ಸುಪ್ರೀಂನಿಂದ ಇಂದು ಮತ್ತೆ ಮೂರು ಮಹತ್ವದ ತೀರ್ಪು! ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗ ಹೌದೋ ಅಲ್ಲವೋ?! ಅಯೋಧ್ಯೆ ತೀರ್ಪಿನ ಮೇಲೆ ಪರಿಣಾಮ ಬೀರುತ್ತಾ ಇಂದಿನ ತೀರ್ಪು?! ವ್ಯಭಿಚಾರ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ಕೂಡ ಇಂದೇ
ನವದೆಹಲಿ(ಸೆ.27): ಬುಧವಾರ 4 ಮಹತ್ವದ ತೀರ್ಪುಗಳನ್ನು ಪ್ರಕಟಿಸಿರುವ ಸರ್ವೋಚ್ಚ ನ್ಯಾಯಾಲಯ ಇಂದು ಮತ್ತೆ ಮೂರು ಮಹತ್ವದ ತೀರ್ಪುಗಳನ್ನು ಪ್ರಕಟಿಸಲಿದೆ.
ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವೇ ಇಲ್ಲವೇ ಎಂಬುದನ್ನು ಕೋರ್ಟು ಈ ದಿನ ನಿರ್ಧರಿಸಲಿದೆ. ಧಾರ್ಮಿಕ ಕಾರಣಕ್ಕಾಗಿ ಅಯೋಧ್ಯೆ ಬಾಬ್ರಿ ಮಸೀದಿ ಜಾಗಕ್ಕೆ ಮುಸ್ಲಿಂ ಸಮುದಾಯ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಈ ತೀರ್ಪು ಮಹತ್ವ ಪಡೆದಿದೆ.
1994ರಲ್ಲಿ ನಮಾಜನ್ನು ಎಲ್ಲಾದರೂ ಮಾಡಬಹುದು. ಮಸೀದಿಯಲ್ಲೇ ಮಾಡಬೇಕಿಲ್ಲ. ನಮಾಜ್ಗಾಗಿ ಪ್ರತ್ಯೇಕ ಜಾಗವನ್ನು ಸರ್ಕಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ಮುಸ್ಲಿಂ ಸಂಘಟನೆಗಳು ಪ್ರಶ್ನಿಸಿವೆ.
ಕಾಕತಾಳೀಯವೆಂಬಂತೆ ಅಯೋಧ್ಯೆ ವಿವಾದವನ್ನು ವಿಸ್ತೃತ ನ್ಯಾಯಪೀಠದ ವಿಚಾರಣೆಗೆ ಒಪ್ಪಿಸಬೇಕೆ ಬೇಡವೇ ಎಂಬ ತೀರ್ಪನ್ನು ಕೂಡ ಸುಪ್ರೀಂ ಕೋರ್ಟ್ ಗುರುವಾರವೇ ಪ್ರಕಟಿಸಲಿದೆ. ಇನ್ನು ವ್ಯಭಿಚಾರವನ್ನು ಸಕ್ರಮಗೊಳಿಸಿರುವ ಸಂವಿಧಾನದ 497ನೇ ಪರಿಚ್ಛೇದದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ತೀರ್ಪು ಗುರುವಾರವೇ ಹೊರಬೀಳಲಿದೆ.