮಾಡಿದ್ದಾರೆ.

ದಾವಣಗೆರೆ: ಬರಗಾಲ ತಾಂಡವವಾಡುತ್ತಿದ್ದಾಗ ಉದ್ಯೋಗಖಾತ್ರಿ ಯೋಜನೆಯಲ್ಲಿ ಸಹಸ್ರಾರು ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದ ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಓ ಇದೀಗ ಮತ್ತೊಂದು ಮೈಲಿಗಲ್ಲು ದಾಟಲು ಮುಂದಾಗಿದ್ದಾರೆ. ದಾವಣಗೆರೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಪಣತೊಟ್ಟು ರಾತ್ರಿ ಹಗಲು ಕೆಲಸ ಮಾಡುತ್ತಿದ್ದಾರೆ. ಬೆಳಗಾಯಿತೆಂದರೆ ಒಂದಲ್ಲ ಒಂದು ಹಳ್ಳಿಯಲ್ಲಿ ಸಿಇಓ ಎಸ್.ಅಶ್ವತಿ ತಮ್ಮ ತಂಡದೊಂದಿಗೆ ಹಾಜರಿರುತ್ತಾರೆ. ಹೀಗೆ ಚನ್ನಗಿರಿ ತಾಲ್ಲೂಕು ದೇವರಹಳ್ಳಿಗೆ ಭೇಟಿ ನೀಡಿದಾಗ ನಿವೇಶನ ಸಮಸ್ಯೆ ಬಗೆಹರಿಸಲು ಅವರೇ ಸಲಿಕೆ ಹಿಡಿದು ಗುಂಡಿ ತೆಗೆಯಲು ಮುಂದಾದ ಘಟನೆಯೂ ನಡೆಯಿತು.

ದೇವರಹಳ್ಳಿಯಲ್ಲಿ ನಡೆದದ್ದೇನು?
ದೇವರಹಳ್ಳಿ ಗ್ರಾಮದ ಬೈರಪ್ಪನ ಕುಟುಂಬಕ್ಕೂ ಹಾಗೂ ಪಕ್ಕದಲ್ಲಿ ವಾಸವಿದ್ದ ಇನ್ನೊಂದು ಕುಟುಂಬಕ್ಕೂ ಖಾಲಿನಿವೇಶನದ ಮಣ್ಣಿನ ವಿಚಾರವಾಗಿ ವೈಮನಸ್ಸಿತ್ತು. ಈ ವೇಳೆ ಬೈರಪ್ಪನ ಕುಟುಂಬದವರು ನಮಗೆ ಶೌಚಾಲಯ ಕಟ್ಟಿಸಿಕೊಳ್ಳಲು ಇಷ್ಟವಿದೆ. ಆದ್ರೆ ನಿವೇಶನದ ಮಣ್ಣು ತೆಗೆಸಿಕೊಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು. ತತ್'ಕ್ಷಣ ತಮ್ಮ ಪಿಡಿಓಗಳ ಪಡೆಗೆ ಆದೇಶ ನೀಡಿದ ಸಿಇಓ ಅಶ್ವತಿ ತಾವೇ ಸಲಿಕೆ ಹಿಡಿದು ಕಾಮಗಾರಿಗೆ ಚಾಲನೆ ನೀಡಿದರು. ಸುತ್ತಮುತ್ತಲಿದ್ದ ಅಧಿಕಾರಿಗಳು "ಮೇಡಮ್ ಸಲಿಕೆ ನಮ್ಮ ಕಡೆ ಕೊಡಿ" ಎಂದರೂ ಕೊಡದೇ 5 ನಿಮಿಷಗಳ ಕಾಲ ಮಣ್ಣು ಕೊಚ್ಚಿ ಮೇಲೆ ಹಾಕಿದರು.

ಸೀಮಂತದ ಅಸ್ತ್ರ:
ಆಕ್ಟೋಬರ್ 2 ರೊಳಗೆ ದಾವಣಗೆರೆ ಜಿಲ್ಲೆಯನ್ನು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪಣತೊಟ್ಟಿರುವ ಸಿಇಓ ಶೇ 80 ರಷ್ಟು ಶೌಚಾಲಯ ನಿರ್ಮಾಣವಾಗಲು ಕಾರಣವಾಗಿದ್ದಾರೆ. ಈ ಸಾಧನೆಯನ್ನು ಮಾಡಲು ಸಿಇಓ ಆಯ್ಕೆ ಮಾಡಿದ ಒಂದೊಂದು ಕಾರ್ಯಕ್ರಮವು ಶ್ಲಾಘನೆಗೆ ಪಾತ್ರವಾಗಿದೆ. ಶೌಚಾಲಯ ಕಟ್ಟಿಸಿಕೊಂಡ ಮನೆಯ ಗರ್ಭಿಣಿ ಬಾಣಂತಿಯರಿಗೆ ಸೀಮಂತ ಕಾರ್ಯ ಮಾಡುವ ಮೂಲಕ ಸಾರ್ವಜನಿಕರ ಮನಗೆದ್ದ ಸಿಇಓ, ಒಬ್ಬ ಅಧಿಕಾರಿ ಹೇಗೆ ಜನಸ್ನೇಹಿಯಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಟ್ಟಿಸಿಕೊಂಡ ಶೌಚಾಲಯದ ಬಳಕೆಗೆ ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಂಡಿರುವ ಸಿಇಓ ಮುಂಜಾನೆ ಹಳ್ಳಿಗಳ ಗ್ರಾಮ ವಾಸ್ತವ್ಯಕ್ಕೂ ಸಜ್ಜಾಗಿದ್ದಾರೆ.

ವರದಿ: ವರದರಾಜ್, ಸುವರ್ಣನ್ಯೂಸ್, ದಾವಣಗೆರೆ

click me!