ಪ್ರಧಾನಿ ನರೇಂದ್ರ ಸರ್ಕಾರದ ಕೆಲಸ ತೃಪ್ತಿ ತಂದಿಲ್ಲ ಎಂದು ಪೇಜಾವರ ಶ್ರೀಗಳು ನೀಡಿದ್ದ ಹೇಳಿಕೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು 'ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ' ನೀಡಿ ಪ್ರತಿಕ್ರಿಯಿಸಿದ್ದಾರೆ ಎಂದು ವ್ಯಕ್ತಿಯೊಬ್ಬ ಫೋಟೋವೊಂದನ್ನು ತಿರುಚಿ ಪೊಸ್ಟ್ ಮಾಡಿದ್ದಾರೆ. ಅಲ್ಲದೇ ಅದರ ವಿರುದ್ಧ ಇದೀಗ ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಪ್ರಧಾನಿ ನರೇಂದ್ರ ಸರ್ಕಾರದ ಕೆಲಸ ತೃಪ್ತಿ ತಂದಿಲ್ಲ ಎಂದು ಪೇಜಾವರ ಶ್ರೀಗಳು ನೀಡಿದ್ದ ಹೇಳಿಕೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು 'ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ' ನೀಡಿ ಪ್ರತಿಕ್ರಿಯಿಸಿದ್ದಾರೆ ಎಂದು ವ್ಯಕ್ತಿಯೊಬ್ಬ ಫೋಟೋವೊಂದನ್ನು ತಿರುಚಿ ಪೊಸ್ಟ್ ಮಾಡಿದ್ದಾರೆ.
ಇದರ ವಿರುದ್ದ ಸಚಿವರು ಇದೀಗ ದೂರು ದಾಖಲಿಸಿದ್ದಾರೆ. 'ಪೇಜಾವರ ಶ್ರೀಗಳು ಒಬ್ಬ ಹುಚ್ಚರಿದ್ದಾರೆ. ಅವರು ಈ ಹೇಳಿಕೆ ಪರಿಣಾಮ ಎದುರಿಸಬೇಕಾಗುತ್ತದೆ,' ಎಂಬುದಾಗಿ ಹೆಗಡೆ ಹೇಳಿದ್ದಾರೆಂದು ಉಲ್ಲೇಖಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾಗಿತ್ತು.
ಇನ್ನೊಂದು ಪೋಸ್ಟ್ ನಲ್ಲಿ ಕೇಂದ್ರ ಸರ್ಕಾರದ ಹೊಸ ಮಂತ್ರಿ 'ಚಡ್ಡಿ ಪುಟ್ಗೋಸಿ ಮಂತ್ರಿ', 'ಕರ್ನಾಟಕದ ಭಯೋತ್ಪಾದಕ', 'ಕೇಂದ್ರ ಪುಟ್ಗೋಸಿ' ಎಂದು ಹೇಳಿ ಫೋಟೋ ಹಾಕಲಾಗಿತ್ತು. ಅಲ್ಲದೇ ಮತ್ತೊಂದು ಪೋಸ್ಟ್ನಲ್ಲಿ ಅನಂತ್ ಕುಮಾರ್ ಹೆಗಡೆ ಫೋಟೋವನ್ನು ಅವಮಾನಿಸುವಂತೆ ಪೋಸ್ಟ್ ಮಾಡಲಾಗಿತ್ತು.
ಈ ಎಲ್ಲ ಪೋಸ್ಟ್ಗಳ ವಿರುದ್ದ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾದ ಅನಂತ್ ಕುಮಾರ್ ಹೆಗಡೆ ಆಪ್ತ ಕಾರ್ಯದರ್ಶಿ ಸುರೇಶ್ ಗೋವಿಂದ್ ಶೆಟ್ಟಿ ಎನ್ನುವವರು ಶಿರಸಿ ಠಾಣೆಗೆ ದೂರು ನೀಡಿದ್ದಾರೆ. ಆದಿ ಉಡುಪಿ ಎನ್ನುವ ಫೇಸ್ ಬುಕ್ ಖಾತೆಯಲ್ಲಿ ಇಂಥ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಲಾಗಿದೆ.
ಅಲ್ಲದೇ ರಾಜೇಶ್ ಆದಿ ಉಡುಪಿ ಎನ್ನುವವರು ಕಳುಹಿಸಿದ ಪೋಸ್ಟರ್ ಗಳನ್ನು ಮಂಚೇಗೌಡ ಎನ್ನುವವರು ತಮ್ಮ ವಾಟ್ಸ್ ಆ್ಯಪ್ನ ಗ್ರೂಪ್ವೊಂದರಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಂಚೇಗೌಡ ಸರ್ಕಾರಿ ನೌಕರರಾಗಿದ್ದು, ಚುನಾಯಿತ ಜನಪ್ರತಿನಿಧಿಗಳ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ರವಾನಿಸಿದ್ದು, ಅಕ್ಷಮ್ಯ ಅಪರಾಧ. ಈ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.