ಭಿನ್ನಮತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಪ್ರಮುಖ ನಾಲ್ಕು ಮಂದಿಗೆ ಸಚಿವ ಸ್ಥಾನ ನೀಡಿ ಸರ್ಕಾರಕ್ಕೆ ಎದುರಾಗಿರುವ ಕಂಟಕವನ್ನು ಸದ್ಯದ ಮಟ್ಟಿಗೆ ನಿವಾರಿಸಿಕೊಳ್ಳಲು ರಾಜ್ಯ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು[ಸೆ.21]: ಸರ್ಕಾರ ಉಳಿಸಿಕೊಳ್ಳಲು ಮಿತ್ರ ಪಕ್ಷಗಳು ಕಡೆಯ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿವೆ. ಪರಿಷತ್ ಚುನಾವಣೆಗೂ ಮುನ್ನವೇ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಭಾನುವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಲಿದ್ದು ಕೈ ಪಾಲಿನ 6 ಸ್ಥಾನಗಳಲ್ಲಿ ಎರಡನ್ನು ಬಿಟ್ಟು ಉಳಿದ ನಾಲ್ಕನ್ನು ಭರ್ತಿ ಮಾಡಿಕೊಳ್ಳಲು ಸಮ್ಮತಿ ಸೂಚಿಸಲಿದ್ದಾರೆ ಎನ್ನಲಾಗಿದೆ.
ಭಿನ್ನಮತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಪ್ರಮುಖ ನಾಲ್ಕು ಮಂದಿಗೆ ಸಚಿವ ಸ್ಥಾನ ನೀಡಿ ಸರ್ಕಾರಕ್ಕೆ ಎದುರಾಗಿರುವ ಕಂಟಕವನ್ನು ಸದ್ಯದ ಮಟ್ಟಿಗೆ ನಿವಾರಿಸಿಕೊಳ್ಳಲು ರಾಜ್ಯ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸರ್ಕಾರ ಉಳಿಸಿಕೊಳ್ಳುವುದರ ಜೊತೆ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ತಡೆಯಲು ಸಂಪುಟ ವಿಸ್ತರಣೆ ಪ್ರಮುಖ ಅಸ್ತ್ರವಾಗಲಿದೆ.
ಮುನಿಸಿಕೊಂಡಿರುವ ಪ್ರಮುಖ ನಾಯಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ತಿರ್ಮಾನಿಸಲಾಗಿದ್ದು ಕೆ.ಸಿ. ವೇಣುಗೋಪಾಲ್ ಅವರು ಬೆಂಗಳೂರಿಗೆ ಬರುತ್ತಿರುವುದನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಚಿತಪಡಿಸಿದ್ದಾರೆ. ಆಪರೇಷನ್ ಕಮಲದ ಭೀತಿಯಿಂದಾಗಿ ಸಮಸ್ಯೆ ನಿವಾರಣೆಗಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಂಪುಟ ವಿಸ್ತರಣೆ ಸೂತ್ರಕ್ಕೆ ರಾಜ್ಯ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.