ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿನ್ನೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿಗೆ ಒಳಗೊಳಗೆ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು :ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿನ್ನೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿಗೆ ಒಳಗೊಳಗೆ ಅಸಮಾಧಾನ ಹೊರಹಾಕಿದ್ದಾರೆ.
ರೈತರ ಸಾಲಮನ್ನಾಗೆ ತಾವು ಕೈಗೊಂಡಿರುವ ನಿರ್ಧಾರಕ್ಕೆ ಮಿತ್ರ ಪಕ್ಷ ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಲ್ಲಿದ್ದರು. ಆದರೆ ಸಮಿತಿಯಲ್ಲಿ ಕುಮಾರಸ್ವಾಮಿ ಲೆಕ್ಕಾಚಾರವನ್ನು ಸಂಪೂರ್ಣವಾಗಿ ತಲೆಕೆಳಗು ಮಾಡಲಾಗಿದೆ.
ರೈತರ ಸಾಲಮನ್ನಾ ಕ್ರೆಡಿಟ್ ಜೆಡಿಎಸ್, ಸಿಎಂ ಕುಮಾರಸ್ವಾಮಿಗೆ ಮಾತ್ರ ಸಿಗದಿರಲು ಕಾಂಗ್ರೆಸ್ ತಂತ್ರ ರೂಪಿಸಿದ್ದು, ಕಾಮನ್ ಮಿನಿಮಮ್ ಪ್ರೊಗ್ರಾಮ್ ಮೂಲಕ ರೈತರ ಸಾಲಮನ್ನಾ ಪ್ರಸ್ತಾಪ ಬರಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಮೂಲಕ ರೈತರ ಸಾಲಮನ್ನಾ ವಿಚಾರದಲ್ಲಿ ಕಾಂಗ್ರೆಸ್ ಗೂ ಕೂಡ ಕ್ರೆಡಿಟ್ ದೊರಕಿಸಿಕೊಳ್ಳುವ ಪ್ಲಾನ್ ಮಾಡಿದ್ದಾರೆ. ಡ್ರಾಫ್ಟ್ ರಚಿಸುವ ಕಮಿಟಿ ಕೈಯಲ್ಲಿ ರೈತರ ಸಾಲಮನ್ನಾ ವಿಚಾರವನ್ನು ಸಮನ್ವಯ ಸಮಿತಿ ಇರಿಸಿದೆ.
ಸಮಿತಿಯಲ್ಲಿ ಮೂವರು ಕಾಂಗ್ರೆಸ್ ಸದಸ್ಯರು ಇರುವುದರಿಂದ ಕಾಂಗ್ರೆಸ್ ಗೂ ಕ್ರೆಡಿಟ್ ದೊರೆಯಲಿದೆ ಎನ್ನುವುದು ಸಿದ್ದರಾಮಯ್ಯ ತಂತ್ರಗಾರಿಕೆಯಾಗಿದೆ. ಜೆಡಿಎಸ್ ಪ್ರಣಾಳಿಕೆಯಂತೆ ಸಾಲಮನ್ನಾ ಮಾಡದೇ, ಕಾಮನ್ ಮಿನಿಮಮ್ ಪ್ರೊಗ್ರಾಮ್ ಸಮಿತಿ ನೀಡುವ ವರದಿಯಂತೆ ರೈತರ ಸಾಲಮನ್ನಾ ಮಾಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ.
ಇನ್ನು ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿಯೂ ಕೂಡ ಮುಖ್ಯಮಂತ್ರಿಗೆ ಕಾಂಗ್ರೆಸ್ ಅಧಿಕಾರ ನೀಡಿಲ್ಲ. ಅಲ್ಲದೇ ರೇವಣ್ಣ ವಿರುದ್ಧವೂ ಕೂಡ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ಮೈತ್ರಿ ಸರ್ಕಾರದಲ್ಲಿ ಒಳಗೊಳಗೆ ಕಾಲೆಳೆಯುವ ಕೆಲಸಕ್ಕೆ ಸಿಎಂ ಬೇಸರ ವ್ಯಕ್ತಪಡಿಸಿದ್ದು, ಹೀಗೆ ಆದರೆ ನಾವು ಬರ್ಬಾದ್ ಆಗಿ ಹೋಗ್ತೇವೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.