
ಶಿವಮೊಗ್ಗ(ಸೆ.27): ಬೇರೊಬ್ಬ ಯುವತಿಯನ್ನು ಮದುವೆಯಾಗಬೇಕೆಂಬ ಉದ್ದೇಶದಿಂದ ತನ್ನ ಪತ್ನಿಯ ಹತ್ಯೆಗೆ ಸುಪಾರಿ ನೀಡಿದ್ದ ಪೊಲೀಸ್ ಪೇದೆಯೊಬ್ಬ ಜೈಲು ಪಾಲಾಗಿರುವ ಘಟನೆ ಭದ್ರಾವತಿಯಲ್ಲಿ ನಡೆದಿದ್ದು, ಸುಪಾರಿ ಪಡೆದಿದ್ದ ಹಂತಕರ ತಂಡದಲ್ಲಿದ್ದವನೊಬ್ಬ ಪೊಲೀಸರ ಮುಂದೆ ಶರಣಾಗಿ ವಿಚಾರ ತಿಳಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಸುಪಾರಿ ಹಂತಕರ ಮಾನವೀಯತೆಯೇ ಈ ಪೊಲೀಸಪ್ಪನ ಬಂಧನಕ್ಕೆ ಕಾರಣವಾಗಿದ್ದು ಕೂಡ ವಿಶೇಷ ಸಂಗತಿಯಾಗಿದೆ.
ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ಮುಖ್ಯಪೇದೆ ರವೀಂದ್ರಗಿರಿ ಬಂಧಿತ ಆರೋಪಿ. ಈತನಿಗೆ 9 ವರ್ಷದ ಹಿಂದೆ ದಾವಣಗೆರೆ ಮೂಲದ ಅನಿತಾ ಎಂಬುವವರ ಜತೆ ಮದುವೆಯಾಗಿತ್ತು. ದಂಪತಿಗೆ ಮುದ್ದಾದ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಕಳೆದ ನಾಲ್ಕೈದು ವರ್ಷದಿಂದ ರವೀಂದ್ರಗಿರಿಗೆ ಮತ್ತೊಬ್ಬ ಯುವತಿ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದ. ಇದೇ ಕಾರಣಕ್ಕೆ ರವೀಂದ್ರಗಿರಿ ಮತ್ತು ಆತನ ಪತ್ನಿ ನಡುವೆ ಹಲವು ಬಾರಿ ಜಗಳ ಉಂಟಾಗಿತ್ತು ಎನ್ನಲಾಗಿದೆ.
ಆದರೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ರವೀಂದ್ರಗಿರಿ ತನ್ನನ್ನೇ ನಂಬಿ ಬಂದಿದ್ದ ಪತ್ನಿಯನ್ನೇ ಹತ್ಯೆ ಮಾಡಲು ಸಂಚು ರೂಪಿಸಿದ್ದ. ಅಷ್ಟೆಅಲ್ಲದೆ, ತನ್ನ ಹೆಂಡತಿಯನ್ನು ಹತ್ಯೆ ಮಾಡಲು ಶಿವಮೊಗ್ಗ ಮೂಲದ ಮೂವರು ಹಂತಕರಿಗೆ ಸುಮಾರು 5 ಲಕ್ಷ ರು.ಗೆ ಸುಪಾರಿ ನೀಡಿದ್ದ. ಅದರಂತೆ ಹಂತಕರು ಅನಿತಾ ಹತ್ಯೆಗೆ ತೆರಳಿದ್ದರಾದರು ಪ್ರಯತ್ನ ವಿಫಲವಾಗಿತ್ತು. ಈ ನಡುವೆ ಆಕೆಯ ಜೊತೆಯಲ್ಲಿ ಪುಟ್ಟಪುಟ್ಟಮಕ್ಕಳಿರುವುದು ಕಂಡು ಕನಿಕರಗೊಂಡ ಹಂತಕನೊಬ್ಬ ಮನಸ್ಸು ಬದಲಿಸಿದ್ದ. ಸುಪಾರಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದ. ಆದರೆ ಉಳಿದಿಬ್ಬರು ಅನಿತಾಳನ್ನು ಹತ್ಯೆ ಮಾಡಬಹುದೆಂಬ ಶಂಕೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆಯವರಿಗೆ ಸುದ್ದಿ ತಿಳಿಸಿ ಶರಣಾಗಿದ್ದ. ಅದರಂತೆ ಎಸ್ಪಿಯವರ ನಿರ್ದೇಶನದ ಮೇರೆಗೆ ರವೀಂದ್ರ ಗಿರಿಯನ್ನು ಭದ್ರಾವತಿ ಹೊಸಮನೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಪಾರಿ ಪಡೆದಿದ್ದ ಫೈರೋಜ್ ಖಾನ್, ಸಯ್ಯದ್ ಇರ್ಫಾನ್, ಸುಹೇಲ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.