
ಮೈಸೂರು(ಜು.29): ವೀರಶೈವರು, ಲಿಂಗಾಯತರು ಎಲ್ಲರೂ ಒಟ್ಟಿಗೆ ಬಂದರೆ ಸ್ವತಂತ್ರ ಧರ್ಮದ ಬಗ್ಗೆ ರಾಜ್ಯ ಸರ್ಕಾರ ಪರಿಗಣಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ನಾವು ಲಿಂಗಾಯತ ಧರ್ಮ ಮಾಡಲು ಹೇಳಿಲ್ಲ, ಪ್ರತಿಪಾದಿಸಿಲ್ಲ. ವೀರಶೈವ ಮಹಾಸಭಾದವರು ಲಿಂಗಾಯತ ಸ್ವತಂತ್ರ ಧರ್ಮ ಮಾಡಲು ಮನವಿ ನೀಡಿದ್ದಾರೆ. ಮಾತೆ ಮಹಾದೇವಿ ಅವರೂ ಪತ್ರವೊಂದನ್ನು ನೀಡಿದ್ದಾರೆ. ಹೀಗಾಗಿ, ನಾನು ಎಲ್ಲರೂ ಒಟ್ಟಾಗಿ ಬನ್ನಿ, ಅದನ್ನು ಸರ್ಕಾರ ಪರಿಗಣಿಸಲಿದೆ’ ಎಂದು ಹೇಳಿರುವುದಾಗಿ ಸ್ಪಷ್ಟಪಡಿಸಿದರು.
ನಾನು ತಂಡ ರಚಿಸಿಲ್ಲ:
‘ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಪ್ಪಿ ಸಹಿ ಮಾಡಿರುವ ಪತ್ರ ಕಳುಹಿಸಿರುವ ವಿಚಾರವನ್ನು ಕೆ.ಎಸ್.ಈಶ್ವರಪ್ಪ ಅವರೇ ಹೇಳಿದ್ದಾರೆ. ಲಿಂಗಾಯತ ಧರ್ಮದ ವಿಚಾರದಲ್ಲಿ 5ಜನ ಸಚಿವರ ತಂಡವನ್ನು ನಾನು ರಚಿಸಿಲ್ಲ. ಅವರೆಲ್ಲ ಸೇರಿಕೊಂಡು ಹೇಳಿಕೆ ನೀಡಿದ್ದಾರಷ್ಟೇ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಮಾಡುವ ಸಂಬಂಧ ನಾವು ಇನ್ನೂ ಏನೂ ಮಾಡಿಲ್ಲ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂಬುದನ್ನು ಇನ್ನೂ ನೋಡಿಲ್ಲ. ನೋಡಲೂ ಆರಂಭಿಸಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಮಾಜ ಒಡೆಯುವ ಕೆಲಸ ಬಿಜೆಪಿ ಮಾಡುತ್ತಿದೆ. ನಾವು ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿದ್ದೇವೆ. ಅವರು ಮಾಡಿದ್ದನ್ನು ನಮಗೆ ಹೇಳಲು ಆರಂಭಿಸಿದ್ದಾರೆ. ಸನಾತನ ಧರ್ಮದಿಂದ ಲಿಂಗಾಯತರು ಹೊರಗೆ ಹೋಗಿಬಿಡುತ್ತಾರೆಂಬ ಭಯ ಬಿಜೆಪಿಯವರಿಗೆ ಇರಬೇಕು. ಹೀಗಾಗಿಯೇ ಸರ್ಕಾರದ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಲಿಂಗಾಯತ ಸ್ವತಂತ್ರ ಧರ್ಮ ಮಾಡುವ ಸಂಬಂಧ ನಾವು ಇನ್ನೂ ಏನೂ ಮಾಡಿಲ್ಲ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂಬುದನ್ನು ಇನ್ನೂ ನೋಡಿಲ್ಲ. ನೋಡಲೂ ಆರಂಭಿಸಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.