ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದ್ದು, ಐದು ವಿಭಾಗ ಗಳಲ್ಲಿ 41 ಮಂದಿಯ ಹೆಸರು ಅಂತಿಮ ಸುತ್ತಿಗೆ ಆಯ್ಕೆಯಾಗಿದೆ. ಮೈಕ್ರೋಲ್ಯಾಂಡ್ನ ಸ್ಥಾಪಕ ಅಧ್ಯಕ್ಷ ಪ್ರದೀಪ್ ಕರ್ ನೇತೃತ್ವದ ವಿವಿಧ ಕ್ಷೇತ್ರಗಳ 23 ತಜ್ಞರ ಸಮಿತಿಯು 41 ಜನರ ಅಂತಿಮ ಪಟ್ಟಿಯಲ್ಲಿ 5 ಮಂದಿ ವಿಜೇತರ ಹೆಸರನ್ನು ಘೋಷಿಸಲಿದೆ
ಬೆಂಗಳೂರು:‘ನಮ್ಮ ಬೆಂಗಳೂರು ಪ್ರತಿಷ್ಠಾನ’ದ 9ನೇ ಆವೃತ್ತಿಯ ‘ನಮ್ಮ ಬೆಂಗಳೂರು ಪ್ರಶಸ್ತಿ’ ಪ್ರದಾನ ಸಮಾರಂಭವು ಇಂದು ಸಂಜೆ 4.30ಕ್ಕೆ ಜಯನಗರದ ಎನ್ಎಂಕೆಆರ್ವಿ ಕಾಲೇಜಿನ ಮಂಗಳಾ ಆಡಿಟೋರಿಯಂನಲ್ಲಿ ಜರುಗಲಿದೆ. ಈ ಬಾರಿ ಪ್ರತಿ ಷ್ಠಾನವು ಬೆಂಗಳೂರು ನಗರದ ಪುನರುಜ್ಜಿವನಕ್ಕಾಗಿ ತೊಡಗಿಸಿರುಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದ್ದು, ಐದು ವಿಭಾಗ ಗಳಲ್ಲಿ 41 ಮಂದಿಯ ಹೆಸರು ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.
ಮೈಕ್ರೋಲ್ಯಾಂಡ್ನ ಸ್ಥಾಪಕ ಅಧ್ಯಕ್ಷ ಪ್ರದೀಪ್ ಕರ್ ನೇತೃತ್ವದ ವಿವಿಧ ಕ್ಷೇತ್ರಗಳ 23 ತಜ್ಞರ ಸಮಿತಿಯು 41 ಜನರ ಅಂತಿಮ ಪಟ್ಟಿಯಲ್ಲಿ 5 ಮಂದಿ ವಿಜೇತರ ಹೆಸರನ್ನು ಘೋಷಿಸಲಿದೆ. ಬಳಿಕ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ನಿವೃತ್ತ ನ್ಯಾಯಮೂರ್ತಿ ಸ್ವತಂತ್ರ ಕುಮಾರ್, ಗೌರವ ಅತಿಥಿಯಾಗಿ ನಾಯಕ ನಟ ಗಣೇಶ್, ನಟಿ ತಾರಾ ಅನುರಾಧಾ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರಲಿದ್ದಾರೆ.
