’ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಬೇಡಿ, ಕೊಟ್ಟರೆ ಹೋಳಾಗೋದು ನಿಶ್ಚಿತ’

Published : Jun 05, 2018, 12:10 PM ISTUpdated : Jun 05, 2018, 05:48 PM IST
’ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಬೇಡಿ, ಕೊಟ್ಟರೆ ಹೋಳಾಗೋದು ನಿಶ್ಚಿತ’

ಸಾರಾಂಶ

ವಿಧಾನಸಭೆಯಲ್ಲಿ ಯಡಿಯೂರಪ್ಪನವರನ್ನು ವಿಶ್ವಾಸಮತದಲ್ಲಿ  ಸೋಲಿಸಿ ಇನ್ನೇನು ತನ್ನದೇ ಕೈಯಲ್ಲಿ ಕಾಂಗ್ರೆಸ್‌ನ ಸಾಮ್ರಾಜ್ಯ ಎಂಬ ಸಂಭ್ರಮದಲ್ಲಿದ್ದ ಡಿ ಕೆ ಶಿವಕುಮಾರ್ ಅವರಿಗೆ ದೇವೇಗೌಡರ ಕುಟುಂಬ ಇಂಧನವನ್ನೇ ಸೆಳೆದುಕೊಂಡು ಶಾಕ್ ಕೊಟ್ಟಿದ್ದಾಯ್ತು.

ಬೆಂಗಳೂರು (ಜೂ. 05): ವಿಧಾನಸಭೆಯಲ್ಲಿ ಯಡಿಯೂರಪ್ಪನವರನ್ನು ವಿಶ್ವಾಸಮತದಲ್ಲಿ  ಸೋಲಿಸಿ ಇನ್ನೇನು ತನ್ನದೇ ಕೈಯಲ್ಲಿ ಕಾಂಗ್ರೆಸ್‌ನ ಸಾಮ್ರಾಜ್ಯ ಎಂಬ ಸಂಭ್ರಮದಲ್ಲಿದ್ದ ಡಿ ಕೆ ಶಿವಕುಮಾರ್ ಅವರಿಗೆ ದೇವೇಗೌಡರ ಕುಟುಂಬ ಇಂಧನವನ್ನೇ ಸೆಳೆದುಕೊಂಡು ಶಾಕ್ ಕೊಟ್ಟಿದ್ದಾಯ್ತು.

ಈಗ ದಿಲ್ಲಿಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಏನಕೇನ ‘ಡಿ ಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಬೇಡಿ, ಕೊಟ್ಟರೆ ಹೋಳಾಗೋದು ನಿಶ್ಚಿತ’ ಎಂದು ಕಿವಿ ಊದಲು ಆರಂಭಿಸಿದ್ದಾರೆ ಎಂಬ ಗುಸುಗುಸು ಇದೆ. ಹೀಗಾಗಿ ಶಿವಕುಮಾರ್ ಅವರಿಗೆ ಸದ್ಯ ಮಂತ್ರಿ ಸ್ಥಾನ ಸಿಕ್ಕು ಒಳ್ಳೆಯ ಖಾತೆ ದೊರೆತರೆ ಸಾಕು. ಉಳಿದದ್ದನ್ನು ಆಮೇಲೆ ನೋಡಿಕೊಳ್ಳೋಣ ಎಂದು ಅನಿಸಿದೆಯಂತೆ. ಕಾಂಗ್ರೆಸ್‌ನ ಹಳೆಯ ತಲೆಗಳು ಯಾವುದೇ ಕಾರಣಕ್ಕೂ ಡಿಕೆಶಿ ಕೈಯಲ್ಲಿ ಪಕ್ಷ ಕೊಡಬೇಡಿ ಎಂದು ಲಾಬಿ ನಡೆಸಿರುವ ವದಂತಿಗಳಿವೆ. ಇದಕ್ಕೆ ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಬೆಂಬಲವೂ ಇದೆ ಎಂಬ ಸುದ್ದಿಗಳಿವೆ. ಸಿದ್ದರಾಮಯ್ಯನವರಿಗೆ ಶಿವಕುಮಾರ್ ಅಧ್ಯಕ್ಷರಾದರೆ ತಮ್ಮ ಮಾತು ಕೇಳೋದಿಲ್ಲ ಎಂಬ ಅನುಮಾನ. 

ಹೀಗಾಗಿ ಅವರ ಮೊದಲ ಆಯ್ಕೆ ಎಸ್ ಆರ್ ಪಾಟೀಲ್ ಆದರೆ, ಎರಡನೇ ಆಯ್ಕೆ ಎಂ ಬಿ ಪಾಟೀಲ್. ಕೊನೆಗೆ ದೇಶಪಾಂಡೆ ಅಥವಾ ಎಚ್ ಕೆ ಪಾಟೀಲ್ ಹೆಸರಿಗೂ ಅವರು ಒಪ್ಪಬಹುದು. ಇನ್ನು ಉಪ ಮುಖ್ಯಮಂತ್ರಿಯಾಗಿರುವ ಪರಮೇಶ್ವರ್ ಅವರಿಗೆ ಶಿವಕುಮಾರ್ ದೋಸ್ತ್ ಹೌದಾದರೂ ಕೂಡ ಅಧ್ಯಕ್ಷರು ಸ್ವಲ್ಪ ಕಡಿಮೆ ಪವರ್‌ಫುಲ್ ಇರಲಿ ಎನ್ನುವ ಬಯಕೆ. ಇನ್ನು ಖರ್ಗೆ ಅವರಿಗೆ ಮುಂದಿನ ಲೋಕಸಭಾ ಚುನಾವಣೆ ಗೆಲ್ಲಲು ಯಾರಾದರೂ ಲಿಂಗಾಯತರನ್ನು ಅಧ್ಯಕ್ಷ ಮಾಡಿದರೆ ಒಳ್ಳೆಯದು ಎಂದು ಅನ್ನಿಸಿದೆ. ಯಾರನ್ನು ಕೆಪಿಸಿಸಿ ಗಾದಿಯಲ್ಲಿ ಕೂರಿಸುವುದು ಎನ್ನುವುದು ರಾಹುಲ್ ಗಾಂಧಿಗೂ ತಲೆ ನೋವಾಗಿದ್ದು, ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಕುದುರೆಗಾಗಿ ಶೋಧ ನಡೆಯುತ್ತಿದೆ.

ಕಳೆದ ಬಾರಿ ಅಧ್ಯಕ್ಷ ಸ್ಥಾನ ತಪ್ಪಿಸಿಕೊಂಡಾಗ ಶಿವಕುಮಾರ್ ನಾನು ಟೆನಿಸ್ ಆಡಲು ಹೋದೆ, ನಮ್ಮವರು ಫುಟ್‌ಬಾಲ್ ಆಡಿದರು ಎಂದು ಹೇಳಿಕೊಂಡಿದ್ದರು. ಹೀಗಾಗಿ ಈಗ ನಾನು ಚೆಸ್ ಆಡುತ್ತಿದ್ದೇನೆ ಎಂದು ಗತ್ತಿನಿಂದ ಹೇಳಿಕೊಳ್ಳುತ್ತಾರೆ. ನಿಜ, ಡಿಕೆಶಿಯವರಲ್ಲಿ ಈಗ ಅಪಾರ ತಾಳ್ಮೆಯನ್ನಂತೂ ಖಂಡಿತ ಗಮನಿಸಬಹುದು. 

 

-ಪ್ರಶಾಂತ್ ನಾತು, ಸುವರ್ನ ನ್ಯೂಸ್ ದೆಹಲಿ ಪ್ರತಿನಿಧಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