ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗಗಳಿಗೆ ಆನ್ಲೈನ್ ಮೂಲಕವೇ ಪ್ರವೇಶಾತಿ ನೀಡಿ, ಅಂಕಪಟ್ಟಿಗಳನ್ನೂ ಆನ್ಲೈನ್ನಲ್ಲೇ ವಿತರಿಸಲಾಗುವುದು. ಒಂದು ವೇಳೆ ನಕಲು ಪ್ರತಿ (ಡೂಪ್ಲಿಕೇಟ್) ಬೇಕಾದವರೂ ಆನ್ಲೈನ್ನಲ್ಲೇ ಡೌನ್ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಮೈಸೂರು (ಮಾ. 10): ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗಗಳಿಗೆ ಆನ್ಲೈನ್ ಮೂಲಕವೇ ಪ್ರವೇಶಾತಿ ನೀಡಿ, ಅಂಕಪಟ್ಟಿಗಳನ್ನೂ ಆನ್ಲೈನ್ನಲ್ಲೇ ವಿತರಿಸಲಾಗುವುದು. ಒಂದು ವೇಳೆ ನಕಲು ಪ್ರತಿ(ಡೂಪ್ಲಿಕೇಟ್) ಬೇಕಾದವರೂ ಆನ್ಲೈನ್ನಲ್ಲೇ ಡೌನ್ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಉನ್ನತ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ. ಅದರಲ್ಲಿ ಆನ್ಲೈನ್ ವ್ಯವಸ್ಥೆ ಕೂಡ ಒಂದು. ರಾಜ್ಯದ 226 ಕಾಲೇಜುಗಳ ಅಭಿವೃದ್ಧಿಗೆ .750 ಕೋಟಿ ಅನುದಾನ ನೀಡಲಾಗಿದೆ. ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದರ ಜತೆಗೆ ಅಧ್ಯಾಪಕರ ನೇಮಕಾತಿ, ಪ್ರಯೋಗಾಲಯ, ಶೌಚಾಲಯ ಮತ್ತಿತರ ಸೌಲಭ್ಯ ಕಲ್ಪಿಸಲಾಗುವುದು. ನನ್ನದು ಉನ್ನತ ಶಿಕ್ಷಣ ಖಾತೆಯಾದರೂ ಪಿಯುಸಿಯಿಂದಲೇ ಉನ್ನತ ಶಿಕ್ಷಣವನ್ನು ಬಲಪಡಿಸಲು ಇರಾದೆಯಿದೆ ಎಂದರು.
ವಿವಿಗಳು ಹಳ್ಳಿಗಳನ್ನು ದತ್ತು ತೆಗೆದುಕೊಳ್ಳಬೇಕು:
ಪ್ರತಿ ವಿಶ್ವವಿದ್ಯಾನಿಲಯಗಳು ತಲಾ 5 ಹಳ್ಳಿಗಳನ್ನು ದತ್ತು ತೆಗೆದುಕೊಳ್ಳಬೇಕು. ಆ ಊರಿನ ಜನರಿಗೆ ಶಿಕ್ಷಣದ ಮಹತ್ವ ನೀಡಿ ಉನ್ನತ ಶಿಕ್ಷಣ ಪೂರೈಸಲು ಪ್ರೋತ್ಸಾಹ ನೀಡಬೇಕು. ಕೆಲವು ವಿವಿಗಳಲ್ಲಿ ಕುಲಪತಿಗಳು ಮತ್ತು ಕುಲಸಚಿವರ ನಡುವೆಯೇ ಗಲಾಟೆ ನಡೆಯುತ್ತದೆ. ಒಬ್ಬರನ್ನು ಸರಿಪಡಿಸಲು ಹೋದರೆ ಮತ್ತೊಬ್ಬರು ಮಿತಿ ಮೀರುತ್ತಾರೆ. ಪ್ರತಿಯೊಬ್ಬ ಅಧ್ಯಾಪಕರು ಶ್ರೇಷ್ಠ ಗುರುಗಳಾಗಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.