ವರ್ಷದ ನಾಗರಿಕ, ವರ್ಷದ ಮಾಧ್ಯಮ ವ್ಯಕ್ತಿ, ವರ್ಷದ ಸರಕಾರಿ ಉದ್ಯೋಗಿ, ವರ್ಷದ ಸಾಮಾಜಿಕ ಉದ್ಯಮಿ ಹಾಗೂ ವರ್ಷದ ಉದಯೋನ್ಮುಖ ತಾರೆ ಈ ಐದು ವಿಭಾಗಗಳಿಗೆ ಸಾವಿರಾರು ನಾಮ ನಿರ್ದೇಶನಗಳು ಬಂದಿದ್ದು, ಈ ಪೈಕಿ ಪ್ರತಿ ವಿಭಾಗಗಳಲ್ಲಿ ತಲಾ 7ರಿಂದ 10 ಮಂದಿಯಂತೆ ಒಟ್ಟು 41 ಮಂದಿ ಹೆಸರು ಅಂತಿಮವಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ತಜ್ಞರು ಅಂತಿಮಗೊಳಿಸುವ 5 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಐದು ವಿಭಾಗಗಳಲ್ಲದೆ ಬೆಂಗಳೂರಿಗೆ ವೈಶಿಷ್ಟ್ಯಪೂರ್ಣ ಸೇವೆ ಸಲ್ಲಿಸಿದ ಸಾಧಕರೊಬ್ಬರಿಗೆ ‘ ವರ್ಷದ ನಮ್ಮ ಬೆಂಗಳೂರಿಗ’ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುವುದು. ಅಂತೆಯೇ ಆಯ್ದ ಕೆಲವು ನಾಗರಿಕ ಗುಂಪುಗಳನ್ನು ‘ನಮ್ಮ ಬೆಂಗಳೂರು ಚಾಂಪಿಯನ್ಸ್’ ಎಂದು ಸನ್ಮಾನಿಸುವುದರ ಜತೆಗೆ ಪ್ರತಿ ಗುಂಪಿಗೂ ಸಮಾಜಮುಖಿ ಕಾರ್ಯಗಳಿಗಾಗಿ 1 ಲಕ್ಷ ರು. ನೀಡಲಾಗುವುದು.
ಪ್ರಶಸ್ತಿ ಉದ್ದೇಶ:
ಬೆಂಗಳೂರನ್ನು ಬದುಕಲು ಯೋಗ್ಯ ವಾಗಿಸುವ ಸಹನೀಯ ಸ್ಥಳವನ್ನಾಗಿಸಲು ಅಪರಿಮಿತವಾಗಿ ದುಡಿಯುತ್ತಿರುವ ವ್ಯಕ್ತಿಗಳನ್ನು ಗುರುತಿಸಲು ನಮ್ಮ ಬೆಂಗಳೂರು ಪ್ರತಿಷ್ಠಾನ ನಮ್ಮ ಬೆಂಗಳೂರು ಪ್ರಶಸ್ತಿಗಳನ್ನು ನೀಡುತ್ತಿದೆ. ನಗರದ ನಿಜವಾದ ಹೀರೋ ಗಳಿಗೆ ಜನರು ಈ ಪ್ರಶಸ್ತಿಗಳ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಅಂತೆಯೆ ಈ ಹೀರೋಗಳಿಂದ ಪ್ರೇರಣೆ ಪಡೆದು ಬೆಂಗಳೂರಿನ ಉಜ್ವಲ ಭವಿಷ್ಯದತ್ತ ಕೆಲಸ ಮಾಡಲು ಮುಂದಾಗುವಂತೆ ಇದು ಮಾಡುತ್ತದೆ.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹುಟ್ಟು ಹಾಕಿದ ಸಂಸ್ಥೆ ನಮ್ಮ ಬೆಂಗಳೂರು ಪ್ರತಿಷ್ಠಾನ. ಅವರ ಪೋಷಣೆಯಲ್ಲಿಯೇ ಪ್ರತಿಷ್ಠಾನ ಮುನ್ನಡೆ ಯುತ್ತಿದೆ. ಬೆಂಗಳೂರಿಗೆ ಯೋಜಿತ ಮೂಲ ಸೌಕರ್ಯ, ಅತ್ಯುತ್ತಮ ನೆರೆಹೊರೆಯ ಸಮುದಾಯವನ್ನು ಬೆಳೆಸುವುದು ಮತ್ತು ನಾಗರಿಕ ಕೇಂದ್ರಿತ ಆಡಳಿತ ಕ್ರಮಗಳೊಂದಿಗೆ ಈ ನಗರವನ್ನು ಒಂದು ಮಾದರಿ ನಗರವನ್ನಾಗಿ ಬೆಳೆಸುವ ಆಶಯವನ್ನು ಪ್ರತಿಷ್ಠಾನ ಹೊಂದಿದೆ. ಪ್ರತಿಷ್ಠಾನ ಜನರ ಧ್ವನಿಯಾಗಲು, ಬೆಂಗಳೂರಿನಲ್ಲಿ ಆ ಧ್ವನಿ ಕೇಳುವಂತಾಗಲು ಮತ್ತು ಬೆಂಗಳೂರನ್ನು ನಿಜಾರ್ಥದಲ್ಲಿ ಜಾಗತಿಕ ನಗರವನ್ನಾಗಿ ಬೆಳೆಸುವ ಗುರಿ ಹೊಂದಿದೆ.