ಹಳದಿ, ಕೆಂಪು ಬದಲು ತ್ರಿವರ್ಣ ನಾಡಧ್ವಜ: ಕನ್ನಡಪರರ ಆಕ್ರೋಶ

By Suvarna Web DeskFirst Published Feb 7, 2018, 11:43 AM IST
Highlights

ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಹಳದಿ ಕೆಂಪು ಬಾವುಟವನ್ನು ಬದಲಿಸುವ ಯಾವ ಪ್ರಯತ್ನವನ್ನು ಒಪ್ಪಿಕೊಳ್ಳುವುದಿಲ್ಲ. ಬೇರೆ ಬಣ್ಣಗಳನ್ನು ಈ ಧ್ವಜಕ್ಕೆ ಸೇರಿಸುವುದಕ್ಕೆ ಕನ್ನಡಿಗರ ಒಪ್ಪಿಗೆಯಿಲ್ಲ. ಅಂತಹ ಪ್ರಯತ್ನ ನಡೆದರೇ ಸರ್ಕಾರದ ಮೇಲೆ ಒತ್ತಡ ತರಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸುವುದಾಗಿ ಕನ್ನಡ ಸಂಘಟನೆಗಳು ಎಚ್ಚರಿಸಿವೆ.

ರಾಜ್ಯದ ಜನಮಾನಸದಲ್ಲಿ ಮನೆ ಮಾಡಿರುವ ಹಳದಿ-ಕೆಂಪು ಧ್ವಜವನ್ನು ಬದಲಿಸಿ ಮೂರು ಬಣ್ಣಗಳ ಧ್ವಜ ರೂಪಿಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಕನ್ನಡ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಧ್ವಜವನ್ನೇ ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾದರೆ ನಾಡಿನಾದ್ಯಂತ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿವೆ.

ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಹಳದಿ ಕೆಂಪು ಬಾವುಟವನ್ನು ಬದಲಿಸುವ ಯಾವ ಪ್ರಯತ್ನವನ್ನು ಒಪ್ಪಿಕೊಳ್ಳುವುದಿಲ್ಲ. ಬೇರೆ ಬಣ್ಣಗಳನ್ನು ಈ ಧ್ವಜಕ್ಕೆ ಸೇರಿಸುವುದಕ್ಕೆ ಕನ್ನಡಿಗರ ಒಪ್ಪಿಗೆಯಿಲ್ಲ. ಅಂತಹ ಪ್ರಯತ್ನ ನಡೆದರೇ ಸರ್ಕಾರದ ಮೇಲೆ ಒತ್ತಡ ತರಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸುವುದಾಗಿ ಕನ್ನಡ ಸಂಘಟನೆಗಳು ಎಚ್ಚರಿಸಿವೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರು, ಹಳದಿ, ಕೆಂಪು ಕನ್ನಡಿಗರ ಬಾವುಟ. ಈಗ ಧ್ವಜ ಸಮಿತಿ ಶಿಫಾರಸು ಮಾಡಿರುವ ಹಳದಿ, ಬಿಳಿ, ಕೆಂಪು ಬಣ್ಣದ ಬಾವುಟವನ್ನು ಸರ್ಕಾರ ಒಪ್ಪಲು ಬಿಡುವುದೇ ಇಲ್ಲ. ಸರ್ಕಾರಕ್ಕೆ ನಾಡ ಧ್ವಜದ ಬಣ್ಣ ಬದಲಾಯಿಸುವ ಅವಸರವೇನಿತ್ತು? ಶಿಫಾರಸು ಮಾಡಿರುವ ಧ್ವಜದ ಮಾದರಿ ಸರ್ಕಾರದ ಬಾವುಟವೇ ಹೊರತು ಕನ್ನಡಿಗರದಲ್ಲ. ಈ ಬಗ್ಗೆ ನಾಡಿನಾದ್ಯಂತ ಹೋರಾಟ ಖಚಿತ ಎಂದು ಎಚ್ಚರಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, ‘ಕನ್ನಡಿಗರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಹಳದಿ, ಕೆಂಪು ಬಣ್ಣದ ಬಾವುಟಕ್ಕೆ ಲಾಂಛನವೊಂದನ್ನು ಸೇರಿಸಿದರೆ ಒಳ್ಳೆಯದು. ಅದು ಬಿಟ್ಟು ಬೇರೆಯ ಬಣ್ಣಗಳನ್ನು ಸೇರಿಸುವುದು ಕನ್ನಡಿಗರ ಭಾವನೆಗೆ ಧಕ್ಕೆ ತರುವಂತಹದ್ದು. ಸರ್ಕಾರ ಅಂತಹ ಪ್ರಯತ್ನ ಮಾಡಿದರೆ ಒತ್ತಡ ತರುವಂತ ಕೆಲಸವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡಲಿದೆ’ ಎಂದಿದ್ದಾರೆ.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಅವರು, ‘ಮಾ.ರಾಮಮೂರ್ತಿ ಅವರು ಮಾಡಿದ ನಾಡಧ್ವಜವನ್ನು ಕನ್ನಡಿಗರು ಒಪ್ಪಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಬಾವುಟಕ್ಕೆ ಮನ್ನಣೆ ಇದ್ದು, ವಿಶ್ವಾದ್ಯಂತ ಕನ್ನಡಿಗರ ಬಳಕೆ ಮಾಡುತ್ತಿದ್ದಾರೆ. ಈಗ ಹಳದಿ, ಬಿಳಿ, ಕೆಂಪು ಬಣ್ಣದ ಬಾವುಟ ತರುವ ಅವಶ್ಯಕತೆ ಏನಿತ್ತು? ಇದು ಮಾ.ರಾಮಮೂರ್ತಿ ಅವರಿಗೆ ತೋರುತ್ತಿರುವ ಅಗೌರವ. ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಧ್ವಜ ಸಮಿತಿ ಶಿಫಾರಸು ಮಾಡಿರುವ ಬಾವುಟವನ್ನು ಒಪ್ಪಬಾರದು’ ಎಂದು ಆಗ್ರಹಿಸಿದ್ದಾರೆ.

