2019ರ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ದೋಸ್ತಿ

First Published Jun 1, 2018, 6:14 PM IST
Highlights

'ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಕೇವಲ ವಿಧಾನಸೌಧಕ್ಕೆ ಮಾತ್ರ ಸೀಮಿತ..' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದ್ದರು. ಆರ್‌ಆರ್ ನಗರ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳಿಗೂ ಈ ಪಕ್ಷಗಳು ಮೈತ್ರಿ ಮುಂದುವರಿಯಲಿಲ್ಲ. ಆದರೀಗ ಲೋಕಸಭೆ ಚುನಾವಣೆಗೆ ಉಭಯ ಪಕ್ಷಗಳು ಮೈತ್ರಿಗೆ ಮುಂದಾಗಲಿವೆ, ಎಂದು ಕಾಂಗ್ರೆಸ್-ಜೆಡಿಎಸ್ ಸ್ಪಷ್ಟಪಡಿಸಿವೆ.

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಗೆ ಸರಕಾರ ರಚಿಸಲು ಅಗತ್ಯ ಬಹುಮತ ಬಾರದ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ನೊಂದಿಗೆ ಜೆಡಿಎಸ್ ಕೈ ಜೋಡಿಸಿದೆ. ಮೈತ್ರಿ ಸರಕಾರ ರಚನೆಯಾದ ನಂತರ ನಡೆಯುತ್ತಿರುವ ಆರ‌್‌ಆರ್ ನಗರ ಹಾಗೂ ಜಯನಗರ ಚುನಾವಣೆಗೆ ಈ ಮೈತ್ರಿ ಮುಂದುವರಿಯದೇ ಹೋದರೂ, ಮುಂಬರುವ ಲೋಕಸಭಾ ಚುನಾವಣೆಗೆ ಒಂದಾಗಿ ಸ್ಪರ್ಧಿಸಲಿದ್ದೇವೆ, ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಶುಕ್ರವಾರ ಘೋಷಿಸಿವೆ.

ಖಾತೆ ಹಂಚಿಕೆ ಹಾಗೂ ಸಂಪುಟ ವಿಸ್ತರಣೆ ಬಗ್ಗೆ ಉಭಯ ಪಕ್ಷಗಳು ಒಮ್ಮತಕ್ಕೆ ಬಂದಿದ್ದು, ಶೀಘ್ರದಲ್ಲಿಯೇ ಖಾತೆ ಹಂಚಿಕೆ ಕಸರತ್ತಿಗೆ ವಿದಾಯ ಹಾಡಲಾಗುವುದು. ಜೆಡಿಎಸ್ ಬಳಿ ಹಣಕಾಸು ಖಾತೆ ಇರಲಿದೆ, ಎಂದು ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಪತ್ರಿಕಾ ಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಈ ಗೋಷ್ಠಿಯಲ್ಲಿ ವೇಣುಗೋಪಾಲ್ ಜತೆಗಿದ್ದರು.

ಖಾತೆ ಹಂಚಿಕೆ ಬಗ್ಗೆ ಒಮ್ಮತಕ್ಕೆ ಬಂದಿರುವ ಉಭಯ ಪಕ್ಷಗಳು, ಸಮನ್ವಯ ಸಮತಿ ರಚನೆ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ನಿರ್ಧರಿಸಿದ್ದು, ಕುಮಾರಸ್ವಾಮಿ ಸರಕಾರ ಸದೃಢವಾಗಿರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಎಂದು ಹೇಳಿದರು.

ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರಕಾರದ ಅಂಗ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಗೊಂದಲ ತಕ್ಕಮಟ್ಟಿಗೆ ನಿವಾರಣೆಯಾದಂತೆ ಕಾಣಿಸುತ್ತಿದೆ.
 

click me!