
ಚಾಮರಾಜನಗರ : ಬಿಜೆಪಿಯದು ಕೋಮುವಾದದ ಅಜೆಂಡಾ. ನಮ್ಮ ಸರ್ಕಾರದ್ದು ಅಭಿವೃದ್ಧಿಯ ಅಜೆಂಡಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರು ಜೈಲಿಗೆ ಹೋಗಿ ಬಂದ ಯಡಿಯೂರಪ್ಪ, ಮಾಜಿ ಸಚಿವರಾದ ಕೃಷ್ಣಯ್ಯ ಶೆಟ್ಟಿ, ಹಾಲಪ್ಪ, ಕಟ್ಟಾಸುಬ್ರಮಣ್ಯ ನಾಯ್ಡು ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರು ರಾಜ್ಯಕ್ಕೆ ಬಂದಾಗ ಅಭಿವೃದ್ಧಿ ಬಗ್ಗೆ ಮಾತನಾಡುವುದೇ ಇಲ್ಲ, ಕೇವಲ ಟೀಕೆ ಮಾಡಿ ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆಗೂ ಮುನ್ನಾ ಪ್ರಣಾಳಿಕೆಯಲ್ಲಿ ನಾವು 165 ಭರವಸೆ ಕೊಟ್ಟಿದ್ದೆವು. ಅವುಗಳಲ್ಲಿ 158 ಭರವಸೆ ಈಡೇರಿಸಿದ್ದೇವೆ. ಬಿಜೆಪಿಯವರು ನಮ್ಮ ಸರ್ಕಾರ ‘ಟೇಕ್ ಆಫ್’ ಆಗಿಲ್ಲ ಎಂದು ಹೇಳುತ್ತಿರುತ್ತಾರೆ. ನಾನು ಅವರಿಗೆ ‘ಟೇಕ್ ಆಫ್’ ಆಗೋಕೆ ಸರ್ಕಾರ ವಿಮಾನ ಅಲ್ಲ ಎಂದು ಹೇಳಿದ್ದೇನೆ. ಆದರೂ, ಆ ರೀತಿ ಹೇಳುವುದು ನಿಲ್ಲಿಸಿಲ್ಲ ಎಂದು ಸಿಎಂ ಬಿಜೆಪಿ ಕಾಲೆಳೆದರು.
ಅಧಿಕಾರ ಹೋಗುತ್ತದೆ ಎಂಬ ಭಯದಿಂದ ಯಡಿಯೂರಪ್ಪ ಚಾಮರಾಜನಗರಕ್ಕೆ ಬಂದಿರಲಿಲ್ಲ. ಅವರು ಲಂಚ ಹೊಡೆದು ಅಧಿಕಾರ ಕಳೆದುಕೊಂಡರು. ಇಲ್ಲಿಗೆ ಬಂದಿದ್ದರೆ ಕುರ್ಚಿ ಉಳಿಯುತ್ತಿತ್ತೇನೋ? ಆದರೆ, ನಾನು 9 ಬಾರಿ ಬಂದಿದ್ದೇನೆ. ಈ ರೀತಿ ಬಂದಿದ್ದರಿಂದಲೇ ನನ್ನ ಕುರ್ಚಿ ಮತ್ತಷ್ಟುಭದ್ರವಾಯಿತು ಎಂದು ಸಿಎಂ ಹೇಳಿದರು.
ಚೌಕಿದಾರ್ ಯಾಕೆ ಕ್ರಮ ಕೈಗೊಳ್ಳಲಿಲ್ಲ; ಸಿಎಂ
ದೇಶವನ್ನು ಚೌಕಿದಾರನಾಗಿ ಕಾಯುತ್ತೇನೆ ಎನ್ನುತ್ತಿದ್ದ ಪ್ರಧಾನಿ ಮೋದಿ ಅವರು ನೀರವ್ ಮೋದಿ .22 ಸಾವಿರ ಕೋಟಿ, ವಿಜಯ್ ಮಲ್ಯ .9 ಕೋಟಿ ಲೂಟಿ ಮಾಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಚ್ಛೇ ದಿನ್ ಆಯೇಗಾ ಎಂದು ಭಾಷಣ ಮಾಡುತ್ತಾರೆ. ಅಚ್ಛೇ ದಿನ್ ಬಂದಿರೋದು ಅದಾನಿ, ಅಂಬಾನಿ, ಅಮಿತ್ ಶಾ ಮಗನಿಗೆ ಮಾತ್ರ. ಬಿಜೆಪಿಯವರಿಗೆ ಎರಡು ನಾಲಿಗೆ ಇದೆ. ಅವರು ಹೇಳೋದೇ ಒಂದು, ಮಾಡೋದು ಇನ್ನೊಂದು ಎಂದು ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.