ಕರವೇಯ ಮತ್ತೊಂದ ಬಣದ ಅಧ್ಯಕ್ಷ ಪ್ರವೀಣ್‌ಕುಮಾರ್‌ ಶೆಟ್ಟಿಅವರು, ‘ಹಿಂದಿನಿಂದಲೂ ಹಳದಿ, ಕೆಂಪು ಬಣ್ಣದ ಬಾವುಟವನ್ನೇ ಒಪ್ಪಿಕೊಂಡು ಬಂದಿದ್ದೇವೆ. ಮೂಲ ಬಾವುಟವನ್ನು ಬದಲಾವಣೆ ಮಾಡಲು ಒಪ್ಪುವುದಿಲ್ಲ. ಸರ್ಕಾರ ಧ್ವಜ ಸಮಿತಿ ವರದಿಯನ್ನು ಅಂತಿಮಗೊಳಿಸಬಾರದು. ಮೂಲ ಧ್ವಜವನ್ನು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ಸರ್ಕಾರದ ಪ್ರತ್ಯೇಕ ನಾಡಧ್ವಜದ ತೀರ್ಮಾನ ಸ್ವಾಗತಾರ್ಹ. ಆದರೆ, ಬಾವುಟ ಬದಲಿಸುವ ನಿರ್ಧಾರಕ್ಕೆ ನಮ್ಮ ವಿರೋಧವಿದೆ’ ಎಂದು ಹೇಳಿದ್ದಾರೆ.

‘ಕನ್ನಡ ಸಂಘಟನೆಗಳು, ಚಿತ್ರೋದ್ಯಮ, ಸಾಹಿತಿ ಬಳಗ ಸೇರಿದಂತೆ ನಾಡಿನ ಪ್ರತಿಯೊಂದು ಬಳಗವು ರಾಜಕೀಯ ಉದ್ದೇಶಕ್ಕಾಗಿ ಕನ್ನಡ ಧ್ವಜವನ್ನು ಬದಲಿಸುವ ಈ ಪ್ರಯತ್ನ ಸರಿಯಲ್ಲ. ಬೇಕಿದ್ದರೆ, ಪ್ರಚಲಿತದಲ್ಲಿರುವ ಧ್ವಜವನ್ನೇ ಬೇಕಿದ್ದರೆ ನಾಡಧ್ವಜವಾಗಿ ಕೇಂದ್ರಕ್ಕೆ ಶಿಫಾರಸು ಮಾಡಲಿ’ ಎಂದು ಒತ್ತಾಯಿಸಿದ್ದಾರೆ.

click me!