
ರಾಮನಗರ: ಜಿಲ್ಲೆಯಲ್ಲಿ ಯಾವ ಭಾಗದಲ್ಲಿಯೂ ಕಸಾಯಿಖಾನೆ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ನಗರದ ಮುಖ್ಯರಸ್ತೆಯಲ್ಲಿ ವಿದ್ಯಾಗಣಪತಿ ಸೇವಾ ಸಂಘದ 50ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಧಾರ್ಮಿಕ ಪ್ರವಚನದಲ್ಲಿ ಅವರು ಮಾತನಾಡಿದರು.
ಗೋವಧಾ ಕೇಂದ್ರ ಜಿಲ್ಲೆಗೆ ಭೂಷಣ ಕೊಡುವ ಆಭರಣವಲ್ಲ, ಅದೊಂದು ಕಳಂಕ. ಗೋವಧೆ ದೇಶದ ದೊಡ್ಡ ವಿಘ್ನ. ಇದೇ ಕಾರಣಕ್ಕೆ ದೇಶದ ಅಭಿವೃದ್ಧಿಯ ವೇಗ ಪಡೆಯುತ್ತಿಲ್ಲ. ಸಮೃದ್ಧಿ, ಶಾಂತಿಯೂ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಹೋರಾಟ: ಕನಕಪುರ ತಾಲೂಕು ಹಾರೋಹಳ್ಳಿ ಕೈಗಾರಿಕಾ ಕ್ಷೇತ್ರದಲ್ಲಿ ಬಿಬಿಎಂಪಿ ಸ್ಥಾಪಿಸಲು ಉದ್ದೇಶಿಸಿರುವ ಕಸಾಯಿಖಾನೆಗೆ ಸ್ಥಳೀಯರ ವಿರೋಧವಿದೆ. ಕಸಾಯಿಖಾನೆ ಸ್ಥಾಪನೆ ಮಾಡಲ್ಲವೆಂದು ಸರ್ಕಾರವಾಗಲಿ, ಬಿಬಿಎಂಪಿಯಾಗಲಿ ಲಿಖಿತ ಹೇಳಿಕೆ ನೀಡದಿದ್ದರೆ ಮತ್ತೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಗೋವಧಾ ಕೇಂದ್ರಗಳಲ್ಲಿ ಗೋವುಗಳ ಆಕ್ರಂದನ ದೇಶಕ್ಕೆ ಶಾಪವಾಗುತ್ತಿದೆ. ಗೋವಧಾ ನಿಷೇಧಕ್ಕೆ ನಾಗರೀಕರು ತಮ್ಮ ಹಕ್ಕೊತ್ತಾಯ ಮಂಡಿಸಬೇಕು ಎಂದು ಶ್ರೀಗಳು ಕರೆ ನೀಡಿದರು. ಇದೇ ವೇಳೆ ಅವರು ಗೋವಧೆ ವಿರೋಧಿಸುವ ಪ್ರತಿಜ್ಞಾವಿಧಿಯನ್ನು ನಾಗರಿಕರಿಗೆ ಬೋಧಿಸಿದರು. ಗೋವಧೆ ನಿಷೇಧ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನೆರೆವೇರಿದ್ದ ಸಹಿ ಸಂಗ್ರಹಣೆ ಅಭಿಯಾನದ ಮನವಿ ಪತ್ರಗಳನ್ನು ಗೋ ಕಿಂಕರರು, ಸ್ವಾಮೀಜಿ ಅವರಿಗೆ ನೀಡಿದರು. ಬಿಡದಿ ನಗರಸಭೆಯ ಸದಸ್ಯ ಮಹೀಪತಿ, ಗೋ ಪರಿವಾರ ರಾಜ್ಯ ಉಪಾದ್ಯಕ್ಷ ನಾಗರಾಜ್, ಶ್ರೀ ವಿದ್ಯಾಗಣಪತಿ ಸೇವಾ ಸಂಘದ ಎ.ಎಸ್.ಕೃಷ್ಣಮೂರ್ತಿ, ಪಿ.ಶಿವಾನಂದ, ವಿ.ನರಸಿಂಹ ರೆಡ್ಡಿ, ಜಿ.ವಿ. ಪದ್ಮನಾಭ, ಮಂಜು, ಜಯಕುಮಾರ್, ಬಲಮುರಿ ಗಣಪತಿ ದೇವಾಲಯದ ಅರ್ಚಕ ಗಣೇಶ್ ಭಟ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಚನ್ನಕೇಶವ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.