
ಬೆಂಗಳೂರು: ತಾಂಡಾ, ಹಾಡಿಗಳಂಥ ಪ್ರದೇಶಗಳಲ್ಲಿ ವಾಸಿಸುವವನನ್ನೇ ಮನೆ ಮಾಲೀಕನನ್ನಾಗಿಸುವ ರಾಜ್ಯ ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ ಅಗತ್ಯತೆ ಮನವರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ಸದನ ಆರಂಭವಾಗುತ್ತಿದ್ದಂತೆ ಪಕ್ಷೇತರ ಸದಸ್ಯ ಪಿ.ರಾಜೀವ್ ನಿಲುವಳಿ ಸೂಚನೆ ಮಂಡಿಸಲು ಯತ್ನಿಸಿದರು. ನಂತರ ಸ್ಪೀಕರ್ ಅನುಮತಿ ಮೇರೆಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಅನೇಕ ದಶಕಗಳಿಂದ ನೆಲೆ ಇಲ್ಲದಂತಿರುವ ದಲಿತರಿಗೆ, ಹಿಂದುಳಿ ದವರಿಗೆ ಸೂರು ಒದಗಿಸಲು ಇಡೀ ಸದನ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಒಪ್ಪಿದೆ. ಆದರೆ ತಿದ್ದುಪಡಿ ವಿಧೇಯಕವನ್ನು ರಾಷ್ಟ್ರಪತಿ ಅವರ ಒಪ್ಪಿಗೆಗೆ ಹೋಗುವಂತೆ ಮಾಡಿರುವುದು ಹುನ್ನಾರವಾಗಿದೆ ಎಂದು ದೂರಿದರು.
ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ ಶಿವ ಮೂರ್ತಿ ನಾಯಕ್, ಎರಡೂ ಸದನಗಳೂ ಒಪ್ಪಿಗೆ ನೀಡಿದ ನಂತರ ಅದನ್ನು ಆಡ್ವೋಕೇಟ್ ಜನರಲ್ಗೆ ಕಳುಹಿಸುವ ಅಗತ್ಯವೇನಿತ್ತು. ಇದು ಕೆಲವರು ನಡೆಸಿರುವ ಒಳ ಸಂಚು ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಟಿ.ಬಿ.ಜಯ ಚಂದ್ರ, ಇದರಲ್ಲಿ ಹುನ್ನಾರವೂ ಇಲ್ಲ. ಸಂಚೂ ಇಲ್ಲ. ಅ ಪದಗಳ ಬಳಕೆ ಬೇಡ. ಇದರಲ್ಲಿ ಕೆಲವು ಕಾನೂನು ತೊಡಕು ಇತ್ತು. ಇದನ್ನು ರೂಪಿಸುವಾಗಲೇ ಅದನ್ನು ಗುರುತಿಸಲಾಗಿತ್ತು. ಆದ್ದರಿಂದ ಅಡ್ವೋಕೇಟ್ ಜನರಲ್ ಅವರ ಸಲಹೆ ಕೇಳಲಾಗಿದೆ ಎಂದರು. ಆಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಇದು ಶತಮಾನದ ಸಮಸ್ಯೆ. ಇದನ್ನು ಪರಿಹರಿ ಸಲೆಂದೇ ಸರ್ಕಾರ ವಿಧೇಯಕವನ್ನು ತಂದಿದೆ. ಇದರಲ್ಲಿ ಯಾವ ಹುನ್ನಾರವೂ ಇಲ್ಲ. ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಒಪ್ಪಿಗೆ ಸೂಚಿಸುವಂತೆ ವಿನಂತಿಸಲಾಗುವುದು' ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.